ಕೊರೊನಾ ಸೋಂಕು: ಮದುವೆಯ ದುಂದುವೆಚ್ಚ ತಡೆಯುವ ಹೊಸ ಸಂಪ್ರದಾಯಕ್ಕೆ ಮುನ್ನುಡಿ!

- ವೆಂ.ಸುನೀಲ್‌ ಕುಮಾರ್‌, ಕೋಲಾರ ಕೊರೊನಾದಿಂದಾಗಿ ವಧು-ವರರ ಕುಟುಂಬಗಳಿಗೆ ಸಂದರ್ಭದಲ್ಲಿ ಆಗುತ್ತಿದ್ದ ದುಂದು ವೆಚ್ಚಗಳಿಗೆ ಕಡಿವಾಣ ಬಿದ್ದಿದ್ದು, ಮನೆಗಳಲ್ಲಿಯೇ ಮದುವೆಯಾಗುತ್ತಿರುವುದು ಎರಡೂ ಕುಟುಂಬಗಳಿಗೆ ಲಕ್ಷಾಂತರ ರೂಪಾಯಿ ಉಳಿಸಿದೆ. ಆದರೆ, ಮದುವೆಯನ್ನೇ ನಂಬಿರುವ ಸಾವಿರಾರು ಜನರಿಗೆ ಇದರಿಂದ ಭಾರಿ ನಷ್ಟವಾಗಿದೆ. ವೈರಸ್‌ ಹಿನ್ನೆಲೆ ಸಾಮಾಜಿಕ ಅಂತರಕ್ಕಾಗಿ ಕಲ್ಯಾಣ ಮಂಟಪ, ದೇವಾಲಯ, ಮಸೀದಿ, ಚರ್ಚ್‌ಗಳಲ್ಲಿ ಮದುವೆಗೆ ಅವಕಾಶವಿಲ್ಲ. ಕೇವಲ 10 ಮಂದಿಯೊಂದಿಗೆ ಮದುವೆ ಮಾಡಿಕೊಳ್ಳಲು ಅನುಮತಿ ನೀಡಿರುವುದು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗಿದೆ. ಸರಳ ವಿವಾಹಗಳಿಂದ ಕಲ್ಯಾಣ ಮಂಪಟಗಳಿಗೆ ಸಾವಿರಾರು ಬಾಡಿಗೆ, ವಾದ್ಯಗೋಷ್ಠಿ, ಸಾವಿರಾರು ಜನರಿಗೆ ಅಡುಗೆ, ಡೆಕೊರೇಷನ್‌, ಪಾತ್ರೆ-ಪೆಂಡಾಲ್‌, ಫೋಟೊ- ವಿಡಿಯೊ ಚಿತ್ರೀಕರಣ, ಶಾಮಿಯಾನ ಇನ್ನಿತರ ಹಲವು ವೆಚ್ಚಗಳು ಈಗಿಲ್ಲವಾಗಿವೆ. ಇದು ಸಾಲ ಸೋಲ ಮಾಡಿ ಮದುವೆ ಮಾಡುತ್ತಿದ್ದವರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜತೆಗೆ ಲಕ್ಷಾಂತರ ರೂ. ವೆಚ್ಚ ಮಾಡಬೇಕಿದ್ದ ಚಿನ್ನ, ಜವಳಿ ಖರೀದಿಗೂ ತಡೆ ಬಿದ್ದಿದೆ. ಮದುವೆ ನಿಗದಿಯಾದ ಬಳಿಕ ಲಾಕ್‌ಡೌನ ಆದರೂ ಮದುವೆಗೆಳು ರದ್ದಾಗಿಲ್ಲ. ಇಲ್ಲವೇ ಮುಂದೂಡಿಕೆಯೂ ಆಗಿಲ್ಲ. ಬದಲಿಗೆ, ಅತ್ಯಂತ ಸರಳವಾಗಿ ಮದುವೆ ಶಾಸ್ತ್ರ ಮುಗಿಸಲಾಗಿದೆ. ತಮ್ಮ ಪುತ್ರನ ಮದುವೆಯನ್ನು ಸರಳವಾಗಿ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಈ ಮದುವೆಗೆ ವೆಚ್ಚ ಮಾಡಲು ಉದ್ದೇಶಿಸಿದ್ದ ಅಷ್ಟೂ ಹಣದಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿನ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಕಿಟ್‌ ನೀಡುವುದಾಗಿ ಘೋಷಿಸಿಸುವ ಮೂಲಕ ಗಮನ ಸೆಳೆದಿದ್ದಾರೆ. ಮಾದರಿಯಾಗುತಿದ್ದಾರೆ ಮಧುಮಕ್ಕಳು ಮದುವೆಗೆಂದು ಕೂಡಿಟ್ಟಿದ್ದ ಹಣದಲ್ಲಿ ನಿರ್ಗತಿಕರಿಗೆ ನೆರವಾದ ಪ್ರಕರಣಗಳೂ ವರದಿಯಾಗಿವೆ. ಇತ್ತೀಚೆಗೆ ಚಾಮರಾಜನಗರದಲ್ಲಿ ಸರಳವಾಗಿ ಮಾಡಿಕೊಂಡಿರುವ ನವದಂಪತಿ ಮದುವೆಗೆ ಆಗುತ್ತಿದ್ದ ಖರ್ಚನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದ ಚಂದ್ರಶೇಖರಮೂರ್ತಿ, ಚಾಮರಾಜನಗರ ತಾಲೂಕಿನ ಹರವೆ ಗ್ರಾಮದ ಮೇಘನಾ ಸರಳವಾಗಿ ವಿವಾಹವಾಗಿ ಕೇಂದ್ರ, ರಾಜ್ಯ ಸರಕಾರಗಳ ಕೋವಿಡ್‌ ನಿಧಿಗೆ ದೇಣಿಗೆ ನೀಡಿದ್ದಾರೆ. ಪೋಷಕರಿಗೆ ತಪ್ಪಿದ ತಲೆಬಿಸಿ ಮದುವೆ ಸರಳವಾಗಿ ಆಗುತ್ತದೆ ಎಂಬ ಕೊರಗು ಬಿಟ್ಟರೆ ವಧು-ವರರ ಪೋಷಕರಲ್ಲಿ ಒಂದು ರೀತಿಯ ಸಮಾಧಾನವಿದೆ. ಸಂಬಂಧಿಕರಿಗೆ ಪತ್ರಿಕೆ ಹಂಚುವುದು, ಹೆಣ್ಣು ಮಕ್ಕಳಿಗೆ ಬಟ್ಟೆ ಕೊಡಿಸುವುದು, ಮದುವೆಗೆ ಬಂದವರನ್ನು ಗೌರವಾದರಗಳಿಂದ ನೋಡಿಕೊಳ್ಳುವುದು ಮುಂತಾದ ತಲೆಬಿಸಿ ಕೆಲಸಗಳು ತಪ್ಪಿರುವುದು ಪೋಷಕರನ್ನು ನಿರಾಳರನ್ನಾಗಿಸಿದೆ. ಮದುವೆ ನಂಬಿದವರಿಗೆ ಕೆಲಸವಿಲ್ಲ ಸರಳ ಮದುವೆಗಳಿಂದಾಗಿ ಪೋಷಕರಿಗೇನೋ ಖರ್ಚು ಕಡಿಮೆಯಾಗಿದೆ. ಆದರೆ, ಕಲ್ಯಾಣ ಮಂಟಪಗಳು ಬಳಕೆಯಾಗದೆ ಮಾಲೀಕರಿಗೆ ನಷ್ಟವಾಗುತ್ತಿದೆ. ಅಡ್ವಾನ್ಸ್‌ ನೀಡಿದವರು ವಾಪಸ್‌ ನೀಡುವಂತೆ ಒತ್ತಾಯಿಸುತ್ತಿದ್ದು, ವಾದ್ಯಗೋಷ್ಠಿ, ವಿದ್ಯುತ್‌ ಅಲಂಕಾರ, ಹೂವಿನ ಅಲಂಕಾರ, ಅಡುಗೆಯವರು, ಪಾತ್ರೆ-ಪೆಂಡಾಲ್‌ ಸೇರಿದಂತೆ ಇತರೆ ಕೆಲಸ ಮಾಡುವವರು ತೊಂದರೆ ಅನುಭವಿಸಿದ್ದಾರೆ. ಮಗಳ ಮದುವೆ ಮಾಡಲು ಸಾಲ ಮಾಡಲು ಯೋಜಿಸಿದ್ದೆ. ಆದರೆ, ಲಾಕ್‌ಡೌನ್‌ ಜಾರಿಯಿಂದಾಗಿ ಏಳೆಂಟು ಲಕ್ಷ ಖರ್ಚಾಗುತ್ತಿದ್ದ ಮದುವೆ 2-3 ಲಕ್ಷದಲ್ಲಿ ಮುಗಿದು ಹೋಗಿದೆ. ಬೇರೆಯವರ ಬಳಿ ಸಾಲ ಮಾಡುವುದು ತಪ್ಪಿದೆ. - ಕೆ.ಎಂ.ನಾರಾಯಣಸ್ವಾಮಿ, ವಧುವಿನ ತಂದೆ, ಕಾರನಾಯನಹಳ್ಳಿ ಲಾಕ್‌ಡೌನ್‌ನಿಂದಾಗಿ ಕೆಲವರು ಮದುವೆ ಮಾಡಲಾಗದೆ ಬುಕ್ಕಿಂಗ್‌ ಕ್ಯಾನ್ಸಲ್‌ ಮಾಡಿದ್ದಾರೆ. ಕೆಲವರು ದಿನಾಂಕ ಬದಲಾವಣೆ ಮಾಡಿಕೊಳ್ಳುತ್ತಿದ್ದು, ಮುಂಗಡ ಬುಕ್ಕಿಂಗ್‌ ಹಣ ಕೇಳಿದವರಿಗೆ ವಾಪಸ್‌ ನೀಡಲಾಗುತ್ತಿದೆ. - ಗೋವಿಂದರಾಜು, ನಾರಾಯಣಿ ಕಲ್ಯಾಣ ಮಂಟಪ ಮಾಲೀಕರು


from India & World News in Kannada | VK Polls https://ift.tt/3aSSHTb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...