ಬೆಂಗಳೂರು: ಲಾಕ್ಡೌನ್ ಅವಧಿಯಲ್ಲಿ ಕೃಷಿಕರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ವಿತರಣೆ ಮಾಡಿದ 'ಗ್ರೀನ್ ಪಾಸ್' ಉಪಯುಕ್ತತೆಯಿಂದ ಪ್ರೇರೇಪಿತರಾಗಿರುವ ಸಚಿವ ಬಿ ಸಿ ಪಾಟೀಲ್ ಅವರು ಈಗ ರೈತರಿಗೆ ಶಾಶ್ವತ ಗುರುತಿನ ಚೀಟಿ ವಿತರಿಸುವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ರೈತನ ಹೆಸರು, ರೈತ ಹೊಂದಿರುವ ಭೂಮಿ ವಿಸ್ತೀರ್ಣ, ಬ್ಯಾಂಕ್ ಖಾತೆ ವಿವರ, ಆಧಾರ್ ಸಂಖ್ಯೆ ಮತ್ತಿತರ ಸಮಗ್ರ ವಿವರಗಳನ್ನು ಒಳಗೊಂಡ ಐಡಿ ಕಾರ್ಡ್ ವಿತರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಟೀಲ್ ಅವರು 'ವಿಕ'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. 'ಕೃಷಿಕ' ಹೆಸರಿನ ಈ ಗುರುತಿನ ಚೀಟಿಯಲ್ಲಿ ಚಿಪ್ ಒಳಗೊಂಡಿದ್ದು, ಸ್ವೈಪ್ ಮಾಡಿದರೆ ಎಲ್ಲ ವಿವರ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ಈ ಕಾರ್ಡ್ಗಳ ವಿತರಣೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು. ' 'ಈ ಕಾರ್ಡ್ನಲ್ಲಿ ಫಲಾನುಭವಿ ರೈತರು ಸರಕಾರದ ಯಾವೆಲ್ಲ ಯೋಜನೆ, ಸವಲತ್ತುಗಳಿಗೆ ಅರ್ಹ ಎಂಬುದೂ ಸ್ಪಷ್ಟವಾಗಲಿದೆ. ಬೆಳೆ ಪರಿಹಾರ ವಿತರಿಸಲು ರೈತರ ಖಾತೆ ವಿವರಗಳಿಗಾಗಿ ತಡಕಾಡುವಂತಹ ಸ್ಥಿತಿ ಮುಂದುವರಿಯಬಾರದು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿದೆ,'' ಎಂದರು. ''ಲಾಕ್ಡೌನ್ ಅವಧಿಯಲ್ಲಿ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಎದುರಾದ ಸಮಸ್ಯೆಗಳಿಗೆ ಪರಿಹಾರವೆಂಬಂತೆ 'ಗ್ರೀನ್ ಪಾಸ್' ವಿತರಣೆ ಸುಗಮ ಹಾದಿಗೆ ಸಾಧ್ಯವಾಯಿತು. ಎಲ್ಲ ಉದ್ಯೋಗಿಗಳಿಗೂ ಗುರುತಿನ ಚೀಟಿ ಇರುವಾಗ ಕೃಷಿಕನಿಗೆ ಏಕಿಲ್ಲ ಎಂಬ ಪ್ರಶ್ನೆ ಕಾಡಿತು. ಆಗಲೇ ಈ ಬಗ್ಗೆ ಚಿಂತನೆ ಹೊಳೆಯಿತು. ಅದರ ಪರಿಣಾಮವಾಗಿಯೇ ರೈತರಿಗೆ ಶಾಶ್ವತ ಐಡಿ ಕಾರ್ಡ್ ವಿತರಿಸುವ ಕೆಲಸದ ಸಾಕಾರದ ಹಾದಿ ತುಳಿದಿದ್ದೇನೆ,'' ಎಂದು ಪಾಟೀಲ್ ವಿವರಿಸಿದರು.
from India & World News in Kannada | VK Polls https://ift.tt/3cZ2wRn