ನೂತನ ಮರಳು ನೀತಿ ಜಾರಿ, ಗ್ರಾಮ ಪಂಚಾಯತ್‌ಗಳಿಗೆ ಹೆಚ್ಚಿನ ಅಧಿಕಾರ

ಬೆಂಗಳೂರು: ರಾಜ್ಯದಲ್ಲಿ ಗಣಿಗಾರಿಕೆ ಸಂಬಂಧ ಕಳೆದ ಎಂಟತ್ತು ವರ್ಷಗಳ ಗೊಂದಲಕ್ಕೆ ತೆರೆ ಎಳೆಯಲು ಸ್ಪಷ್ಟ ಮಾರ್ಗಸೂಚಿಯೊಂದಿಗೆ ನೂತನ ಮರಳು ನೀತಿ -2020 ಅನ್ನು ಜಾರಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮರಳು ಚಟುವಟಿಕೆ ಮೇಲೆ ಪೂರ್ಣ ಅಧಿಕಾರವನ್ನು ಲೋಕೋಪಯೋಗಿ ಇಲಾಖೆ ಸುಪರ್ದಿಗೆ ಒಪ್ಪಿಸಿದ್ದ 2011 ರ ನೀತಿಯಲ್ಲಿನ ಹಲವು ಗೊಂದಲಗಳಿಗೆ ಹೊಸ ನೀತಿಯಲ್ಲಿ ತೆರೆ ಎಳೆಯಲಾಗಿದೆ. ರಾಜ್ಯ, ಜಿಲ್ಲೆ, ಉಪವಿಭಾಗ ಹಾಗೂ ತಾಲೂಕು ಮಟ್ಟದ ನಿಗಾ ಸಮಿತಿಗಳ ಉಸ್ತುವಾರಿಯಲ್ಲಿ ಗ್ರಾಮ ಪಂಚಾಯತಿಗಳಿಗೆ ಮರಳು ಸಾಗಾಣೆ ಪರವಾನಗಿ ನೀಡುವ ವಿಕೇಂದ್ರೀಕರಣ ವ್ಯವಸ್ಥೆ ಮಾಡಲಾಗಿದೆ. ನಾನಾ ಹಂತಗಳ ಹೊಣೆಗಾರಿಕೆಗಳನ್ನು ನೂತನ ನೀತಿಯ ನಿಯಮಾವಳಿಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿಗಳು ಮರಳು ನಿಕ್ಷೇಪ ಗುರುತಿಸಿದ ಬಳಿಕ ಪರವಾನಗಿ ಅವಧಿ ನಿಗದಿಪಡಿಸಿ ಮರಳು ತೆಗೆಯಲು ಸಂಬಂಧಿತ ಗ್ರಾಮ ಪಂಚಾಯತಿಗಳಿಗೆ ಅವಕಾಶ ನೀಡಬೇಕು. ನಿಗದಿಪಡಿಸಿದ ದರದಲ್ಲಿ ಗ್ರಾ. ಪಂ.ಗಳ ಮೂಲಕ ಮರಳು ವಿಲೇವಾರಿ ಮಾಡಲು ನೂತನ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಳ್ಳ, ತೊರೆ ಮತ್ತು ಕೆರೆಗಳಲ್ಲಿ ಗರಿಷ್ಠ ಒಂದು ವರ್ಷ ಅವಧಿಗೆ ಹಾಗೂ ಹೊಳೆ, ನದಿ, ಅಣೆಕಟ್ಟೆಗಳಲ್ಲಿ ಗರಿಷ್ಠ 3 ವರ್ಷ ಅವಧಿಗೆ ಮರಳು ತೆಗೆಯಲು ಮತ್ತು ಸಾಗಾಣೆ ಮಾಡಲು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸರಕಾರಿ ಕಾಮಗಾರಿಗಳಿಗೆ ಮರಳು ಬ್ಲಾಕ್‌ಗಳನ್ನು ಮೀಸಲಿಡಲು ಜಿಲ್ಲಾ ಸಮಿತಿಗಳಿಗೆ ಅಧಿಕಾರ ನೀಡಲಾಗಿದ್ದು, ಆನ್‌ಲೈನ್‌ ಬುಕಿಂಗ್‌ ಮೂಲಕ ಮರಳನ್ನು ಬಳಕೆದಾರರಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗುವುದು. ಅನಧಿಕೃತ ಮರಳು ಗಣಿಗಾರಿಕೆ ಹಾಗೂ ಅಕ್ರಮ ಸಾಗಾಣೆಗೆ ಪ್ರತಿ ವಾಹನಕ್ಕೆ 10 ಸಾವಿರ ರೂ.ದಂಡ ವಿಧಿಸಲು ನೂತನ ನೀತಿಯ ನಿಯಮಾವಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಗೊಂದಲ ನಿವಾರಣೆಗೆ ನೀತಿ ರಾಜ್ಯದ 45 ದಶಲಕ್ಷ ಮೆಟ್ರಿಕ್‌ ಟನ್‌ ಮರಳು ಬೇಡಿಕೆ ಪೈಕಿ ಎಂ ಸ್ಯಾಂಡ್‌ ಘಟಕಗಳು 30 ದಶ ಲಕ್ಷ ಮೆಟ್ರಿಕ್‌ ಟನ್‌ ಪೂರೈಸುತ್ತಿವೆ. ಮರಳು ಬ್ಲಾಕ್‌ ಗಳ ಮೂಲಕ 4.5 ದಶಲಕ್ಷ ಮೆಟ್ರಿಕ್‌ ಟನ್‌ ಹಾಗೂ ಹೊರ ರಾಜ್ಯಗಳಿಂದ 2 ದಶಲಕ್ಷ ಮೆಟ್ರಿಕ್‌ ಟನ್‌ ಬರುತ್ತಿದೆ. ಉಳಿದ 8.5 ದಶಲಕ್ಷ ಮೆಟ್ರಿಕ್‌ ಟನ್‌ ಕೊರತೆ ನೀಗಲು 2007 ರಲ್ಲಿ ವಿದೇಶಿ (ಮಲೇಶಿಯಾ) ಮರಳು ತರುವ ತೀರ್ಮಾನ ಯಶಸ್ವಿ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಸಮರ್ಪಕ ಮರಳು ಪೂರೈಕೆ ಸಾಧ್ಯವಾಗದೆ ಸಮಸ್ಯೆ ಸೃಷ್ಟಿಯಾಗಿತ್ತು. ಸರಕಾರ ನೂತನ ನೀತಿ ಜಾರಿ ಮಾಡಲು ನಿರ್ಧರಿಸಿ 2018 ರಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿತ್ತು. ಬಳಿಕ 2020 ಫೆಬ್ರವರಿಯಲ್ಲಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿ ಕರಡು ನೀತಿ ಅಂತಿಮಗೊಳಿಸಿತ್ತು. ನೀತಿಯನ್ನು ಕಳೆದ ಏ. 30 ರಂದು ಸಚಿವ ಸಂಪುಟ ಅನುಮೋದಿಸಿತ್ತು.


from India & World News in Kannada | VK Polls https://ift.tt/2zsa3tk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...