ನಾಟಿಂಗ್ಹ್ಯಾಮ್: ಈ ಬಾರಿ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಲು ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡಕ್ಕೆ ಅತ್ಯುತ್ತಮ ಅವಕಾಶವಿದೆ ಎಂದು ಆಂಗ್ಲರ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2007ರ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ಕೊನೆಯ ಬಾರಿ ಟೆಸ್ಟ್ ಸರಣಿ ಗೆದ್ದಿತ್ತು. ನಂತರ, 2011ರಲ್ಲಿ 0-4, 2014ರಲ್ಲಿ 1-3 ಹಾಗೂ 2018ರಲ್ಲಿ 1-4 ಅಂತರದಲ್ಲಿ ಸೋಲು ಅನುಭವಿಸಿತ್ತು. ಇಂಗ್ಲೆಂಡ್ ತಂಡಕ್ಕೆ ಹಲವು ಅನುಭವಿ ಆಟಗಾರರ ಅಲಭ್ಯತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಈ ಬಾರಿ ಟೆಸ್ಟ್ ಸರಣಿ ಗೆಲ್ಲಲು ಉತ್ತಮ ಅವಕಾಶವಿದೆ. ಇಲ್ಲವಾದಲ್ಲಿ ಕೊಹ್ಲಿ ಹುಡುಗರು ಮನೆಗೆ ಹೋಗುವುದು ಒಳಿತು ಎಂದು ವಾನ್ ಹೇಳಿದ್ದಾರೆ. "ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡಕ್ಕೆ ಒತ್ತಡ ಹೇರಲು ಬಯಸುತ್ತೇನೆ. ಏಕೆಂದರೆ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್, ವೇಗಿ ಕ್ರಿಸ್ ವೋಕ್ಸ್ ಹಾಗೂ ಜೋಫ್ರ ಆರ್ಚರ್ ಈ ಸರಣಿಗೆ ಇಲ್ಲ. ಅದು ಅಲ್ಲದೇ, ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡ ಸತತ ಎರಡು ಬಾರಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಭಾರತ, ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲವಾದರೆ ಮನೆಗೆ ಹೋಗುವುದು ನನ್ನ ಪ್ರಕಾರ ಒಳ್ಳೆಯದು," ಎಂದು ಕ್ರಿಸ್ಬಝ್ಗೆ ತಿಳಿಸಿದ್ದಾರೆ. "ಅಲ್ಲದೆ, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಟೆಸ್ಟ್ ಸರಣಿ ಗೆದ್ದಿದೆ. ಹಲವು ಸ್ಟಾರ್ ಆಟಗಾರರ ಅಲಭ್ಯತೆ ಜೋ ರೂಟ್ ಬಳಗಕ್ಕೆ ಕಾಡುತ್ತಿದೆ. ಈ ಎಲ್ಲಾ ಅಂಶಗಳನ್ನು ನೋಡಿದಾಗ, ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿದೆ," ಎಂದು ವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಡಾಮ್ ಸಿಬ್ಲೀ ಹಾಗೂ ಝ್ಯಾಕ್ ಕ್ರಾವ್ಲೀ ಇನ್ನು ಹೇಳಿಕೊಳ್ಳುವಂತಹ ಪ್ರದರ್ಶನ ತೋರಿಲ್ಲ. ಅಲ್ಲದೆ, ಇನ್ನೇನು ಟೆಸ್ಟ್ ಸರಣಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಅನಿರ್ದಿಷ್ಟಾವಧಿಗೆ ವಿಶ್ರಾಂತಿ ಪಡೆದುಕೊಂಡಿದ್ದರು. ಅಲ್ಲದೆ, ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಜೋಫ್ರಾ ಆರ್ಚರ್ ಹಾಗೂ ಕ್ರಿಸ್ ವೋಕ್ಸ್ ಕೂಡ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ಜೊತೆಗೆ, ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗ ಕೂಡ ಇದೀಗ ಅಷ್ಟೊಂದು ಬಲಿಷ್ಠವಾಗಿ ಕಾಣುತ್ತಿಲ್ಲ. ಹಾಗಾಗಿ, ಭಾರತ ತಂಡ, ಇಂಗ್ಲೆಂಡ್ ತಂಡವನ್ನು ಸೋಲಿಸುವ ಎಲ್ಲಾ ಸಾಧ್ಯತೆಗಳಿವೆ ಎಂಬುದು ವಾನ್ ಅಭಿಪ್ರಾಯ. "ಭಾರತ ತಂಡ ಅತ್ಯುತ್ತಮ ಸಂಯೋಜನೆಯನ್ನು ಹೊಂದಿದೆ. ವಿಶ್ವದ ಅತ್ಯುತ್ತಮ ತಂಡಗಳು ತವರು ಮಣ್ಣಿನಲ್ಲಿ ಸತತವಾಗಿ ಗೆಲುವು ಸಾಧಿಸಬಲ್ಲವು. ಆದರೆ, ಇಡೀ ವಿಶ್ವದಾದ್ಯಂತ ಗೆಲ್ಲುವ ಸಾಮರ್ಥ್ಯವಿರುವ ತಂಡವೆಂದರೆ ಅದು ಭಾರತ. ಏಕೆಂದರೆ, ಟೀಮ್ ಇಂಡಿಯಾದಲ್ಲಿ ಬೇಕಾಗಿರುವ ಎಲ್ಲಾ ಕೌಶಲ, ನಾಯಕತ್ವವಿದೆ. ಆಸ್ಟ್ರೇಲಿಯಾ ನೆಲದಲ್ಲಿ ಸತತ ಎರಡು ಟೆಸ್ಟ್ ಸರಣಿ ಗೆದ್ದಿರುವ ಯಾವುದೇ ಉದಾಹರಣಗೆ ಇಲ್ಲ. ಆದರೆ, ಭಾರತ ಈ ಸಾಧನೆ ಮಾಡಿದೆ," ಎಂದು ಕೊಹ್ಲಿ ಪಡೆಯನ್ನು ಶ್ಲಾಘಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3Che7YY