
ಬೆಂಗಳೂರು: ಮೈಸೂರಿನಲ್ಲಿ ನಡೆದ ಸ್ನಾತಕೋತ್ತರ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಆದರೆ, ಇನ್ನಷ್ಟು ಆತಂಕಕಾರಿಯಾಗಿರುವ ಸಂಗತಿ ಎಂದರೆ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು. 2021ರ ಮೊದಲ ಏಳು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 305 ರೇಪ್ ಪ್ರಕರಣಗಳು ವರದಿಯಾಗಿವೆ. ಅಂದರೆ ಪ್ರತಿ ತಿಂಗಳು ಸರಾಸರಿ 44 ಪ್ರಕರಣಗಳು ನಡೆದಂತಾಗಿದೆ. ಕಳೆದ ಮೂರು ವರ್ಷಗಳಲ್ಲಿ ತಿಂಗಳಿಗೆ ಸರಾಸರಿ 40ರಷ್ಟು ಕೇಸುಗಳು ದಾಖಲಾಗುತ್ತಿದ್ದು, ಈ ಬಾರಿ ಹೆಚ್ಚಾಗಿದೆ. ಇನ್ನೊಂದು ಆತಂಕಕಾರಿ ಸಂಗತಿ ಎಂದರೆ, ಒಂದು ಕಡೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದರೆ, ಇನ್ನೊಂದು ಕಡೆ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಇಳಿಮುಖವಾಗುತ್ತಿದೆ. ಪ್ರಕರಣಗಳು ಎಷ್ಟು?2018ರಲ್ಲಿ ರಾಜ್ಯದಲ್ಲಿ 485 ಅತ್ಯಾಚಾರ ಪ್ರಕರಣಗಳು ನಡೆದಿದ್ದರೆ 2019ರಲ್ಲಿ 497 ಮತ್ತು 2020ರಲ್ಲಿ 472 ಕೇಸುಗಳು ದಾಖಲಾಗಿದ್ದವು. ಇದರಲ್ಲಿ ಹಲವು ಗ್ಯಾಂಗ್ ರೇಪ್ಗಳೂ ಇದ್ದವು. ಶಿಕ್ಷೆ ಪ್ರಮಾಣ ಎಷ್ಟು?ರಾಜ್ಯದಲ್ಲಿ 2018ರ ಜನವರಿಯಿಂದ 2021ರ ಜುಲೈ 31ರವರೆಗೆ 1300 ಮಂದಿಯ ಮೇಲೆ ಕೇಸು ದಾಖಲಾಗಿದೆ. ಆದರೆ, ಅಚ್ಚರಿಯ ವಿಷಯ ಅಂದರೆ ಇಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು ಕೇವಲ ಆರು ಮಂದಿಗೆ ಮಾತ್ರ ಮತ್ತು 50 ಮಂದಿಯನ್ನು ದೋಷಮುಕ್ತರೆಂದು ಸಾರಲಾಗಿದೆ. 2018ರಲ್ಲಿ ಐದು ಮಂದಿಗೆ ಶಿಕ್ಷೆಯಾಗಿದ್ದರೆ 43 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. 2019ರಲ್ಲಿ ಒಬ್ಬನೇ ಒಬ್ಬನಿಗೆ ಶಿಕ್ಷೆಯಾಗಿಲ್ಲ. ಬದಲಿಗೆ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ. 2020ರಲ್ಲಿ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದೆ. 2021ರಲ್ಲಿ ಒಂದೇ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ. ಚಾರ್ಜ್ಶೀಟೇ ಪ್ರಮುಖಆರೋಪಿಗಳಿಗೆ ಶಿಕ್ಷೆ ಆಗುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವುದು ತನಿಖಾಧಿಕಾರಿಗಳು ಸಲ್ಲಿಸುವ ಚಾರ್ಜ್ಶೀಟ್. 60 ದಿನಗಳ ಒಳಗೆ ಸಲ್ಲಿಸಬೇಕಾಗಿರುವ ಚಾರ್ಜ್ಶೀಟ್ನಲ್ಲಿ ಅತ್ಯಾಚಾರಕ್ಕೆ ಒಳಗಾದವರ ಹೇಳಿಕೆಯನ್ನು ಅತ್ಯಂತ ಪ್ರಮುಖವಾಗಿ ದಾಖಲಿಸಬೇಕಾಗುತ್ತದೆ. ಆದರೆ, ಕೆಲವೊಂದು ಪ್ರಕರಣಗಳಲ್ಲಿ ಕುಟುಂಬದ ಸದಸ್ಯರು ಮತ್ತು ಇತರರ ಒತ್ತಡ ಹಾಗೂ ಸಾಮಾಜಿಕ ಭೀತಿಯಿಂದ ಸಂತ್ರಸ್ತರೇ ಕೊನೆಯ ಕ್ಷಣದಲ್ಲಿ ಹೇಳಿಕೆಗಳನ್ನು ಬದಲಿಸುತ್ತಾರೆ. ಹೀಗಾಗಿ ಕೆಲವೊಮ್ಮೆ ಆರೋಪಿಗಳು ಖುಲಾಸೆಗೊಳ್ಳುತ್ತಾರೆ. ಹೆಚ್ಚು ಮಂದಿಗೆ ಶಿಕ್ಷೆಯಾಗಬೇಕು, ಹೇಳಿಕೆಗಳನ್ನು ಬದಲಿಸಬಾರದು ಎಂಬ ಕಾರಣಕ್ಕಾಗಿ ಸಿಆರ್ಪಿಸಿ ಕಾಯಿದೆಯ 164ನೇ ಸೆಕ್ಷನ್ನಡಿ ಸಂತ್ರಸ್ತ ಮಹಿಳೆ ನೇರವಾಗಿ ನ್ಯಾಯಾಧೀಶರ ಮುಂದೆಯೇ ಹೇಳಿಕೆ ನೀಡಿದರೆ ಉತ್ತಮ ಎಂದು ಅಭಿಪ್ರಾಯಪಡುತ್ತೇವೆ. ಹೀಗೆ ಮಾಡಿದರೆ ಹೇಳಿಕೆಯನ್ನು ಬದಲಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು. ಆದರೆ, ಈ ರೀತಿ ಸ್ವಯಂ ಹೇಳಿಕೆ ನೀಡುವ ಅವಕಾಶದ ಬಗ್ಗೆ ಗ್ರಾಮೀಣವೂ ಸೇರಿದಂತೆ ಬಹುತೇಕ ಭಾಗದಲ್ಲಿ ಅರಿವಿಲ್ಲ. ಸಾಕ್ಷ್ಯಗಳೂ ಸಹಕರಿಸಬೇಕುಸಂತ್ರಸ್ತರು ತಾವು ನೀಡಿದ ಹೇಳಿಕೆಗೆ ವಿಚಾರಣೆಯ ಕೊನೆಯ ವರೆಗೂ ಬದ್ಧರಾಗಿರಬೇಕಾದ್ದು ಅಗತ್ಯ. ಆದರೆ, ಕೆಲವು ಕೆಲವು ಪ್ರಕರಣಗಳಲ್ಲಿ ಹಾಗಾಗುವುದಿಲ್ಲ. ಬಹುತೇಕ ಕೇಸುಗಳಲ್ಲಿ ಆರೋಪಿ ಪರಿಚಿತನೇ ಆಗಿರುತ್ತಾನೆ. ಅವನ ಬೆದರಿಕೆ, ಕುಟುಂಬದವರ ಒತ್ತಡ ಹೆಚ್ಚಿರುತ್ತದೆ. ಕೆಲವೊಮ್ಮೆ ರಾಜಿ ಸಂಧಾನ ನಡೆದು ಮದುವೆಯೂ ನಡೆಯುತ್ತದೆ. ಸಾಕ್ಷ್ಯಗಳ ಪರಿಶೀಲನೆ ವಿಚಾರಣೆಯಲ್ಲಿ ಅತ್ಯಂತ ಪ್ರಮುಖ ಘಟ್ಟ. ಘಟನೆ ನಡೆದ ದಿನಕ್ಕೂ ಸಾಕ್ಷ್ಯ ವಿಚಾರಣೆಗೂ ತುಂಬ ದಿನಗಳ ಅಂತರವಿರುವುದರಿಂದ ಸಾಕ್ಷಿಗಳು ನಾನಾ ಕಾರಣಗಳಿಂದ ತಿರುಗಿಬೀಳುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಜಿ.ವಿ. ಗಾಯತ್ರಿ. ಶಿಕ್ಷೆ ಆಗದಿರಲು ಪ್ರಮುಖ ಕಾರಣಗಳು
- ಸಾಮಾಜಿಕ ಭೀತಿ, ಬೆದರಿಕೆ, ಮನೆಯವರ ಒತ್ತಡದಿಂದ ಹೇಳಿಕೆ ಬದಲಿಸುವ ಸಂತ್ರಸ್ತರು.
- ಕೆಲವೊಂದು ಪ್ರಕರಣಗಳಲ್ಲಿ ಒತ್ತಡ ಪೂರ್ವಕವಾಗಿ ಮದುವೆಯನ್ನೇ ನಡೆಸಲಾಗುತ್ತದೆ.
- ಸಾಕ್ಷಿ ವಿಚಾರಣೆ ತುಂಬ ವಿಳಂಬವಾಗುವುದರಿಂದ ಸಾಕ್ಷಿಗಳೂ ತಿರುಗಿಬೀಳುವ ಸಾಧ್ಯತೆ ಇರುತ್ತದೆ.
- ದೇಹದಿಂದ ಸ್ಯಾಂಪಲ್ ಸಂಗ್ರಹ ಪ್ರಮುಖ ಭಾಗ. ಅದರಲ್ಲೇ ಕೆಲವೊಮ್ಮೆ ತಪ್ಪಾಗಿರುತ್ತದೆ.
- ಕೆಲವು ವೈದ್ಯರಿಗೆ ಸ್ಯಾಂಪಲ್ ಸಂಗ್ರಹದ ಅತಿ ಸೂಕ್ಷ್ಮಗಳು ಗೊತ್ತಾಗದೆ ಕೇಸು ಕೈಬಿಟ್ಟು ಹೋಗುತ್ತದೆ.
from India & World News in Kannada | VK Polls https://ift.tt/3mXL73f