ಲಖನೌ: ಹುಡುಗಿಯೊಬ್ಬಳು ಯುವಕನ ಜತೆ ಓಡಿ ಹೋಗಿ ಜನರ ಕೈಗೆ ಸಿಕ್ಕಿಹಾಕಿಕೊಂಡರೆ, ಎರಡೇಟು ಬಿಗಿದು ಅವರಿಬ್ಬರಿಗೆ ಮದುವೆ ಮಾಡಿಸೋದು ಗ್ಯಾರಂಟಿ! ಅದೇ, ನಾಲ್ವರು ಹುಡುಗರ ಜತೆ ಒಬ್ಬಳೇ ಹುಡುಗಿ ಮನೆಯೊಂದರಲ್ಲಿ ಸಿಕ್ಕಿ ಹಾಕಿಕೊಂಡರೆ ಏನು ಮಾಡಬಹುದು? ಹುಡುಗಿಗೆ ಬಾಳು ಕೊಟ್ಟು ಕೇಸ್ ಕ್ಲೋಸ್ ಮಾಡು ಅಂಥ ಪೋರರಲ್ಲೊಬ್ಬನಿಗೆ ಸಲಹೆ ಕೊಡುವುದು ಮೊದಲ ಸಾಧ್ಯತೆ. ''ನಾ ಒಲ್ಲೆ,'' ಎಂದು ಹುಡುಗರೆಲ್ಲರೂ ಎಸ್ಕೇಪ್ ಆದ್ರೆ ಪರಿಹಾರ ಏನು? ಹುಡುಗಿ ಕೈಯಲ್ಲಿ ಲಾಟರಿ ಎತ್ತಿಸಿ ಹೆಸರು ಬಂದವನ ಜತೆ ವಿವಾಹ ಮಾಡಿಸುವುದೇ ಸೂಪರ್ ಐಡಿಯಾ! ಇದು ರಿಯಾಲಿಟಿ ಶೋ ತರಹ ಅನಿಸಬಹುದು. ಹಾಗಲ್ಲ, ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆ. ಅಚ್ಚರಿಯೆಂದರೆ ಈ ''ಕ್ಕೆ ಸ್ಥಳೀಯ ಪೊಲೀಸರೇ ಪ್ರತ್ಯಕ್ಷ ಸಾಕ್ಷಿ. ಘಟನೆ ನಡೆದಿರುವುದು ಅಂಬೇಡ್ಕರ್ನಗರ ಜಿಲ್ಲೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಪಂಚಾಯಿತಿ ಸೇರಿದ ಜನರೆಲ್ಲರೂ ತಲೆಕೆಡಿಸಿಕೊಂಡು ಜಟಿಲ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಹುಡುಗಿ-ಯನ್ನು ಪುಸಲಾಯಿಸಿ ಕರೆದು-ಕೊಂಡು ಹೋಗಿ ಬಚಾವಾಗಲು ಯತ್ನಿ-ಸಿದ ಹುಡುಗರಲ್ಲೊಬ್ಬ ಆಕೆಯನ್ನು ವರಿಸಿದ್ದಾನೆ. ಈ ಘಟನೆ ಉಪೇಂದ್ರ ನಿರ್ದೇಶನದ 'ತರ್ಲೆ ನನ್ಮಗ' ಸಿನೆಮಾದ ಕ್ಲೈಮಾಕ್ಸ್ ದೃಶ್ಯಕ್ಕೂ ಹತ್ತಿರವಿದೆ. ಏನಿದು ಸ್ವಯಂವರ?: ಅಜೀಮ್ನಗರದ ಈ ವಧು ನಾಲ್ವರು ಹುಡುಗರ ಜತೆ ಮನೆಬಿಟ್ಟು ಹೋಗಿ, ಹುಡುಗರಲ್ಲೊಬ್ಬನ ಸಂಬಂಧಿಕರ ಮನೆಯಲ್ಲಿ ನೆಲೆಸಿಬಿಟ್ಟಿದ್ದಳು. ಐದು ದಿನವಾದರೂ ಮಗಳು ವಾಪಸ್ ಬರದೇ ಇದ್ದಾಗ ದಿಕ್ಕೆಟ್ಟ ಆಕೆಯ ಪೋಷಕರು ಊರೆಲ್ಲ ಹುಡುಕಿ ಪೊಲೀಸ್ ಠಾಣೆಯಲ್ಲಿದೂರು ದಾಖಲಿಸಿದರು. ಪೊಲೀಸರು ಹಾಗೂ ಹಳ್ಳಿ ಮಂದಿ ಏಕಕಾಲಕ್ಕೆ ಶೋಧ ಕಾರ್ಯ ಆರಂಭ ಮಾಡಿದ್ದು, ಅಂತಿಮವಾಗಿ ನಾಲ್ವರು ಯುವಕರ ಜತೆ ಆಕೆ ಸಿಕ್ಕಿಬಿದ್ದಿದ್ದಾಳೆ. ಏನು ಮಾಡುವುದು ಎಂದು ತೋಚದ ಹಳ್ಳಿ ಜನ ಪಂಚಾಯಿತಿ ಸೇರಿಸಿದರು. ''ಹರೆಯದ ಮನಸ್ಸು ತಪ್ಪು ಮಾಡಿದ್ದು, ಘಟನೆಯನ್ನು ಬೆಳೆಸಿ ಹುಡುಗಿಯ ಬಾಳು ಹಾಳು ಮಾಡುವುದಕ್ಕಿಂತ ಒಬ್ಬರ ಜತೆ ಮದುವೆ ಮಾಡಿಸುವುದೇ ಉತ್ತಮ,'' ಎಂದು ಪಂಚಾಯಿತಿ ಅಭಿಪ್ರಾಯಪಟ್ಟಿತು. ಐದು ದಿನ ವೀರರಂತೆ ಜತೆಗಿದ್ದ ಹುಡುಗರೆಲ್ಲರೂ ಮದುವೆ ಎಂದ ತಕ್ಷಣ ಹಿಂದಡಿಯಿಟ್ಟರು. ಹುಡುಗಿಗೂ ಯಾರನ್ನಾದರೂ ಒಬ್ಬನನ್ನು ತೋರಿಸು ಎಂದು ಹೇಳಿದರೂ, ಆಕೆಗೂ ತಕ್ಷಣಕ್ಕೆ 'ಯಾರು ಹಿತವರು' ಎಂದು ಗುರುತಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂಚಾಯಿತಿ ಮುಖಂಡರು 'ಲಕ್ಕಿ ಡ್ರಾ' ಸೂತ್ರದ ಮೊರೆ ಹೋದರು. ಹುಡುಗರೆಲ್ಲರ ಹೆಸರನ್ನು ಚೀಟಿಯಲ್ಲಿಬರೆದು, ಒಂದು ಪಾತ್ರೆಯೊಳಗೆ ಹಾಕಿ ಹುಡುಗಿಯ ಮುಂದೆ ಹಿಡಿದರು. ಹುಡುಗಿ ಎತ್ತಿದ ಚೀಟಿಯಲ್ಲಿದ್ದ ಹೆಸರಿನ ಹುಡುಗನಿಗೆ ಮದುವೆ ಮಾಡಿಸಿ ಪ್ರಕರಣಕ್ಕೆ ಸುಖಾಂತ್ಯ ಹಾಡಲಾಗಿದೆ.
from India & World News in Kannada | VK Polls https://ift.tt/3t6YgHp