ಪೂರ್ವ ಕರಾವಳಿಯ ರಾಜ್ಯಗಳಾದ ಪಶ್ಚಿಮ ಬಂಗಾಳ ಹಾಗೂ ಒಡಿಶಾಗಳು ಅಂಫಾನ್ ಚಂಡಮಾರುತದ ಹಾವಳಿಗೆ ತತ್ತರಿಸಿ ಹೋಗಿವೆ. ಉಭಯ ರಾಜ್ಯಗಳ ಆಸ್ತಿಪಾಸ್ತಿ ಹಾನಿ, ಜೀವಹಾನಿ ಭಿನ್ನ; ಅವುಗಳ ಸನ್ನದ್ಧತೆಯೂ ಭಿನ್ನವಾಗಿತ್ತು. ಈ ಬಗೆಗೆ ಒಂದು ಚಿತ್ರಣ ಇಲ್ಲಿದೆ. ಅಂಫಾನ್ ಎಂಬ ಚಂಡಮಾರುತ ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳನ್ನು ಅಪ್ಪಳಿಸಿದೆ. ಎರಡೂ ರಾಜ್ಯಗಳಲ್ಲಿ ಸಾಕಷ್ಟು ಆಸ್ತಿಹಾನಿಯಾಗಿವೆ. ವಿಶೇಷವೆಂದರೆ ಒಡಿಶಾದಲ್ಲಿಆದ ಜೀವಹಾನಿ 2 ಮಾತ್ರ. ಪಶ್ಚಿಮ ಬಂಗಾಳದಲ್ಲಿ ಸುಮಾರು 72 ಮಂದಿ ಸತ್ತಿದ್ದಾರೆ. ಒಡಿಶಾಕ್ಕಿಂತ ಪ.ಬಂಗಾಳದಲ್ಲಿ ಹೆಚ್ಚು ಆಸ್ತಿಹಾನಿ, ನಷ್ಟ ಸಂಭವಿಸಿದೆ. ಅದಕ್ಕೆ ಕಾರಣ, ಅಂಫಾನ್ ಚಂಡಮಾರುತದ ಕೇಂದ್ರವೇ ಪ.ಬಂಗಾಳಕ್ಕೆ ಸಮೀಪವಾಗಿದ್ದುದು. ಪ್ರಧಾನಿ ಮೋದಿಯವರು ಎರಡೂ ರಾಜ್ಯಗಳಿಗೂ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿ ಪ.ಬಂಗಾಳಕ್ಕೆ 1000 ಕೋಟಿ ರೂ. ಹಾಗೂ ಒಡಿಶಾಗೆ 500 ಕೋಟಿ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಒಡಿಶಾ ತೀರಕ್ಕೆ ಪ್ರತಿವರ್ಷವೂ ಒಂದಿಲ್ಲೊಂದು ಚಂಡಮಾರುತ ಅಪ್ಪಳಿಸುತ್ತಲೇ ಇರುವ ಕಾರಣ ಅದರ ಸಿದ್ಧತೆ ಬಲವಾಗಿತ್ತು. ಪ.ಬಂಗಾಳ ಈ ವಿಚಾರದಲ್ಲಿ ಅನುಭವಿಯಲ್ಲ. ಆದರೂ ಸಕಾಲದಲ್ಲಿ ಎಚ್ಚೆತ್ತುಕೊಂಡು ಸಿದ್ಧತೆಗಳನ್ನು ಮಾಡಿಕೊಂಡು ಹೆಚ್ಚಿನ ಹಾನಿಯನ್ನು ತಡೆದಿದೆ.ಹವಾಮಾನ ಇಲಾಖೆ ಸೋಮವಾರ ಪ.ಬಂಗಾಳದಲ್ಲಿ'ಆರೆಂಜ್ ಮೆಸೇಜ್' ಹೊರಡಿಸಿ, ಕೋಲ್ಕತಾ, ಹೂಗ್ಲಿ, ಹೌರಾ, ದಕ್ಷಿಣ ಮತ್ತು ಉತ್ತರ 24 ಪರಗಣ, ಪೂರ್ವ ಮಿಡ್ನಾಪುರ ಜಿಲ್ಲೆಗಳಲ್ಲಿಅತಿ ಹೆಚ್ಚು ವಿಪತ್ತು ಸಂಭವಿಸುವ ಮುನ್ಸೂಚನೆ ನೀಡಿತು. ಇದೇ ವೇಳೆಗೆ ಅಂಫಾನ್, ಸೂಪರ್ ಸೈಕ್ಲೋನ್ ಆಗಿ ಪರಿವರ್ತಿತವಾಗಿದೆ ಎಂದು ಸುದ್ದಿ ಬಂತು. ಕೊರೊನಾ ಸಂಬಂಧಿತ ಕಾರ್ಯಕ್ರಮಗಳ ನಡುವೆ ರಾಜ್ಯಾಡಳಿತ ಸಮರೋಪಾದಿಯಲ್ಲಿಚುರುಕಾಗಿ, ಸುಮಾರು 5 ಲಕ್ಷ ಜನರನ್ನು ತಗ್ಗು ಪ್ರದೇಶಗಳಿಂದ ಎತ್ತರದ ಪ್ರದೇಶಗಳಿಗೆ ಹಾಗೂ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಿತು. ವಲಸೆ ಕಾರ್ಮಿಕರನ್ನು ತರುವ ಶ್ರಮಿಕ ಸ್ಪೆಶಲ್ ಸೇರಿದಂತೆ ಎಲ್ಲರೈಲು ಸಂಚಾರ ನಿಲ್ಲಿಸಲಾಯಿತು. ಅಂಫಾನ್ ರಾಜ್ಯದಲ್ಲಿಸುಮಾರು 1 ಲಕ್ಷ ಕೋಟಿ ರೂ.ಗಳಷ್ಟು ನಷ್ಟ ಉಂಟುಮಾಡಿದೆ ಎಂಬ ಅಂದಾಜು. ಅಂಫಾನ್ ತೀವ್ರತೆಯ ಸಂದರ್ಭದಲ್ಲಿಗಂಟೆಗೆ 140 ಕಿಲೋಮೀಟರ್ಗಳಷ್ಟು ವೇಗದ ಸುಂಟರಗಾಳಿ ಬೀಸಿತ್ತು. ಇದು ಕಳೆದ 283 ವರ್ಷಗಳಲ್ಲೇ ಪ.ಬಂಗಾಳ ಎದುರಿಸುತ್ತಿರುವ ಅತ್ಯಂತ ಕೆಟ್ಟ ಸೈಕ್ಲೋನ್ ಆಗಿದೆ. 1737ರಲ್ಲಿಬಂದೆರಗಿದ ಗ್ರೇಟ್ ಬೆಂಗಾಲ್ ಸೈಕ್ಲೋನ್ 3 ಲಕ್ಷ ಜನರನ್ನು ಕೊಂದಿತ್ತು. ಆರ್ಥಿಕ ಕೊರತೆ, ಲಾಕ್ಡೌನ್ನಿಂದ ಉಂಟಾಗಿರುವ ಆದಾಯ ಕೊರತೆಗಳಿಂದ ತತ್ತರಿಸಿರುವ ಪ.ಬಂಗಾಳಕ್ಕೆ ಅಂಫಾನ್ ನೀಡಿರುವ ಹೊಡೆತ ಭಾರಿ ಮಟ್ಟದ್ದೇ ಆಗಿದ್ದು, ಚೇತರಿಸಿಕೊಳ್ಳಲು ಹರಸಾಹಸ ಪಡಬೇಕಿದೆ.
ಚಂಡಮಾರುತವನ್ನು ಎದುರಿಸಲು ಒಡಿಶಾ ರಾಜ್ಯ ಸದಾ ಸಿದ್ಧವಾಗಿರುತ್ತದೆ. ಈ ಬಾರಿ ಒಂದೇ ಒಂದು ಜೀವಹಾನಿಯೂ ಆಗಬಾರದು ಎಂದು ಮುಖ್ಯಮಂತ್ರಿ ನವೀನ್ ಪಾಟ್ನಾಯಿಕ್ ಅವರು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದರು. ಇದುವರೆಗೆ 2 ಲಕ್ಷ ಜನರನ್ನು ತಗ್ಗು ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ. 24 ಗಂಟೆಯಲ್ಲಿಸುಮಾರು 11 ಲಕ್ಷ ಜನರನ್ನು ಸ್ಥಳಾಂತರಿಸಲು ಬೇಕಾದ ಸಿದ್ಧತೆ, ಪರಿಹಾರ ಶಿಬಿರಗಳು ರಾಜ್ಯ ಸರಕಾರದ ಬಳಿ ಸಿದ್ಧವಿವೆ. ಕಳೆದ ವರ್ಷ, ರಾಜ್ಯ ಸರಕಾರ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರೂ ಒಡಿಶಾಕ್ಕೆ 'ಫನಿ' ಚಂಡಮಾರುತ ಅಪ್ಪಳಿಸಿ 64 ಜನರನ್ನು ಬಲಿ ಪಡೆದು, ಸಾಕಷ್ಟು ಆಸ್ತಿಹಾನಿ ಮಾಡಿತ್ತು. 1999ರ ನಂತರ ಒಡಿಶಾ ಸರಕಾರ ಕೈಗೊಂಡ ಹಲವು ದೂರದೃಷ್ಟಿಯ ಕಾರ್ಯಗಳೂ ಇಲ್ಲಿನೆರವಾಗಿವೆ. ಸರಕಾರ ಕರಾವಳಿ ಭಾಗದಲ್ಲಿ 800ರಷ್ಟು ಬಹೂದ್ದೇಶದ ಸೈಕ್ಲೋನ್ ಮತ್ತು ನೆರೆ ಪರಿಹಾರ ಕೇಂದ್ರಗಳನ್ನು ತೆರೆದಿತ್ತು. 9000 ಸೈಕ್ಲೋನ್ ಕೇಂದ್ರಗಳು ಹಾಗೂ 7000 ಅಡುಗೆ ಮನೆಗಳು ತಕ್ಷಣ ತೆರೆಯುವಂತೆ ರಾಜ್ಯ ಸರಕಾರದ ಬಳಿ ಇವೆ. ಒಡಿಶಾ ವಿಕೋಪ ನಿರ್ವಹಣೆ ಪ್ರಾಧಿಕಾರ (ಒಡಿಎಂಎ)ಯನ್ನು ರಚಿಸಿತ್ತು. ಒಡಿಶಾ ನಿಸರ್ಗವಿಕೋಪ ತುರ್ತು ಕಾರ್ಯಾಚರಣೆ ಪಡೆ(ಒಡಿಆರ್ಎಎಫ್)ಯನ್ನು ಸಜ್ಜುಗೊಳಿಸಲಾಗಿತ್ತು. 43,000 ಯುವ ಸ್ವಯಂಸೇವಕರನ್ನು ತಯಾರು ಮಾಡಿ, 1000 ತುರ್ತುಸೇವಾ ಸಿಬ್ಬಂದಿ ಹಾಗೂ ಎನ್ಡಿಆರ್ಎಫ್ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. 2013ರಲ್ಲಿಫೈಲಿನ್ ತೂಫಾನ್ ಬಂದೆರಗಿದಾಗ, 2018ರಲ್ಲಿಹುಡ್ಹುಡ್ ಸೈಕ್ಲೋನ್ ಬಂದಾಗಲೂ ಲಕ್ಷಾಂತರ ಮಂದಿಯನ್ನು ಸ್ಥಳಾಂತರಿಸಿ ಜೀವಹಾನಿಯಾಗದಂತೆ ನೋಡಿಕೊಂಡಿತ್ತು.
ಅಂಫಾನ್ ದಾಳಿಯ ಸಂದರ್ಭದಲ್ಲಿ ಸ್ಪಷ್ಟವಾಗಿರುವ ಒಂದು ವಿಚಾರ ಎಂದರೆ, ಭಾರತೀಯ ಹವಾಮಾನ ಇಲಾಖೆಯ ನಿಖರತೆ. ಒಂದು ಕಾಲದಲ್ಲಿಹವಾಮಾನ ಸುದ್ದಿ ಎಂದರೆ ಅಸ್ಪಷ್ಟತೆ ಎಂದೇ ತಿಳಿಯಲಾಗಿತ್ತು. ಆದರೆ ಇಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಷ್ಟು ನಿಖರತೆ ಸಾಧಿಸಿದೆ ಎಂದರೆ, ಅಂಫಾನ್ ಚಂಡಮಾರುತದ ಕೇಂದ್ರ ಯಾವ ರಾಜ್ಯದ ಕರಾವಳಿಯಿಂದ ಎಷ್ಟು ದೂರದಲ್ಲಿದೆ, ಎಷ್ಟು ವೇಗದಲ್ಲಿಚಲಿಸುತ್ತಿದೆ, ಯಾವಾಗ- ಎಲ್ಲಿಅದು ರಾಜ್ಯವನ್ನು ಪ್ರವೇಶಿಸಲಿದೆ ಹಾಗೂ ಮಳೆಯ ರೂಪದಲ್ಲಿನೆಲಕ್ಕೆ ಅಪ್ಪಳಿಸಲಿದೆ (ಲ್ಯಾಂಡ್ಫಾಲ್) ಎಂಬ ನಿಖರವಾದ ಲೆಕ್ಕಾಚಾರವನ್ನು ಉಭಯ ರಾಜ್ಯಗಳಿಗೆ ನೀಡಿತ್ತು. ಡಾಪ್ಲರ್ ವೆದರ್ ರೇಡಾರ್ ಬಳಸಿ ಅದು ಸಂಗ್ರಹಿಸಿದ ಮಾಹಿತಿ, ಹೆಚ್ಚಿನ ಜೀವ- ಅಸ್ತಿಹಾನಿ ತಡೆಯಲು ನೆರವಾಗಿದೆ.
1999ರಲ್ಲಿ ಒಡಿಶಾ ಸೂಪರ್ ಸೈಕ್ಲೋನ್ ರಾಜ್ಯಕ್ಕೆ ಅಪ್ಪಳಿಸಿ ಸುಮಾರು 10,000 ಮಂದಿಯನ್ನು ಬಲಿ ತೆಗೆದುಕೊಂಡಿತ್ತು. ಈ ಕರಾಳ ನೆನಪು ರಾಜ್ಯದಲ್ಲಿಇನ್ನೂ ಮಾಸಿಲ್ಲ. ಆಗ ಇಡೀ ರಾಜ್ಯದಲ್ಲಿಇದ್ದದ್ದು ಒಂದೇ ಸ್ಯಾಟಲೈಟ್ ಫೋನ್. ಅದೂ ಕೂಡ ಮುಖ್ಯಮಂತ್ರಿಯ ನಿವಾಸದಲ್ಲಿತ್ತು. ಮೊಬೈಲ್ಗಳು ಇರಲಿಲ್ಲ. ಟೆಲಿಕಾಂ ತಂತಿಗಳು ಸಂಪರ್ಕ ಕಡಿದುಕೊಂಡಿದ್ದವು. ಸೈಕ್ಲೋನ್ನ ಎಚ್ಚರಿಕೆ ತಲುಪಿಸಲು ರೇಡಿಯೋ, ದೂರದರ್ಶನ ಹಾಗೂ ಮುದ್ರಣ ಮಾಧ್ಯಮ ಹೊರತುಪಡಿಸಿ ಬೇರೆ ಮಾಧ್ಯಮ ಇರಲಿಲ್ಲ. ಸಮುದ್ರಕ್ಕೆ ಮೀನು ಹಿಡಿಯಲು ತೆರಳುವ ಬೆಸ್ತರು ರೇಡಿಯೋ ಆಲಿಸುವುದು ಅಥವಾ ಟಿವಿ ವೀಕ್ಷಣೆ ಮಾಡುತ್ತಿರಲಿಲ್ಲ. ಆದರೆ 2020ರ ವೇಳೆಗೆ ಉಭಯ ರಾಜ್ಯಗಳಲ್ಲೂನೈಸರ್ಗಿಕ ವಿಕೋಪ ಸಿದ್ಧತೆಯ ಚಿತ್ರಣ ಬದಲಾಗಿದೆ. ಮೀನುಗಾರರಿಗೆ ಕರಾವಳಿ ಸೈರನ್ಗಳ ಮೂಲಕ ಎಚ್ಚರಿಕೆ ನೀಡುವುದು ಮಾತ್ರವಲ್ಲ; ಅದಕ್ಕಾಗಿಯೇ ಮೀಸಲಾದ ನಿಸ್ತಂತು ಸೇವಾ ವ್ಯವಸ್ಥೆಗಳೂ ಇವೆ. ಅಂಫಾನ್ ಚಂಡಮಾರುತ ಸಂದರ್ಭದಲ್ಲಿಬೆಸ್ತರಿಗಾಗಿಯೇ ಲಕ್ಷಾಂತರ ಎಚ್ಚರಿಕೆ ಮೆಸೇಜುಗಳು ಹರಿದಾಡಿದವು. ಪ್ರತಿಯೊಬ್ಬ ವ್ಯಕ್ತಿಗೂ ಸಂದೇಶ ತಲುಪುವಂತೆ ನೋಡಿಕೊಳ್ಳಲಾಯಿತು. ರೇಡಿಯೋ ಹಾಗೂ ಟಿವಿ ವಾಹಿನಿಗಳು ಸಾಕಷ್ಟು ಸಕ್ರಿಯವಾಗಿ ಎಚ್ಚರಿಕೆ ಪ್ರಸಾರ ಮಾಡಿದವು. ಸಾರ್ವಜನಿಕ ಸೇವಾ ವಾಹನಗಳ ಜತೆಗೆ ಆಟೋರಿಕ್ಷಾಗಳ ಮೇಲೂ ಸುರಕ್ಷತಾ ಸಂದೇಶಗಳನ್ನು ಬಿತ್ತರಿಸಲಾಯಿತು. ಸರಕಾರದ ಡೇಟಾ, ಸರಕಾರಿ- ಅನುದಾನಿತ ಸಂಸ್ಥೆಗಳು ಬಿಗ್ ಡೇಟಾ ನೆರವು ಪಡೆದು, ಆಧುನಿಕ ಸಂದೇಶವಾಹಕ ತಂತ್ರಜ್ಞಾನಗಳ ಮೂಲಕ ಸುಮಾರು 50 ಲಕ್ಷ ಮಂದಿಗೆ ತಲುಪುವಂತೆ ಎಚ್ಚರಿಕೆ ಸಂದೇಶಗಳನ್ನು ತಲುಪಿಸಲಾಯಿತು. ಪೊಲೀಸ್ ಪಡೆಗಳ ಬಳಕೆ, ಟಿವಿ ಜಾಹೀರಾತುಗಳ ಮೂಲಕ ಪ್ರಚಾರ, ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಎಚ್ಚರಿಕೆ ಸಂದೇಶಗಳನ್ನು ತಲುಪಿಸಲಾಯಿತು. ಫೇಸ್ಬುಕ್, ವಾಟ್ಸಾಪ್ನಂಥ ಸೋಶಿಯಲ್ ತಾಣಗಳನ್ನೂ ಈ ಕಾರ್ಯದಲ್ಲಿ ಸಾಕಷ್ಟು ಬಳಸಿಕೊಳ್ಳಲಾಯಿತು.
2015ರಲ್ಲಿ ವಿಶ್ವಸಂಸ್ಥೆಯು, ನಿಸರ್ಗ ದುರಂತಗಳನ್ನು ಎದುರಿಸಲು ಒಂದು ಚೌಕಟ್ಟನ್ನು ಸದಸ್ಯ ರಾಷ್ಟ್ರಗಳಿಗೆ ಹಾಕಿಕೊಟ್ಟಿತು. ಇದು 'ಸೆಂಡೈ ಫ್ರೇಮ್ವರ್ಕ್-15' ಎಂದೇ ಹೆಸರಾಗಿದೆ. ನಿಸರ್ಗ ವಿಕೋಪಗಳ ಸಾಧ್ಯತೆ- ಸಾಮರ್ಥ್ಯಗಳನ್ನು ಮೊದಲೇ ಅಂದಾಜಿಸುವುದು, ಸೂಕ್ತ ಕಾಲದಲ್ಲಿ ನಿಖರ ಮಾಹಿತಿ, ಜೀವಹಾನಿ ತಪ್ಪಿಸುವ ಆದ್ಯತಾ ಕಾರ್ಯಕ್ರಮಗಳು, ವಿಕೋಪದ ನಂತರದ ತುರ್ತು ಕಾರ್ಯಾಚರಣೆಗಳಿಗೆ ಅನೇಕ ಮಾರ್ಗದರ್ಶಿ ಸೂತ್ರಗಳನ್ನು ಇದು ಹಾಕಿಕೊಟ್ಟಿದೆ. ''ವಿಶ್ವಸಂಸ್ಥೆಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಭಾರತ ನಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿನಿಸರ್ಗ ವಿಕೋಪ ಎದುರಿಸುವ ರಾಷ್ಟ್ರಗಳಿಗೆ ಮಾದರಿಯಾಗಿ ವರ್ತಿಸಿದೆ,'' ಎಂದು ವಿಶ್ವಸಂಸ್ಥೆಯ ವಿಕೋಪ ತಡೆ ಸಮಿತಿಯ ಮುಖ್ಯಸ್ಥ ಮಾಮಿ ಮಿಜುಟೊರಿ ಫನಿ ಸಂದರ್ಭದಲ್ಲಿ ಹೇಳಿದ್ದರು.
from India & World News in Kannada | VK Polls https://ift.tt/36wtvS4