ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮೂರು ವಿಕೆಟ್ಗಳನ್ನು ಪಡೆಯುವ ಮೂಲಕ 97 ರನ್ಗಳ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವಿಗೆ ನೆರವಾದ ಯುವ ಸ್ಪಿನ್ನರ್ ತಮ್ಮ ಪ್ರದರ್ಶನದ ಶ್ರೇಯವನ್ನು ಮುಖ್ಯ ಕೋಚ್ ಅನಿಲ್ ಕುಂಬ್ಳೆಗೆ ಅರ್ಪಿಸಿದರು. 19 ವಯೋಮಿತಿ ಭಾರತ ತಂಡದ ಸ್ಪಿನ್ನರ್, ಪಂದ್ಯದಲ್ಲಿ ಮಾಡಿದ ನಾಲ್ಕು ಓವರ್ಗಳಲ್ಲಿ 32 ರನ್ಗಳನ್ನು ನೀಡಿ 3 ವಿಕೆಟ್ಗಳನ್ನು ಕಬಳಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿ 206 ರನ್ ಗಳಿಸಿದ , ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 17 ಓವರ್ಗಳಲ್ಲಿ 109 ರನ್ಗಳಿಗೆ ಆಲೌಟ್ ಮಾಡಿತ್ತು. ಬಿಷ್ಣೋಯ್ ಜತೆಗೆ ಮುರುಗನ್ ಅಶ್ವಿನ್ ಕೂಡ ಮೂರು, ಶೆಲ್ಡನ್ ಕಾಟ್ರೆಲ್ ಎರಡು ವಿಕೆಟ್ಗಳನ್ನು ಪಡೆದರು. ವಿರಾಟ್ ಕೊಹ್ಲಿ ನಾಯಕತ್ವದ ಆರ್ಸಿಬಿ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಯಿತು. ಆರೋನ್ ಫಿಂಚ್(20), ಎಬಿ ಡಿವಿಲಿಯರ್ಸ್(28), ವಾಷಿಗ್ಟನ್ ಸುಂದರ್(30) ಹಾಗೂ ಶಿವಂ ದುಬೆ (12) ಮಾತ್ರ ಆರ್ಸಿಬಿ ಪರ ಎರಡಂಕಿ ವೈಯಕ್ತಿಕ ಮೊತ್ತ ಕಲೆ ಹಾಕಿದರು. ಇನ್ನುಳಿದಂತೆ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಒಂದು ರನ್ಗೆ ವಿಕೆಟ್ ಕೊಟ್ಟರೆ, ಜಾಶ್ ಫಿಲಿಪ್ ಶೂನ್ಯಕ್ಕೆ ಔಟ್ ಆದರು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ ಬಿಷ್ಣೋಯ್, "ನನ್ನ ಕೌಶಲ ಹಾಗೂ ಸಾಮರ್ಥ್ಯದಲ್ಲಿ ಬೆಳವಣಿಗೆ ಸಾಧಿಸುವ ಹಾದಿಯಲ್ಲಿ ಅನಿಲ್ ಸರ್, ಶಾಂತ ಸ್ವಭಾವದಿಂದ ಬೆಂಬಲಿಸಿದರು. ನಾವು ಟೂರ್ನಿ ಆರಂಭಕ್ಕೂ ಮುನ್ನ ಇಲ್ಲಿ ನಡೆದ ಕ್ಯಾಂಪ್ನಲ್ಲಿ ಪೂರ್ವ ತಯಾರಿ ನಡೆಸಿದ್ದೆವು. ಮಾನಸಿಕ ಸಾಮರ್ಥ್ಯದ ಮೇಲೆ ಗಮನ ಹರಿಸಿದ್ದರಿಂದ, ಕೆಟ್ಟ ಎಸೆತಗಳು ಹಾಕುವುದಕ್ಕೆ ಕಡಿವಾಣ ಹಾಕಲಾಯಿತು," ಎಂದು ಹೇಳಿದರು. "ನಾವು ಸಾಧ್ಯವಾದಷ್ಟು ಕಡಿಮೆ ರನ್ಗಳಿಗೆ ಆರ್ಸಿಬಿ ತಂಡವನ್ನು ನಿಯಂತ್ರಿಸುವ ಯೋಜನೆಯನ್ನು ಹಾಕಿಕೊಂಡಿದ್ದೆವು. ಮೈದಾನದಲ್ಲಿ 180 ರನ್ಗಳ ಗುರಿಯನ್ನು ಎದುರಾಳಿಗೆ ನೀಡಿದ್ದೇವೆ ಎಂಬ ಮನಸ್ಥಿತಿಯೊಂದಿಗೆ ಆಡಲಾಯಿತು," ಎಂದು ಅವರು ತಿಳಿಸಿದರು. ಇದಕ್ಕೂ ಮುನ್ನ ಕೆ.ಎಲ್ ರಾಹುಲ್ 69 ಎಸೆತಗಳಿಗೆ ಅಜೇಯ 132 ರನ್ಗಳನ್ನು ಗಳಿಸಿದ್ದರು. ಇದರಲ್ಲಿ ಏಳು ಸಿಕ್ಸರ್ಗಳು ಹಾಗೂ 14 ಬೌಂಡರಿಗಳಿದ್ದವು. ಇಂಡಿಯನ್ ಪ್ರೀಮಿಯರ್ ಲೀಗ್ಇತಿಹಾಸದಲ್ಲಿ ಅತ್ಯಂತ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡರು. ಅಲ್ಲದೆ, ಐಪಿಎಲ್ನಲ್ಲಿ ಅತಿ ವೇಗವಾಗಿ 2000 ರನ್ಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಸಾಧನೆಯನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಮಾಡಿದರು. ಆ ಮೂಲಕ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಮಾಡಿದ್ದ ದಾಖಲೆಯನ್ನು ಕರ್ನಾಟಕದ ಆರಂಭಿಕ ಬ್ಯಾಟ್ಸ್ಮನ್ ಹಿಂದಿಕ್ಕಿದರು. ಸಚಿನ್ 63 ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರು. ಆದರೆ, ರಾಹುಲ್ 60 ಇನಿಂಗ್ಸ್ಗಳಲ್ಲಿ ಈ ಮೈಲುಗಲ್ಲು ಸ್ಥಾಪಿಸಿದರು. ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ ಕೆ.ಎಲ್ ರಾಹುಲ್ ಬಗ್ಗೆ ಮಾತನಾಡಿದ ರವಿ ಬಿಷ್ಣೋಯ್, 'ಅವರು ಕ್ಲಾಸ್ ಆಟಗಾರ' ಎಂದು ಬಣ್ಣಿಸಿದರು. "ಶಕ್ತಿಯುತ ಬ್ಯಾಟಿಂಗ್ ಕೌಶಲವನ್ನು ಹೊಂದಿರುವ ಅವರು ಕ್ಲಾಸ್ ಬ್ಯಾಟ್ಸ್ಮನ್. ಪ್ರತಿಯೊಬ್ಬರು ಅವರ ಬ್ಯಾಟಿಂಗ್ ಅನ್ನು ಪದೇ-ಪದೆ ನೋಡಲು ಇಚ್ಚಿಸುತ್ತಾರೆ," ಎಂದು ಹೇಳಿದ ರವಿ ಬಿಷ್ಣೋಯ್, "ಯಜ್ವೇಂದ್ರ ಚಹಲ್ ಅವರ ಬೌಲಿಂಗ್ ಹೇಗೆ ಎದುರಿಸಬೇಕು ಎಂಬ ಬಗ್ಗೆ ಯಾವುದೇ ಗೇಮ್ ಪ್ಲ್ಯಾನ್ ಇರಲಿಲ್ಲ. ನಾವು ನಮ್ಮ ಪಂದ್ಯದ ಯೋಜನೆಯೊಂದಿಗೆ ಆಡಿದೆವು," ಎಂದು ರವಿ ಬಿಷ್ಣೋಯ್ ತಿಳಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2EAHFbg