ಸಂತೆಬೆನ್ನೂರು: ರಾಜ್ಯದ ಪ್ರವಾಸಿ ತಾಣ, ಐತಿಹಾಸಿಕ ಪುಷ್ಕರಣಿಯ ಊರು ಹೋಬಳಿಯ 30ಕ್ಕೂ ಹೆಚ್ಚು ಹಳ್ಳಿಗಳು ಕೆಎಸ್ಆರ್ಟಿಸಿ ಬಸ್ಗಳ ಮುಖವನ್ನೇ ಕಂಡಿಲ್ಲ. ಈ ಹಳ್ಳಿಗಳ ವಿದ್ಯಾರ್ಥಿಗಳು, ರೈತರು, ನೌಕರರು, ಸಾರ್ವಜನಿಕರು ನಿತ್ಯ ಓಡಾಟಕ್ಕೆ ಸೈಕಲ್, ಬೈಕ್, ಆಪೆ ಆಟೋಗಳನ್ನು ಅವಲಂಬಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಶತಕದಂಚಿಗೆ ಬಂದರೂ ಹಳ್ಳಿಗಳು ಈ ತನಕ ಸಾರಿಗೆ ಬಸ್ನ ಸೌಕರ್ಯ ಹೊಂದಿಲ್ಲ. ಆರೋಗ್ಯ, ಶಿಕ್ಷಣ, ಕೃಷಿ, ವ್ಯಾಪಾರ, ಪ್ರವಾಸೋದ್ಯಮ ಮತ್ತು ಕೌಟುಂಬಿಕ ಸಂಪರ್ಕಕ್ಕೆ ಬಸ್ ಸೌಕರ್ಯ ಇಲ್ಲದೆ ಜನರು ರೋಸಿ ಹೋಗಿದ್ದಾರೆ. ಪ್ರವಾಸಿಗರ ಪರದಾಟ: ಐತಿಹಾಸಿಕ ಪ್ರವಾಸಿ ತಾಣ, ರಾಜ್ಯದ ನಾಲ್ಕನೇ ಅತೀ ದೊಡ್ಡ ಹೋಬಳಿ ಕೇಂದ್ರ ಎಂಬ ಹೆಗ್ಗಳಿಕೆಗೆ ಸಂತೆಬೆನ್ನೂರು ಪಾತ್ರವಾಗಿದೆ. ಆದರೆ, ಹೋಬಳಿ ವ್ಯಾಪ್ತಿಗೆ ಬರುವ 43 ಹಳ್ಳಿಗಳಲ್ಲಿ 30 ಕ್ಕೂ ಹೆಚ್ಚು ಹಳ್ಳಿಗಳಿಗೆ ಸಾರಿಗೆ ಬಸ್ ಸೌಲಭ್ಯವೇ ಇಲ್ಲ. ಕೆಲ ಹಳ್ಳಿಗಳಿಗೆ ಖಾಸಗಿ ಬಸ್ ಸೌಕರ್ಯ ಇದೆ. ಇನ್ನು ಐತಿಹಾಸಿಕ ಪುಷ್ಕರಣಿಗೆ ದಿನಕ್ಕೆ ಸಾವಿರಾರು ಪ್ರವಾಸಿಗರು ಬರುತ್ತಿದ್ದು, ಗ್ರಾಮಕ್ಕೆ ಚಿತ್ರದುರ್ಗ, ಶಿವಮೊಗ್ಗ, ಶಿಕಾರಿಪುರ ನಗರಗಳಿಂದ ಸರಕಾರಿ ಬಸ್ಸಿನ ಸೌಕರ್ಯ ಇಂದಿಗೂ ಇಲ್ಲ. ಹೆದ್ದಾರಿ ಇದ್ದರೂ ಬಸ್ ಇಲ್ಲ: ಹೋಬಳಿಯಲ್ಲಿ ರಾಷ್ಟ್ರೀಯ, ರಾಜ್ಯ ಎರಡು ಹೆದ್ದಾರಿಗಳು ಹಾದು ಹೋದರೂ ಸರಕಾರಿ ಬಸ್ಗಳಾಗಲಿ, ಖಾಸಗಿ ಬಸ್ಗಳಾಗಲಿ ಪೂರ್ಣ ಪ್ರಮಾಣದಲ್ಲಿ ಇಲ್ಲ. ಸಂತೆಬೆನ್ನೂರು ಪ್ರವಾಸಿ, ಶೈಕ್ಷಣಿಕ ಕ್ಷೇತ್ರವಾಗಿರುವುದರಿಂದ 43 ಹಳ್ಳಿಗಳಿಂದ ದಿನಕ್ಕೆ ಸುಮಾರು 1800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರಾಮಕ್ಕೆ ವಿದ್ಯಾಭ್ಯಾಸಕ್ಕೆ ಆಗಮಿಸುತ್ತಾರೆ. ಹೀಗೆ ಬರುವ ಮಕ್ಕಳಿಗೆ ಬಸ್ ಇಲ್ಲದೆ ಪರದಾಡುವಂತಾಗಿದೆ. ಐದು ಊರಿಗೆ ಬಸ್ ಬಿಡಿ: ನಲ್ಕುದುರೆ, ವೆಂಕಟೇಶ್ವರ ಕ್ಯಾಂಪ್, ಕೋಗಲೂರು ಭಾಗದಿಂದ ಸಂತೆಬೆನ್ನೂರಿಗೆ ಮತ್ತು ಚನ್ನಗಿರಿಗೆ ಹೋಗಲು ಕೇವಲ 3 ಖಾಸಗಿ ಬಸ್ಗಳಿವೆ. ವಿದ್ಯಾರ್ಥಿಗಳು ಮತ್ತು ರೈತರಿಗೆ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಸಂಸದರು ಹಾಗೂ ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ನಾಡೋಜ ಚಿಮೂ ಪ್ರತಿಷ್ಠಾನದ ಕಾರ್ಯದರ್ಶಿ ಜಗದೀಶ್ಗೌಡ. ಕೆಕೆ ರಾಷ್ಟ್ರೀಯ ಹೆದ್ದಾರಿಯ ಮಾರ್ಗ ಶಿಕಾರಿಪುರ, ಹೊನ್ನಾಳಿ, ಬಸವಪಟ್ಟಣ, ಸೊಳೆಕೆರೆ ಮಾರ್ಗವಾಗಿ ಸಂತೆಬೆನ್ನೂರು, ಚಿತ್ರದುರ್ಗಕ್ಕೆ ಕೇವಲ ಎರಡು ಖಾಸಗಿ ಬಸ್ಗಳಿವೆ. ಸರಕಾರಿ ಬಸ್ ಇವತ್ತಿಗೂ ನೋಡೋಕೆ ಆಗಿಲ್ಲ, ಇನ್ನು ಮುಂದಾದರೂ ವ್ಯವಸ್ಥೆ ಕಲ್ಪಿಸಬೇಕು ಎಂದು ಚನ್ನಾಪುರದ ಶಿಕ್ಷಕ ಶಿವಣ್ಣ ಒತ್ತಾಯಿಸಿದ್ದಾರೆ. ಬಸ್ ಇಲ್ಲದೆ ಸಿಕ್ಕಾಪಟ್ಟೆ ಪರಿತಪಿಸ್ತಾ ಇರುವ ಸಾರ್ವಜನಿಕರು ಬಸ್ಗಾಗಿ ಸಂಸದರಾಗಿರುವ ಜಿ.ಎಂ ಸಿದ್ದೇಶ್ವರ್ ಮತ್ತು ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಈಗಾಗಲೇ ಹಲವು ಬಾರಿ ಮನವಿ ಮಾಡಿದರೂ ಕೂಡ ಸಂಸದರಾಗಲಿ, ಶಾಸಕರಾಗಲಿ ಈವರೆಗೆ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿಲ್ಲ. ಒಂದು ಅಥವಾ ಎರಡು ಹಳ್ಳಿಗೆ ಬಸ್ ವ್ಯವಸ್ಥೆ ಇಲ್ಲವೆಂದಾದರೆ ಹಳ್ಳಿಗಳಿಗೆ ರಸ್ತೆ ಸಂಪರ್ಕ ಅಥವಾ ಜನರ ಸಂಖ್ಯೆ ಕಡಿಮೆ ಇರೋ ಕಾರಣಕ್ಕೆ ಬಸ್ ಸೌಲಭ್ಯ ಇಲ್ಲವೆಂದು ಸಮಾಜಾಯಿಷಿ ನೀಡಬಹುದೇನೋ. ಆದರೆ ಸಂತೆಬೆನ್ನೂರಿನ ಬರೋಬ್ಬರಿ 30 ಕ್ಕೂ ಹೆಚ್ಚು ಹಳ್ಳಿಗಳಿಗೆ ಇಲ್ಲದೆ ಜನರು ಪರದಾಡ್ತಿದ್ದಾರೆ ಅಂದರೆ ಈ ಸಂಸದರಾಗಲಿ ಅಥವಾ ಶಾಸಕರಾಗಲಿ ಅದ್ಯಾವ ರೀತಿಯ ಅಭಿವೃದ್ಧಿ ಕಾರ್ಯ ಮಾಡ್ತಿದ್ದಾರೋ ಏನೋ? ಚುನಾವಣೆ ಹತ್ತಿರ ಬಂದಾಗ ಹತ್ತಾರು ಬಾರಿ ಮತದಾರರ ಮನೆಗೆ ಭೇಟಿ ನೀಡಿ ಮತ ಭಿಕ್ಷೆ ಕೇಳೋ ಇವರು ಚುನಾವಣೆಯಲ್ಲಿ ಗೆದ್ದ ಬಳಿಕ ಜನರಿಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸೋದು ಎಷ್ಟು ಸರಿ ಅನ್ನೋದು ಊರಿನ ಜನರ ಪ್ರಶ್ನೆ. ಇನ್ನಾದರೂ ತಕ್ಷಣ ಎಚ್ಚೆತ್ತು ಎಲ್ಲಾ ಹಳ್ಳಿಗಳಿಗೆ ಬಸ್ ಸೌಲಭ್ಯ ಕಲ್ಪಿಸಲಿ. ಎಸ್.ಜೆ. ಕಿರಣ್
from India & World News in Kannada | VK Polls https://ift.tt/3kSDVD9