ತೇಲಪಂಡ ಕವನ್ಕಾರ್ಯಪ್ಪ, ಸೋಮವಾರಪೇಟೆ ಮಡಿಕೇರಿ: ಜಿಲ್ಲೆಯಲ್ಲಿ ಅತಿ ಹೆಚ್ಚು ಅರೇಬಿಕಾ ಬೆಳೆಯುವ ತಾಲೂಕಿನ ಬೆಳೆಗಾರರು ಬೆಳೆ ಕೈ ಬಾರದೇ, ಮತ್ತೊಂದೆಡೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೆರವಿಲ್ಲದೇ ಕಂಗಾಲಾಗಿದ್ದಾರೆ. ಕೆಲವು ಕಡೆ ಭೂಕುಸಿತಕ್ಕೆ ಕಾಫಿ ತೋಟ ಮಣ್ಣು ಪಾಲಾಗಿದ್ದರೆ, ಇನ್ನೊಂದೆಡೆ ವಿಪರೀತ ಮಳೆಯಿಂದ ಫಸಲು ಸಂಪೂರ್ಣ ನಷ್ಟವಾಗಿದೆ. ಎರಡು ತಿಂಗಳಿನಿಂದ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಬೆಳವಣಿಗೆ ಹಂತದಲ್ಲಿದ್ದ ಕಾಫಿ ಕಾಯಿ ನೆಲಕ್ಕೆ ಸುರಿದಿದೆ. ಗಿಡಗಳಿಗೆ ಕೊಳೆ ರೋಗ ತಗುಲಿ ಎಲೆಗಳು ಕೊಳೆತು ಉದುರುತ್ತಿವೆ. ನವೆಂಬರ್, ಡಿಸೆಂಬರ್ನಲ್ಲಿ ಹಣ್ಣಾಗಿ ಕೊಯ್ಲಿಗೆ ಬರಬೇಕಾದ ಕಾಫಿ, ಕೆಲವು ಕಡೆ ಈಗಲೇ ಹಣ್ಣಾಗುತ್ತಿತ್ತು, ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಇತ್ತೀಚೆಗೆ ಅರೇಬಿಕಾ ಕಾಫಿಗೆ ದಾಖಲೆಯ ಬೆಲೆ ದೊರೆತಿದ್ದರೂ, ಜಿಲ್ಲೆಯ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗಿರಲಿಲ್ಲ. ತಾಲೂಕಿನ ಒಟ್ಟು 28,540 ಹೆಕ್ಟೇರ್ನಲ್ಲಿಕಾಫಿ ಬೆಳೆಯಲಾಗುತ್ತಿದ್ದು, 22,940 ಹೆಕ್ಟೇರ್ನಲ್ಲಿಅರೇಬಿಕಾ, 5,600 ಹೆಕ್ಟೇರ್ನಲ್ಲಿರೋಬಸ್ಟಾ ಬೆಳೆಯಲಾಗುತ್ತಿದೆ. ಅರೇಬಿಕಾ ಪ್ರದೇಶದಲ್ಲಿಬಹತೇಕ ಕಡೆ ಶೇ.70ರಷ್ಟು ಕಾಫಿ ಫಸಲು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಪುಷ್ಪಗಿರಿ ತಪ್ಪಲಿನ ಗ್ರಾಮಗಳಲ್ಲಿ400ರಿಂದ 500 ಇಂಚು ಸುರಿದಿದ್ದು, ಶೇ.90ರಷ್ಟು ಕಾಫಿ ನಾಶವಾಗಿದೆ. ಮಾದಾಪುರ, ಸುಂಠಿಕೊಪ್ಪ ಸುತ್ತಮುತ್ತ ರೋಬಸ್ಟಾ ಕಾಫಿಯೂ ಹಾನಿಯಾಗಿದೆ. 300ರಿಂದ 400 ಇಂಚು ಮಳೆ ಸುರಿದಿರುವ ಗರ್ವಾಲೆ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮೂವತ್ತೊಕ್ಲು, ಶಿರಂಗಳ್ಳಿ, ಮಾದಾಪುರ ಸುತ್ತಮುತ್ತ ಹಾಗೂ ಹೆಗ್ಗಡಮನೆ, ಕೊತ್ನಳ್ಳಿ, ಕುಡಿಗಾಣ, ನಾಡ್ನಳ್ಳಿ, ಕುಮಾರಳ್ಳಿ-ಬಾಚಳ್ಳಿ, ಮಲ್ಲಳ್ಳಿ, ಕೋಡಳ್ಳಿ ಗ್ರಾಮಗಳಲ್ಲಿ ಅತಿಹೆಚ್ಚು ಬೆಳೆ ನಷ್ಟವಾಗಿದೆ. ಕಾಫಿ ತೋಟಗಳೇ ರೋಗಬಾಧೆಗೆ ತುತ್ತಾಗಿವೆ. ತೋಟಗಳನ್ನು ಸುಸ್ಥಿತಿಗೆ ತರಲು ಮುಂದಿನ ಎರಡು, ಮೂರು ವರ್ಷಗಳು ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಕೆಲವು ಬೆಳೆಗಾರರು ಅರೇಬಿಕ ಕಾಫಿ ಗಿಡಗಳನ್ನು ಕಿತ್ತು ಪರ್ಯಾಯ ಬೆಳೆ ಬೆಳೆಯಲು ಚಿಂತನೆ ನಡೆಸಿದ್ದಾರೆ. ಸರಕಾರದ ನೆರವು ಅಗತ್ಯ ಪ್ರಸಕ್ತ ವರ್ಷ ಕೊಯ್ಲು ಸಂದರ್ಭದಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ಫಸಲು ಹಾನಿಯಾಗಿದೆ. ಹಣ್ಣಾದ ಕಾಫಿಯನ್ನು ನಿಗದಿತ ಸಮಯದಲ್ಲಿ ಕೊಯ್ಲು ಮಾಡಲು ಸಾಧ್ಯವಾಗದೆ ಹಣ್ಣು ಮಣ್ಣು ಸೇರಿತ್ತು. ನಂತರ ಕೊಯ್ಲು ಮಾಡಿದ ಕಾಫಿಯನ್ನು ಪಲ್ಪಿಂಗ್ ಮಾಡಿಸಿ ಒಣಗಿಸಲು ಬಿಸಿಲು ಇಲ್ಲದೆ, ಕಾಫಿಯ ಗುಣಮಟ್ಟವನ್ನು ಕಳೆದುಕೊಂಡು ಸೂಕ್ತ ಬೆಲೆ ಸಿಗದೆ ಬೆಳೆಗಾರರು ಪರದಾಡುವಂತಾಯಿತು. ಆಗಸ್ಟ್ ತಿಂಗಳಲ್ಲಿ ಕಾಫಿ ಹಣ್ಣು ಉದುರುತ್ತಿದೆ. ಸಣ್ಣ ಬೆಳೆಗಾರರು ಹೆಚ್ಚಿನ ಸಮಸ್ಯೆ ಎದುರಿಸುವಂತಾಗಿದೆ. ಸರಕಾರ ಕೂಡ ಬೆಳೆಗಾರರು ಬಳಸುವ 10ಎಚ್.ಪಿ. ವಿದ್ಯುತ್ ಚಾಲಿತ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಹೋರಾಟ ಮಾಡುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಕಾಲಿಕ ಮಳೆ, ಕಾಫಿಗೆ ತಗಲಿರುವ ರೋಗಬಾಧೆ, ಕಾರ್ಮಿಕರ ಸಮಸ್ಯೆ, ಅಧಿಕ ಕೂಲಿ, ಗಗನಕ್ಕೇರಿರುವ ರಾಸಾಯನಿಕ ಗೊಬ್ಬರ ಬೆಲೆ, ಸರಕಾರದ ಇಬ್ಬಗೆ ಧೋರಣೆಯಿಂದ ಅರೇಬಿಕಾ ಕಾಫಿ ಬೆಳೆಗಾರರು ಗಿಡಗಳನ್ನೇ ಕಿತ್ತು ಹಾಕುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ. ಉತ್ತಮ ನಿರ್ವಹಣೆ ಅಗತ್ಯ ಅರೇಬಿಕಾ ಕಾಫಿಯಲ್ಲಿ ಉತ್ತಮ ಫಸಲು ತೆಗೆಯುತ್ತಿದ್ದ ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬ ಹೋಬಳಿಯಲ್ಲಿಅಲ್ಪ ಪ್ರಮಾಣದ ಫಸಲು ನಷ್ಟ ಅನುಭವಿಸಿದರೂ, ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ತೋಟದ ನಿರ್ವಹಣೆ ಮಾಡಿದರೆ ಮಾತ್ರ ಶೇ. 40ರಷ್ಟು ಕಾಫಿ ಫಸಲನ್ನು ಉಳಿಸಿಕೊಳ್ಳಬಹುದು ಎಂದು ಕಾಫಿ ಮಂಡಳಿಯ ನಿವೃತ್ತ ಸಂಪರ್ಕಾಧಿಕಾರಿ ಕಲ್ಲೇಂಗಡ ಅಪ್ಪಚ್ಚು ಹೇಳುತ್ತಾರೆ. ಐದಾರು ವರ್ಷಗಳಿಂದ ಸುರಿದ ಅಕಾಲಿಕ ಮಳೆಯಿಂದ ಬೆಳೆಗಾರರು ನಿರಂತರ ಫಸಲು ನಷ್ಟ ಅನುಭವಿಸಿ ಸಾಲಗಾರರಾಗಿದ್ದಾರೆ. ಈ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಭರಿಸಲಾರದಷ್ಟು ನಷ್ಟವಾಗಿದೆ. ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಮಾಡಿರುವ ಬೆಳೆಗಾರರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ಸರಕಾರ ಬೆಳೆಗಾರರ ರಕ್ಷಣೆ ಮಾಡಬೇಕು. ಬಾಚಿನಾಡಂಡ ಮೋಹನ್ ಬೋಪಣ್ಣ, ಅಧ್ಯಕ್ಷರು, ತಾಲೂಕು ಕಾಫಿ ಬೆಳೆಗಾರರ ಸಂಘ ಕಾಫಿ ಬೆಳೆಗಾರರ ರಕ್ಷಣೆಗೆ ಸರಕಾರ ಮುಂದೆ ಬರಬೇಕಾಗಿದೆ. ಅರೇಬಿಕಾ ಕಾಫಿ ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ. ಆರ್ಥಿಕವಾಗಿ ನಷ್ಟ ಅನುಭವಿಸಿರುವ ಬೆಳೆಗಾರರಿಗೆ ಸೂಕ್ತ ಪರಿಹಾರವನ್ನು ನೀಡಬೇಕು. ಕೊರೊನಾದೊಂದಿಗೆ ಹವಾಮಾನ ವೈಪರೀತ್ಯ ಕೂಡ ಬೆಳೆಗಾರರ ಬದುಕಿಗೆ ಕೊಳ್ಳಿ ಇಟ್ಟಿದೆ. ಹರಪಳ್ಳಿ ರವೀಂದ್ರ, ಕಾಫಿ ಬೆಳೆಗಾರರು, ಸೋಮವಾರಪೇಟೆ
from India & World News in Kannada | VK Polls https://ift.tt/3kXNyk1