ಚಾಮರಾಜನಗರ: ಪೂಜೆ ಮಾಡ್ಕೊಂಡು ಹೋಗು ಅಂದ್ರೆ ಇಲ್ಲೊಬ್ಬ ಅರ್ಚಕ ದೇವಸ್ಥಾನವನ್ನೇ ತನ್ನ ಹೆಸರಿಗೆ ಅಕ್ರಮವಾಗಿ ಮಾಡಿಕೊಳ್ಳಲು ಮುಂದಾದ ಘಟನೆ ಚಾಮರಾಜನಗರದ ಕಣ್ಣೇಗಾಲ ಗ್ರಾಮದಲ್ಲಿ ನಡೆದಿದೆ. ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿಕೊಂಡು ಹೋಗುವಂತೆ ತಹಸೀಲ್ದಾರ್ ಆದೇಶ ನೀಡಿದ್ದರೂ ದೇವಾಲಯದ ಅರ್ಚಕ ದೇವಸ್ಥಾನವನ್ನೇ ತನ್ನ ಹೆಸರಿಗೆ ಅಕ್ರಮ ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿ ತಾಲೂಕಿನ ಕಣ್ಣೇಗಾಲ ಗ್ರಾಮದ ದೊಡ್ಡಯ್ಯ ಸ್ವಾಮಿ ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ದೇವಸ್ಥಾನದ ಮುಂದೆ ಪ್ರತಿಭಟನೆ ನಡೆಸಿದರು. ಗ್ರಾಮದ ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಹೋಗುವಂತೆ ತಹಸೀಲ್ದಾರ್ ಅವರು ಅರ್ಚಕನಿಗೆ ಆದೇಶ ನೀಡಿದ್ದಾರೆ. ಆದರೆ ಅರ್ಚಕ ಸಾರ್ವಜನಿಕರಿಗೆ ಸೇರಿದ ದೇವಸ್ಥಾನವನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಗ್ರಾಮ ಪಂಚಾಯಿತಿಗೆ ಅರ್ಜಿ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. ಕೂಡಲೇ ತಹಸೀಲ್ದಾರ್ ಗ್ರಾಮಕ್ಕೆ ಬಂದು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಂಡು, ದೇವಸ್ಥಾನವನ್ನು ಟ್ರಸ್ಟ್ಗೆ ವಹಿಸಿಕೊಡುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಟ್ರಸ್ಟ್ನ ಪದಾಧಿಕಾರಿಗಳು ಸೇರಿದಂತೆ ಯಜಮಾನರುಗಳು, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಪೂಜಾರಿ ದೊಡ್ಡಯ್ಯ ಎಂಬ ವ್ಯಕ್ತಿ ಪ್ರತಿದಿನ ಗ್ರಾಮದ ದೊಡ್ಡಯ್ಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸುತ್ತಿದ್ದರು. ಇದೀಗ ಪೂಜೆ ಮಾಡುವ ದೇವಸ್ಥಾನವನ್ನೇ ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದು, ತನ್ನ ಹೆಸರಿಗೆ ಸ್ವತ್ತು ನೀಡುವಂತೆ ಗ್ರಾಮಪಂಚಾಯತ್ಗೆ ಅರ್ಜಿ ಹಾಕಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟನೆಗೆ ಮಾಡಿದ್ದಾರೆ. ದೊಡ್ಡಯ್ಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಹೋಗುವಂತೆ ತಹಶೀಲ್ದಾರ್ ಕೆಲವರ್ಷಗಳ ಹಿಂದೆ ಸೂಚಿಸಿದ್ದರು. ಹಾಗಾಗಿ ಅಲ್ಲಿ ಪೂಜೆ ಮಾಡಿಕೊಂಡಿದ್ದ ದೊಡ್ಡಯ್ಯ ಈಗ ದೇವಸ್ಥಾನ ತನ್ನ ಆಸ್ತಿ ಎನ್ನುತ್ತಿದ್ದು, ದೇವಸ್ಥಾನ ಸಾರ್ವಜನಿಕ ಸ್ವತ್ತಾಗಿದ್ದು ಇದನ್ನು ಟ್ರಸ್ಟ್ ಗೆ ವಹಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
from India & World News in Kannada | VK Polls https://ift.tt/3DPNAmk