ಕರ್ನಾಟಕ-ಕೇರಳ ಗಡಿ ಓಪನ್: ಅಂತಾರಾಜ್ಯ ಬಸ್‌ ಸಂಚಾರಕ್ಕೆ ಸಿಕ್ಕಿಲ್ಲ ಇನ್ನೂ ಅನುಮತಿ!

ಆರ್‌.ಸಿ.ಭಟ್‌ ಮಂಗಳೂರು ಮಂಗಳೂರು: ಕೇಂದ್ರ ಸರಕಾರ ಆಗಸ್ಟ್‌ ಮೊದಲ ವಾರದಲ್ಲೇ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ಸಂದರ್ಭ ಅಂತರ್‌ ರಾಜ್ಯ ಸಂಚಾರಕ್ಕೆ ಇರುವ ನಿರ್ಬಂಧವನ್ನು ತೆರವು ಮಾಡಿತ್ತು. ಆದರೆ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ 19 ಪ್ರಕರಣ ಹೆಚ್ಚಾಗಿರುವ ಕಾರಣದಿಂದ ದಕ್ಷಿಣ ಕನ್ನಡ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಿಲ್ಲ. ಅಲ್ಲದೆ ಪ್ರಕರಣ ನ್ಯಾಯಾಲಯದಲ್ಲಿ ಇದೆ ಎಂಬ ಕಾರಣ ಮುಂದಿಟ್ಟು ರಸ್ತೆ ತೆರವು ಮಾಡಲು ನಿರಾಕರಿಸಿತ್ತು. ಕೇರಳ ಸರಕಾರ ರಸ್ತೆ ಸಂಚಾರಕ್ಕೆ ಮುಕ್ತ ಅವಕಾಶ ನೀಡದ ಹಿನ್ನೆಲೆಯಲ್ಲಿ ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್‌ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ಹೈಕೋರ್ಟ್‌ ತೀರ್ಪು ಪ್ರಕಟಿಸಿ ರಸ್ತೆ ಸಂಚಾರವನ್ನು ಮುಕ್ತಗೊಳಿಸಬೇಕು ಎಂದು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಂಚಾರಕ್ಕೆ ಇದ್ದ ನಿರ್ಬಂಧ ತೆರವುಗೊಂಡು ಎಲ್ಲ ರಸ್ತೆಗಳಲ್ಲಿ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಆದರೆ ಮುಕ್ತ ಸಂಚಾರಕ್ಕೆ ಅವಕಾಶ ಸಿಕ್ಕರೂ ಕೇರಳದ ಕಾಸರಗೋಡು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಸಂಚಾರ ಆರಂಭಿಸುವ ಬಗ್ಗೆ ಉಭಯ ರಾಜ್ಯಗಳು ಇದುವರೆಗೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಕಾಸರಗೋಡಿನಿಂದ ಮಂಗಳೂರಿಗೆ ಸೆ.21ರಿಂದ ಬಸ್‌ ಆರಂಭಿಸಲಾಗುವುದು ಎಂದು ಕೇರಳ ಸಾರಿಗೆ ಸಂಸ್ಥೆ ತಿಳಿಸಿದ್ದರೂ ಬಸ್‌ ಸಂಚಾರ ಆರಂಭವಾಗಿಲ್ಲ. ಆರು ತಿಂಗಳಿನಿಂದ ಸಂಚಾರ ಬಂದ್‌ ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳ ನಡುವೆ 21 ಸಂಪರ್ಕಿಸುವ ರಸ್ತೆಗಳಿದ್ದು, ಅವುಗಳಲ್ಲಿ 12 ಮಾರ್ಗಗಳಲ್ಲಿ ಅಂತಾರಾಜ್ಯ ಬಸ್‌ ಸಂಚಾರವಾಗುತ್ತಿದೆ. ಮಾರ್ಚ್ ತಿಂಗಳ ಅಂತ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದಲೇ ಈ ಎಲ್ಲ ರಸ್ತೆಗಳ ಸಂಚಾರ ನಿರ್ಬಂಧಿಸಲಾಗಿತ್ತು. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಬಂಧ ಸಡಿಲಿಸಿದ್ದರೂ ಕೇರಳ ಸರಕಾರ ಸಂಚಾರಕ್ಕೆ ಅನುವು ಮಾಡಿರಲಿಲ್ಲ. ಒಟ್ಟಾರೆ ಕಳೆದ ಆರು ತಿಂಗಳಿನಿಂದ ಬಸ್‌ ಸಂಚಾರ ಇಲ್ಲದೆ ಉಭಯ ರಾಜ್ಯದ ಸಾವಿರಾರು ಮಂದಿ ಪ್ರಯಾಣಿಕರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಪ್ರತಿನಿತ್ಯ 5 ಸಾವಿರ ಮಂದಿ ಸಂಚಾರದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಸರಗೋಡಿಗೆ ಹಾಗೂ ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಗೆ ಪ್ರತಿನಿತ್ಯ 150ಕ್ಕೂ ಅಧಿಕ ಬಸ್‌ ಟ್ರಿಪ್‌ ಸಂಚಾರ ನಡೆಸುತ್ತಿದ್ದು, 5 ಸಾವಿರಕ್ಕೂ ಅಧಿಕ ಮಂದಿ ಅತ್ತಿಂದಿತ್ತ ಸಂಚರಿಸುತ್ತಿದ್ದಾರೆ. ಆದರೆ ಈಗ ಬಸ್‌ ಇಲ್ಲದೆ ಇವರೆಲ್ಲರ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ. ಕಾಸರಗೋಡು ಸಂಪರ್ಕಿಸುವ ಅಂತಾರಾಜ್ಯ ರಸ್ತೆ ಸಂಚಾರ ಮುಕ್ತಗೊಳಿಸುವ ಬಗ್ಗೆ ಕೇರಳ ಹೈಕೋರ್ಟ್‌ ನೀಡಿರುವ ಆದೇಶವನ್ನು ಗಮನಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ನಡುವೆ ಕೆಎಸ್ಆರ್ ಟಿಸಿ ಬಸ್‌ ಸಂಚಾರ ಆರಂಭಿಸುವ ಬಗ್ಗೆ ಜಿಲ್ಲಾಧಿಕಾರಿಗೆ ತಿಳಿಸಿದ್ದೇವೆ. ಅಂತಾರಾಜ್ಯ ಸಂಚಾರ ವ್ಯವಸ್ಥೆ ಆಗಿರುವ ಕಾರಣ ಎರಡೂ ರಾಜ್ಯ ಸರಕಾರಗಳು ಈ ಬಗ್ಗೆ ನಿರ್ಧಾರ ಕೈಗೊಂಡ ಬಳಿಕವೇ ಬಸ್‌ ಸಂಚಾರ ಆರಂಭಿಸುವ ಬಗ್ಗೆ ನಿರ್ಧರಿಸಲಿದ್ದೇವೆ. ಅರುಣ ಕುಮಾರ್‌, ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು


from India & World News in Kannada | VK Polls https://ift.tt/3kFAOfR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...