
ಬೆಂಗಳೂರು: ಕೊರೊನಾ ಲಾಕ್ಡೌನ್ ಪರಿಣಾಮ ಕೈಗಾರಿಕೆ ಸಂಪೂರ್ಣ ಸ್ತಬ್ಧಗೊಂಡಿದ್ದು ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಉದ್ಯೋಗವಿಲ್ಲದೆ, ವಸತಿ ವ್ಯವಸ್ಥೆಯೂ ಇಲ್ಲದೆ ತಮ್ಮ ಊರಿಗೂ ಹೋಗಲು ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸಿಎಂ ಅಭಯ ನೀಡಿದ್ದು ಸರ್ಕಾರ ನಿಮ್ಮ ಬೆನ್ನಿಗೆ ನಿಂತಿದೆ ಎಂದಿದ್ದಾರೆ. ಮೇ 1 ಕಾರ್ಮಿಕ ದಿನವಾಗಿದ್ದು ಕೊರೊನಾ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸಿಎಂ ಶುಭಾಶಯಗಳನ್ನು ಸಲ್ಲಿಸುವುದರ ಜೊತೆಗೆ ಶೀಘ್ರದಲ್ಲೇ ಕೈಗಾರಿಕಾ ಚಟುವಟಿಕೆಗಳು ಪುನರಾರಂಭವಾಗುವ ಭರವಸೆ ನೀಡಿದ್ದಾರೆ. ಕೋವಿಡ್ 19 ಸೋಂಕಿನಿಂದ ದೇಶದಾದ್ಯಂತ ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ತಬ್ಧವಾಗಿದ್ದವು. ಇದರಿಂದ ದುಡಿದು ತಿನ್ನುವ ಕಾರ್ಮಿಕ ಬಂಧುಗಳು ಹೆಚ್ಚಿನ ತೊಂದರೆ ಅನುಭವಿಸಬೇಕಾಯಿತು. ಇಂತಹ ಕಠಿಣ ಸಂದರ್ಭದಲ್ಲಿ ಸರ್ಕಾರ ನಿಮ್ಮ ಬೆನ್ನಿಗೆ ನಿಂತಿದೆ. ನಿಮ್ಮೆಲ್ಲರ ಸಹಕಾರದಿಂದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಶೀಘ್ರದಲ್ಲಿಯೇ ಆರ್ಥಿಕ ಚಟುವಟಿಕೆ ಗಳು ಮತ್ತೆ ಪ್ರಾರಂಭವಾಗುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ವಾಣಿಜ್ಯೋದ್ಯಮಿ ಗಳೊಂದಿಗೆ ಸಭೆ ನಡೆಸಿದ್ದು, ಕಾರ್ಮಿಕರ ಹಿತ ಕಾಯುವ ಹಾಗೂ ವೇತನ ಪಾವತಿ ಮಾಡುವಂತೆ ಮನವಿ ಮಾಡಿದೆ ಎಂದಿದ್ದಾರೆ. ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ವಲಸೆ ಕಾರ್ಮಿಕರು ಆತಂಕಕ್ಕೆ ಒಳಗಾಗದೆ ಕೇಂದ್ರ ಸರ್ಕಾರದ ಸೂಚನೆ ಬಂದೊಡನೆ ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆ ಪುನರಾರಂಭ ಮಾಡಲು ಸಹಕರಿಸುವಂತೆ ಬಿಎಸ್ವೈ ಮನವಿ ಮಾಡಿದ್ದಾರೆ.
from India & World News in Kannada | VK Polls https://ift.tt/2VSxq81