ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಒಂದೇ ದಿನದಲ್ಲಿ ದ್ವಿಶತಕ ಸಿಡಿಸುವ ಮೂಲಕ ರಾಜ್ಯಾದ್ಯಂತ ತನ್ನ ಕೆನ್ನಾಲಗೆ ಚಾಚುತ್ತಲೇ ಇದೆ. ಆರೋಗ್ಯ ಇಲಾಖೆಯ ಶನಿವಾರದ ಮಧ್ಯಾಹ್ನದ ಹೆಲ್ತ್ ಬುಲೆಟಿನ್, ರಾಜ್ಯದಲ್ಲಿ 196 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದಾಗಿ ವರದಿ ಮಾಡಿತ್ತು. ಇದೀಗ ಸಂಜೆಯ ಬುಲೆಟಿನ್ ಕೂಡ ಬಿಡುಗಡೆಯಾಗಿದ್ದು., ಮತ್ತೆ 20 ಜನಕ್ಕೆ ಸೋಕು ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಂದೇ ದಿನ 216 ಜನರಲ್ಲಿ ಸೋಂಕು ಪತ್ತೆಯಾದಂತಾಗಿದೆ. 4 ತಿಂಗಳ ಮಗುವಿಗೂ ಕೊರೊನಾ ಸೋಂಕು ತಗುಲಿರುವುದು ಜನತೆಯಲ್ಲಿ ಭಯ ಹುಟ್ಟಿಸಿದೆ. ಈ ಮಗುವಿನ ಕುಟುಂಬ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿತ್ತು. ಈ ಮೂಲಕ ರಾಜ್ಯದಲ್ಲಿ ಒಂದೇ ದಿನ ಅತಿ ಹೆಚ್ಚು ಕೊರೊನಾ ಸೋಂಕು ದೃಡಪಟ್ಟ ದಾಖಲೆ ಬರೆದಿದ್ದು, ರಾಜ್ಯಕ್ಕೆ ಕೊರೊನಾಘಾತ ಅಪ್ಪಳಿಸಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಶನಿವಾರದಂದು 1959ಕ್ಕೆ ಏರಿಕೆಯಾಗಿದೆ. 2000 ಗಡಿ ದಾಟಲು ಇನ್ನು ಕೆಲವೇ ಪ್ರಕರಣಗಳು ಬಾಕಿ ಉಳಿದಿವೆ. ಇದುವೆರೆಗೆ ರಾಜ್ಯದಲ್ಲಿ ಕೊರೊನಾ ವೈರಸ್ಗೆ ಒಟ್ಟು 42 ಮಂದಿ ಬಲಿಯಾಗಿದ್ದಾರೆ. ಇದುವರೆಗೆ 608 ಮಂದಿ ಪೂರ್ಣವಾಗಿ ಗುಣವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1307 ಮಂದಿಯಲ್ಲಿ ಸಕ್ರಿಯವಾಗಿದೆ. ಶನಿವಾರ 11 ಗುಣವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಶನಿವಾರ ದೃಢಪಟ್ಟಿರುವ 216 ಪ್ರಕರಣಗಳ ಪೈಕಿ ಬಹುತೇಕರು ಅಂತಾರಾಜ್ಯ ಸಂಪರ್ಕ ಹೊಂದಿದ್ದಾರೆ. 180ಕ್ಕೂ ಹೆಚ್ಚು ಜನ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದಿರುವವರೇ ಇದ್ದಾರೆ. ಇದು ರಾಜ್ಯದ ಎಲ್ಲೆಡೆ ಆತಂಕಕ್ಕೆ ಕಾರಣವಾಗಿದೆ. ಬೀದರ್ ಜಿಲ್ಲೆಯಲ್ಲಿ ಮೂರು ಕೊರೊನಾ ಪಾಸಿಟಿವ್ ಬಂದಿವೆ. ಒಟ್ಟು ಸೋಂಕಿತರ ಸಂಖ್ಯೆ 79 ಕ್ಕೆ ಏರಿಕೆಯಾಗಿದೆ. ಓಲ್ಡ್ ಸಿಟಿಯ ಕಂಟೈನ್ಮೆಂಟ್ ಝೋನ್ ಸಂಪರ್ಕದಿಂದ ಒಬ್ಬ ವ್ಯಕ್ತಿಗೆ ಸೋಂಕು ಹರಡಿದರೆ, ಇನ್ನಿಬ್ಬರು ಮಹಾರಾಷ್ಟ್ರದಿಂದ ವಾಪಸಾದವರಿದ್ದಾರೆ. ಯಾದಗಿರಿಯಲ್ಲಿ ಇಂದು ಒಂದೇ ದಿನ 72 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 87ಕ್ಕೆ ಏರಿಕೆಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಕೇಸ್ ಪತ್ತೆಯಾಗಿದೆ. ಇಂದು ಒಂದೇ ದಿನದಲ್ಲಿ 40 ಜನರಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 66 ಕ್ಕೆ ಏರಿಕೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಮೂರು ಪ್ರಕರಣ ಶನಿವಾರ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 53ಕ್ಕೇರಿದೆ.
from India & World News in Kannada | VK Polls https://ift.tt/36nOPJa