'ಕನ್ನಡಿಗ ಕೆ.ಎಲ್‌ ರಾಹುಲ್‌ ಟೀಮ್‌ ಇಂಡಿಯಾದ ಮುಂದಿನ ಕ್ಯಾಪ್ಟನ್‌' ಶ್ರೀಶಾಂತ್‌ ಭವಿಷ್ಯ

ಬೆಂಗಳೂರು: ನ್ಯೂಜಿಲೆಂಡ್‌ ಪ್ರವಾಸದ ಸೀಮಿತ ಓವರ್‌ಗಳ ಮಾದರಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಕನ್ನಡಿಗ ಒಂದಲ್ಲ ಒಂದು ದಿನ ಕ್ಯಾಪ್ಟನ್‌ ಆಗುತ್ತಾರೆಂದು ಹಿರಿಯ ವೇಗಿ ಎಸ್‌. ಶ್ರೀಶಾಂತ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಲೋ ಲೈವ್‌ನಲ್ಲಿ ಮಾತನಾಡಿರುವ ಅವರು, ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಬಳಿಕ ಕರ್ನಾಟಕದ ಕೆ.ಎಲ್‌ ರಾಹುಲ್‌ ಟೀಂ ಇಂಡಿಯಾದ ನಾಯಕರಾಗಬಹುದು. ಅವರಲ್ಲಿ ಕ್ರಿಕೆಟ್‌ ಬಗೆಗಿನ ಆಸಕ್ತಿ ಹಾಗೂ ಶಿಸ್ತು ನನಗೆ ಖುಷಿ ಕೊಟ್ಟಿದೆ. ಕ್ರಿಕೆಟ್‌ ಆಟವನ್ನು ಅವರು ಪ್ರೀತಿಸುವ ಪರಿ ಅದ್ಭುತ ಎಂದು ಕನ್ನಡಿಗನ ಬಗ್ಗೆ ಶ್ರೀಶಾಂತ್‌ ವಿಶೇಷ ಮಾತುಗಳನ್ನಾಡಿದ್ದಾರೆ. ಯಾವುದೇ ಮಾದರಿಯ ಕ್ರಿಕೆಟ್‌ ಇರಲಿ, ಅವರ ಆಟ ಅತ್ಯದ್ಭುತ. ಹಾಗೆಯೇ ಅವರ ಶಿಸ್ತು ಕೂಡ ಮೆಚ್ಚುವಂಥದ್ದು. ಕೊಹ್ಲಿ ರೀತಿಯೇ ಆಟದ ಬಗ್ಗೆ ಶ್ರದ್ಧೆ ಇದೆ. ವೈಯಕ್ತಿಕ ದಾಖಲೆಗಿಂತ ತಂಡದ ಪರವಾಗಿ ಆಡುವ ಗುಣವಿದೆ, ಶತಕದಂಚಿನಲ್ಲಿದ್ದರೂ ತಂಡಕ್ಕೆ ಸಿಕ್ಸ್‌ ಬೇಕಿದ್ದರೆ ಸಿಕ್ಸ್‌ ಭಾರಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ರಾಹುಲ್ ಅವರನ್ನು ಕೊಂಡಾಡಿದ್ದಾರೆ. ಕೆ.ಎಲ್‌ ರಾಹುಲ್‌ ಅವರಂಥ ಆಟಗಾರರಿಂದಲೇ ತಂಡ ಬೆಳೆಯುತ್ತದೆ. ಅದಲ್ಲದೆ, ವಿಕೆಟ್‌ ಕೀಪಿಂಗ್‌ ಮಾಡಿಯೂ ಶತಕ ಹೊಡೆಯುವ ಸಾಮರ್ಥ್ಯವನ್ನು ಬಲಗೈ ಬ್ಯಾಟ್ಸ್‌ಮನ್‌ ಮೈಗೂಡಿಸಿದ್ದಾರೆ. ಇದು ನಾವು ಗಮನಿಸಬೇಕಾದ ವಿಚಾರ. ಕೊಹ್ಲಿ ಜತೆಗಿದ್ದು ಈಗಾಗಲೇ ಕ್ರಿಕೆಟ್‌ನ್ನು ತುಂಬಾ ಅರ್ಥ ಮಾಡಿಕೊಂಡಿದ್ದಾರೆ. ತಮ್ಮ ಪ್ರದರ್ಶನದ ಮೂಲಕವೇ ತಂಡದಲ್ಲಿ ಸ್ಥಾನ ಗಟ್ಟಿಮಾಡಿಕೊಂಡ ಆಟಗಾರ ಇವರು, ಎಂದು ಕೇರಳ ವೇಗಿ ಹೊಗಳಿಕೆಯ ಮಹಾಪೂರ ಹರಿಸಿದ್ದಾರೆ. ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಕೇರಳ ತಂಡದ ತರಬೇತಿಯಲ್ಲಿ ಭಾಗಿಯಾಗುತ್ತಿದ್ಧೇನೆ. ಸೆಪ್ಟೆಂಬರ್‌ನಲ್ಲಿ ರಣಜಿ ಹಾಗೂ ನಂತರ ಇರಾನಿ ಟ್ರೋಫಿಯಲ್ಲಿ ಕೇರಳಕ್ಕೆ ಗೆಲುವು ದೊರಕಿಸಿಕೊಡುವುದು ನನ್ನ ಪ್ರಾಥಮಿಕ ಉದ್ದೇಶ. ನಂತರ, ಭಾರತ ತಂಡದ ಪರ ಆಡಿ ನನ್ನ ಶಕ್ತಿ ಏನೆಂದು ತೋರಿಸಬೇಕು. ನನ್ನ ಛಲ ಹಾಗೂ ಹಠ ಬಿಡುವುದಿಲ್ಲ ಎಂದು ಶ್ರೀಶಾಂತ್‌ ಟೀಮ್‌ ಇಂಡಿಯಾಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ನೂ 5 ವರ್ಷ ಕ್ರಿಕೆಟ್‌ ಆಡುತ್ತೇನೆ ಹಾಗೂ ಮತ್ತೆ ಟೀಂ ಇಂಡಿಯಾಕ್ಕೆ ಬಂದು ಕೊಹ್ಲಿ, ರೋಹಿತ್‌, ರಾಹುಲ್‌ ಜತೆ ಡ್ರೆಸ್ಸಿಂಗ್‌ ರೂಮ್‌ ಹಂಚಿಕೊಳ್ಳುತ್ತೇನೆ. ಅವಕಾಶ ಕೊಟ್ಟರೆ ಉಚಿತವಾಗಿ ಆಡಲು ಕೂಡ ತಯಾರಿದ್ದೇನೆ. ಒಟ್ಟಾಗಿ ಮತ್ತೆ ನನಗೆ ವೃತ್ತಿಪರ ಕ್ರಿಕೆಟಿಗೆ ಬರಬೇಕಿದೆ ಎಂದು ಕೇರಳ ವೇಗಿ ಎಸ್‌ ಶ್ರೀಶಾಂತ್‌ ಶಪಥ ಮಾಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3aVHyRF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...