ಬೆಂಗಳೂರು: ತಮ್ಮ ಊರುಗಳಿಗೆ ತೆರಳಲು ಅಗತ್ಯ ವ್ಯವಸ್ಥೆ ಮಾಡದ ರಾಜ್ಯ ಸರಕಾರದ ವಿರುದ್ಧ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಂಡಾಮಂಡಲರಾಗಿದ್ದಾರೆ. ತಮ್ಮ ಊರುಗಳಿಗೆ ತೆರಳಲು ನೋಂದಣಿಗಾಗಿ ನಗರದ ಅರಮನೆ ಮೈದಾನದಲ್ಲಿ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಈಶಾನ್ಯ ರಾಜ್ಯಗಳು ಮತ್ತು ಉತ್ತರ ಭಾರತೀಯರನ್ನು ಭೇಟಿ ಮಾಡಿ ಅಹವಾಲು ಆಲಿಸಿದ ಬಳಿಕ ಡಿಕೆಶಿ ಸುದ್ದಿಗಾರರೊಂದಿಗೆ ಮಾತನಾಡಿ, "ವಲಸೆ ಕಾರ್ಮಿಕರಿಗೆ ನೆರವಾಗುವ ಸಾಮರ್ಥ್ಯ ಸರಕಾರಕ್ಕೆ ಇಲ್ಲವಾದರೆ, ತಮಗೆ ಅನುಮತಿ ನೀಡಲಿ. ಕೆಲವೇ ತಾಸುಗಳಲ್ಲಿ ಕಾರ್ಮಿಕರಿಗೆ ಸಕಲ ವ್ಯವಸ್ಥೆ ಮಾಡುತ್ತೇನೆ," ಎಂದರು. "ಕಾರ್ಮಿಕರ ನೋಂದಣಿಗೆ ಕಲ್ಯಾಣ ಮಂಟಪಗಳನ್ನು ಬಳಸಬಹುದಿತ್ತು. ನೋಂದಣಿಗಾಗಿ ಬಂದ ಕಾರ್ಮಿಕರಿಗೆ ಊಟ, ನೀರನ್ನು ಕೊಡುವ ವ್ಯವಸ್ಥೆ ಇಲ್ಲ. ಸರಕಾರಕ್ಕೆ ಸಾಧ್ಯವಾಗದಿದ್ದರೆ ನಮಗೆ ಅನುಮತಿ ಕೊಡಲಿ. ಆಹಾರದ ವ್ಯವಸ್ಥೆ ಮಾಡುತ್ತೇನೆ. ಇವರೆಲ್ಲರೂ ನಾಡನ್ನು ಕಟ್ಟಲು ಸಹಕಾರ ನೀಡಿದ್ದಾರೆ. ತಮ್ಮ ರಾಜ್ಯಗಳಿಂದ ಇವರೆಲ್ಲರೂ ಮರಳಿ ಬರಬೇಕು. ಆದರೆ, ಈ ಜನರನ್ನು ನಡೆಸಿಕೊಳ್ಳುತ್ತಿರುವ ರೀತಿ ಬೇಸರ ತರುತ್ತಿದೆ," ಎಂದರು. "ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕೋಟ್ಯಂತರ ರೂ. ಇದ್ದರೂ ಬಳಸುತ್ತಿಲ್ಲ. ಉದ್ಯೋಗಿಗಳು, ಕಂಪನಿ ಹಾಗೂ ಸರಕಾರದ ನಡುವೆ ಸಮನ್ವಯದ ಕೊರತೆಯಿಂದ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದೆ,’’ ಎಂದು ದೂರಿದರು. "ಅರಮನೆ ಮೈದಾನದಲ್ಲಿ ಕಷ್ಟದಲ್ಲಿರುವ ಜನರನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ. ಅವರ ಕಷ್ಟ ನೋಡಲಾಗಲಿಲ್ಲ. ಪ್ರಯಾಣದ ಹಣ ತುಂಬಲು ರೈಲ್ವೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ನಾನು ಹಣ ಕೊಡುತ್ತೇನೆ ಎಂದರೂ ಬಳಸಿಕೊಳ್ಳಲಿಲ್ಲ. ಜನರು ಬೆಳಗ್ಗೆ 6 ಗಂಟೆಯಿಂದ ಕ್ಯೂನಲ್ಲಿದ್ದಾರೆ. ಅವರಿಗೆ ಊಟ, ತಿಂಡಿ, ನೀರು ಕೊಡುವವರಿಲ್ಲ. 20 ಸಾವಿರ ಮಂದಿ ಇದ್ದಾರೆ," ಎಂದು ನೋವು ವ್ಯಕ್ತಪಡಿಸಿದರು.
from India & World News in Kannada | VK Polls https://ift.tt/2TzBjgm