ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಎರಡು ಬಾರಿ ಚಾಂಪಿಯನ್ಸ್ ಉತ್ತಮ ಆರಂಭ ಕಂಡಿಲ್ಲ. ಬುಧವಾರ ರಾತ್ರಿ ನಾಲ್ಕು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 49 ರನ್ಗಳ ಸೋಲು ಅನುಭವಿಸಿತು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಸೋಲು ಒಪ್ಪಿಕೊಂಡ ಕೆಕೆಆರ್ ನಾಯಕ 'ತುಕ್ಕು ಹಿಡಿದ ದಿನ' ಎಂದು ಬಣ್ಣಿಸಿದರು. ಮುಂಬೈ ಇಂಡಿಯನ್ಸ್ ಗೆಲುವಿನ ಶ್ರೇಯ ನಾಯಕ ರೋಹಿತ್ ಶರ್ಮಾಗೆ ಸಲ್ಲುತ್ತದೆ. ಅವರು 54 ಎಸೆತಗಳಲ್ಲಿ 80 ರನ್ಗಳನ್ನು ಗಳಿಸಿದ್ದರು. ಸೀಮಿತ ಓವರ್ಗಳ ಸ್ವರೂಪದಲ್ಲಿ ಅವರನ್ನು ಶ್ರೇಷ್ಠ ಬ್ಯಾಟ್ಸ್ಮನ್ ಎಂದು ಏಕೆ ಕರೆಯುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಮುರಿದರು. ಕೆಕೆಆರ್ ವಿರುದ್ಧ ಅತಿ ಹೆಚ್ಚು ರನ್ಗಳನ್ನು ಗಳಿಸಿರುವ ಸನ್ ರೈಸರ್ಸ್ ಹೈದರಾಬಾದ್ನ ನಾಯಕ ಡೇವಿಡ್ ವಾರ್ನರ್ ಅವರನ್ನು ಹಿಂಬಾಲಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ ಭಾರತದ ಎರಡನೇ ಹಾಗೂ ಒಟ್ಟಾರೆ ನಾಲ್ಕನೇ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ರೋಹಿತ್ ಶರ್ಮಾ(200 ಸಿಕ್ಸರ್) ಮಾಡಿದರು. ಬೌಲಿಂಗ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹೇಳಿಕೊಳ್ಳುವಂತ ಪ್ರದರ್ಶನ ತೋರಲಿಲ್ಲ. ಪ್ರೀಮಿಯರ್ ಬೌಲರ್ ಪ್ಯಾಟ್ ಕಮಿನ್ಸ್ ಅವರು ಕೂಡ ತಂಡಕ್ಕೆ ಆಸರೆಯಾಗಲಿಲ್ಲ. ಅವರು ಮೂರು ಓವರ್ಗಳ ಸ್ಪೆಲ್ನಲ್ಲಿ ದುಬಾರಿ ಬೌಲರ್ ಎನಿಸಿಕೊಂಡರು. ಶಿವಂ ಮಾವಿ ಡೆತ್ ಓವರ್ನಲ್ಲಿ ತೋರಿದ ಚಾಣಾಕ್ಷತನ ಹಾಗೂ ಸುನೀಲ್ ಮಧ್ಯಮ ಓವರ್ಗಳಲ್ಲಿ ಮಾಡಿದ ಕಮ್ಬ್ಯಾಕ್ನಿಂದ ಮುಂಬೈ ಇಂಡಿಯನ್ಸ್ ತಂಡವನ್ನು 195 ರನ್ಗಳಿಗೆ ಕಟ್ಟಿ ಹಾಕಲು ಸಾಧ್ಯವಾಯಿತು. ಜಸ್ಪ್ರಿತ್ ಬುಮ್ರಾ ಅವರ ಮಾಸ್ಟರ್ ಕ್ಲಾಸ್ ಬೌಲಿಂಗ್ ಎದುರು ಕೆಕೆಆರ್ಗೆ ಗುರಿ ತಲುಪಲು ತುಂಬಾ ಕಷ್ಟವಾಯಿತು. ಅದ್ಭುತ ಬೌಲಿಂಗ್ ಮಾಡಿದ ಬುಮ್ರಾ ಮೊದಲ ಮೂರು ಓವರ್ಗಳಲ್ಲಿ ಕೇವಲ 5 ರನ್ ನೀಡಿದರು. ಇಯಾನ್ ಮಾರ್ಗನ್ ಹಾಗೂ ಆಂಡ್ರೆ ರಸೆಮ್ ಅವರನ್ನು ಬುಮ್ರಾ ಬಹುಬೇಗ ಕಟ್ಟಿಹಾಕಿದರು. ಆದರೆ, ಬುಮ್ರಾ ಅವರ ಕೊನೆಯ ಓವರ್ನಲ್ಲಿ ಪ್ಯಾಟ್ ಕಮಿನ್ಸ್ ನಾಲ್ಕು ಸಿಕ್ಸರ್ಗಳನ್ನು ಸಿಡಿಸಿದರು. ಆದಾಗ್ಯೂ ಕೆಕೆಆರ್ ಸೋಲು ಅನುಭವಿಸಬೇಕಾಯಿತು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಸೋಲಿನ ಕುರಿತು ವಿಶ್ಲೇಷಣೆ ಮಾಡಲು ಕೋಲ್ಕತಾ ನೈಟ್ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್ ನಿರಾಕರಿಸಿದರು ಹಾಗೂ ತಂಡದ ಆಟಗಾರರು ತುಕ್ಕು ಹಿಡಿದಿರುವುದು ಸೋಲಿಗೆ ಕಾರಣ ಎಂದು ಹೇಳಿದರು. "ಬ್ಯಾಟಿಂಗ್ ಹಾಗೂ ಬೌಲಿಂಗ್ ಉತ್ತಮ ಪ್ರದರ್ಶನ ತೋರಲು ನಮಗೆ ತುಂಬಾ ಆಯ್ಕೆಗಳಿವೆ. ಪ್ರಾಮಾಣಿಕವಾಗಿ ಹೇಳುವುದಾದರೆ, ನಮ್ಮ ಪಾಲಿಗೆ ಮೊದಲನೇ ಪಂದ್ಯ ತುಕ್ಕು ಹಿಡಿದಂತಿತ್ತು. ಹಾಗಾಗಿ ಈ ಬಗ್ಗೆ ವಿಶ್ಲೇಷಣೆ ಮಾಡುವುದಿಲ್ಲ. ಪರವಾಗಿಲ್ಲ ನಮ್ಮ ಹುಡುಗರು ಇಂದಿನ ಪಂದ್ಯದಲ್ಲಿನ ತಪ್ಪುಗಳನ್ನು ಮನವರಿಕೆ ಮಾಡಿಕೊಂಡು ಮುಂದಿನ ಕಾದಾಟಕ್ಕೆ ಸಿದ್ದರಾಗಲಿದ್ದಾರೆ," ಎಂದು ಹೇಳಿದರು. "ಪ್ಯಾಟ್ ಕಮಿನ್ಸ್, ಇಯಾನ್ ಮಾರ್ಗನ್ ಅವರು ಪಂದ್ಯದ ದಿನದಲ್ಲಿಯೇ ಕ್ವಾರಂಟೈನ್ ಮುಗಿಸಿದ್ದಾರೆ. ಇಲ್ಲಿನ ಬಿಸಿ ವಾತಾವರಣದಲ್ಲಿ ಆಡುವುದು ತುಂಬಾ ಕಷ್ಟ. ಹಾಗಾಗಿ ಪಂದ್ಯವನ್ನು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಹುಡುಗರು ಉತ್ತಮ ಪ್ರಯತ್ನ ಹಾಕಿದ್ದಾರೆ. ನಾನು ಅಗ್ರ ಕ್ರಮಾಂಕದಲ್ಲಿ ಆಡಿದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಮುಂದಿನ ಪಂದ್ಯದಲ್ಲಿ ನಿಮಗೆ ಗೊತ್ತಾಗಲಿದೆ," ಎಂದು ಹೇಳಿದರು. 49 ರನ್ಗಳಿಂದ ಸೋಲು ಅನುಭವಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ, 2013ರ ಬಳಿಕ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸೋತಿರುವುದು ಇದೇ ಮೊದಲು. ಸೆ. 26 ರಂದು ಅಬು ಧಾಬಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಎರಡನೇ ಪಂದ್ಯದಲ್ಲಿ ಸೆಣಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/33VsVfK