ಟಿ.ಶಿವರಾಜ್ ರಾಮನಗರ(ಗ್ರಾ) ರಾಮನಗರ: ಕೊರೊನಾ ಸೋಂಕು ಆರ್ಭಟಕ್ಕೆ ತುತ್ತಾಗುವ ಜತೆಗೆ ಹಾವಳಿಯಿಂದ ತತ್ತರಿಸಿರುವ ಈ ಭಾಗದ ರೈತರು ಕಳೆದ ಮೂರು ವರ್ಷಗಳಲ್ಲಿ 12 ಜನ ಜೀವ ತೆತ್ತಿದ್ದಾರೆ. ಕೊರೊನಾ ಕಾಟದಿಂದ ಹಾಗೂ ಬೆಳೆ ನಷ್ಟದಿಂದ ನಲುಗಿರುವ ರೈತರು ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲಾಗದೆ ಕಂಗಾಲಾಗಿದ್ದಾರೆ. ಕಾಡಾನೆಗಳ ಉಪಟಳವಂತೂ ಈ ಹಿಂದಿಗಿಂತಲೂ ಹೆಚ್ಚಾಗಿದ್ದು ಕೃಷಿಕರ ನಿದ್ದೆಗೆಡಿಸಿವೆ. ಜಿಲ್ಲೆಯಾದ್ಯಂತ ವನ್ಯ ಜೀವಿಗಳು ಹಾಗೂ ಮಾನವ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಅಧಿಕವಾಗಿದೆ. ಸಾಕು ಪ್ರಾಣಿಗಳನ್ನು ಹೊಂಚುಹಾಕಿ ಹಿಡಿದು ತಿನ್ನುವ ಚಿರತೆಗಳು ಹಾಗೂ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕರಡಿಗಳ ಜತೆಗೆ ಕಾಡಾನೆಗಳು ನಾಶಪಡಿಸುವ ಪ್ರಕರಣಗಳು ಹೆಚ್ಚಾಗಿವೆ. ಹಗಲಿನಲ್ಲೂ ಹೊರಬರಲು ಭಯಸಾಕು ಪ್ರಾಣಿಗಳ ರಕ್ತದ ರುಚಿಯನ್ನುಂಡ ಚಿರತೆಗಳು ಆಹಾರವನ್ನರಸಿ ಕಾಡಿನಿಂದ ನಾಡಿಗೆ ದಾಂಗುಡಿ ಇಡುತ್ತಿದ್ದು, ಜನವಸತಿ ಪ್ರದೇಶಗಳಿಗೆ ನುಗ್ಗಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಭಯ ಸೃಷ್ಟಿಸುತ್ತಿವೆ. ಕಾಡಂಚಿನ ಗ್ರಾಮಗಳ ಜನರು ಹಗಲು ವೇಳೆಯಲ್ಲಿಯೂ ಮನೆಯಿಂದ ಹೊರ ಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯವರು ಅವುಗಳನ್ನು ಸೆರೆ ಹಿಡಿದು ದೂರದ ಕಾಡಿಗೆ ಬಿಡುತ್ತಿದ್ದರೂ ದಾಳಿ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಜಿಲ್ಲೆಯಲ್ಲಿ ಕಾಡಾನೆ ಸಂಘರ್ಷ ಇರುವ ಅರಣ್ಯದ ಗಡಿ ಪ್ರದೇಶಗಳು ಪ್ರಾದೇಶಿಕ ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಕಾವೇರಿ ವನ್ಯಜೀವಿ ಧಾಮ ಸೇರಿದಂತೆ ಒಟ್ಟು 299 ಕಿ.ಮೀ ಉದ್ದವಿದೆ. ಪ್ರತಿನಿತ್ಯ ಆಹಾರ ಹುಡುಕಿಕೊಂಡು ಬರುವ ಕಾಡಾನೆಗಳು ಹಾಗೂ ಮಾನವನ ನಡುವೆ ಸಂಘರ್ಷ ನಡೆದು ಸಾವು ನೋವುಗಳು ಸಂಭವಿಸುತ್ತಲೇ ಇವೆ. ಕಳೆದ 3 ವರ್ಷಗಳಲ್ಲಿ ಕಾಡಾನೆ ದಾಳಿಯಿಂದ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆಯಿಂದ ಪರಿಹಾರ2018-19ರಲ್ಲಿ 06 ಮಂದಿ, 2019-20 ಹಾಗೂ 2020-21ರಲ್ಲಿತಲಾ 03 ಮಂದಿ ಕಾಡಾನೆಗಳಿಗೆ ಬಲಿಯಾಗಿದ್ದಾರೆ. ದಾಳಿಗೆ ಸಿಲುಕಿ 10ರಿಂದ 12 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, ಜಿಲ್ಲೆಯ 3 ವಿಭಾಗದಲ್ಲಿ 2018-19 ನೇ ಸಾಲಿನಲ್ಲಿ 3479 ರೈತರಿಗೆ 198.09 ಲಕ್ಷ ರೂ, 2019-20 ಸಾಲಿನಲ್ಲಿ 3347 ರೈತರಿಗೆ 169.14 ಲಕ್ಷ ರೂ. ಹಾಗೂ 2020-21 ಸಾಲಿನಲ್ಲಿ 4396 ರೈತರಿಗೆ 273.14 ಲಕ್ಷ ರೂ. ಪರಿಹಾರವನ್ನು ಅರಣ್ಯ ಇಲಾಖೆ ವಿತರಣೆ ಮಾಡಿದೆ. ಮೂರು ವಿಭಾಗಗಳ ಪೈಕಿ ರಾಮನಗರ ವಿಭಾಗದಲ್ಲಿ 6182 ಪ್ರಕರಣಗಳಲ್ಲಿ 391.03 ಲಕ್ಷ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವಿಭಾಗದಲ್ಲಿ 2731 ಪ್ರಕರಣಗಳಲ್ಲಿ 114.25 ಲಕ್ಷ ಹಾಗೂ ಕಾವೇರಿ ವನ್ಯಜೀವಿ ಧಾಮ ವಿಭಾಗದಲ್ಲಿ 2297 ಪ್ರಕರಣಗಳಲ್ಲಿ 135.23 ಲಕ್ಷ ಸೇರಿ ಒಟ್ಟು 11,222 ಪ್ರಕರಣಗಳಿಂದ 6 ಕೋಟಿ 40 ಲಕ್ಷ ರುಪಾಯಿ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಡಾನೆಗಳ ದಾಳಿಗೆ ರೈತರ ಆಕ್ರೋಶ ಕಾಡಾನೆಗಳು ಕೃಷಿ ಜಮೀನಿಗೆ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಷ್ಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿರುವ ಕಾರಣ ರೈತರು ಸಿಟ್ಟಿಗೆದ್ದಿದ್ದಾರೆ. ಕಾಡಾನೆಗಳು ಮತ್ತು ಮನುಷ್ಯರ ನಡುವಿನ ಸಂಘರ್ಷ ನಿರಂತರವಾಗಿ ಇರುವುದರಿಂದ ಶ್ರಮಪಟ್ಟು ಮುತುವರ್ಜಿ ವಹಿಸಿ ಬೆಳೆದ ಬೆಳೆಗಳನ್ನು ಹಾಗೂ ಹತ್ತಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ತೆಂಗು, ಅಡಿಕೆ ಹಲಸು, ಮಾವು ಸೇರಿದಂತೆ ಇನ್ನಿತರ ಮರ-ಗಿಡಗಳನ್ನು ಉಳಿಸಿಕೊಳ್ಳಲು ರೈತರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಕತ್ತಲಾಗುತ್ತಿದ್ದಂತೆ ಆತಂಕಕ್ಕೆ ಒಳಗಾಗುವ ರೈತರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬೆಳೆಗಳನ್ನು ಕಾಯುವಂತಾಗಿದೆ. ಆದರೆ, ವನ್ಯ ಜೀವಿಗಳಿಗೆ ಅರಣ್ಯದಲ್ಲಿ ಸಾಕಷ್ಟು ಮೇವು ಹಾಗೂ ಕುಡಿಯಲು ನೀರು ಸಿಗದಿರುವ ಕಾರಣ ನಾಡಿನತ್ತ ಧಾವಿಸಿ ಬರುತ್ತಿವೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಕಾವೇರಿ ವನ್ಯಜೀವಿ ಧಾಮದಲ್ಲಿ ಕಾಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿವೆ ಎಂದು ಸಮೀಕ್ಷೆ ಹೇಳುತ್ತಿದೆ. ಈ ಕಾಡಾನೆಗಳು ಮೇಕೆದಾಟು, ಸಂಗಮ, ಮುತ್ತತ್ತಿ, ಬಸವನಬೆಟ್ಟ, ತೆಂಗಿನಕಲ್ಲು, ಕಬ್ಬಾಳು, ಸಾತನೂರು, ಹಂದಿಗುಂದಿ, ಬಾಣಂತಮಾರಿ, ತೈಲೂರು ಹಾಗೂ ಅಚ್ಚಲು ಅರಣ್ಯ ಪ್ರದೇಶದಲ್ಲಿ ನಿತ್ಯ ಗಿರಕಿ ಹೊಡೆಯುತ್ತ ಸಂಚರಿಸುತ್ತವೆ. ಮಾಗಡಿಯ ಸಾವನದುರ್ಗ, ಅದರಂಗಿ, ಸಿದ್ದದೇವರ ಬೆಟ್ಟದ ಮೂಲಕ ತುಮಕೂರು, ಗುಬ್ಬಿ ತಾಲೂಕಿನ ವಲಯ ಅರಣ್ಯಕ್ಕೆ ಸಂಚಾರ ಮಾಡುತ್ತಿವೆ. ಆದರೆ, ಕಾಡಿನಲ್ಲಿಆನೆಗಳಿಗೆ ಬೇಕಾದ ಬಿದಿರು, ಆಲದ ಸೊಪ್ಪು, ಚುಜ್ಜಲಿ ಸೊಪ್ಪು ಮತ್ತು ನಾರು-ಬೇರು ದೊರಕದ ಕಾರಣ ಆನೆಗಳು ಆಹಾರ ಮತ್ತು ನೀರು ಹುಡುಕುತ್ತಾ ಗ್ರಾಮಗಳಿಗೆ ಬರುವುದು ಸಾಮಾನ್ಯವಾಗಿದೆ. ಹಸಿದ ಹೊಟ್ಟೆಗೆ ಆಹಾರ ತುಂಬಿಸಿಕೊಳ್ಳಲು ಜನವಸತಿ ಮಗ್ಗುಲಿನ ತೋಟಗಳಿಗೆ ದಾಳಿಯಿಡುವುದು ಮಾಮೂಲು ಆಗಿದೆ. ತೆಂಗಿನಕಲ್ಲು ಕಾಯಂ ವಾಸಸ್ಥಾನ ಕಳೆದ ತಿಂಗಳ ಹಿಂದೆಯಷ್ಟೇ ಕಾವೇರಿ ವನ್ಯಜೀವಿ ಧಾಮದಿಂದ ಆಹಾರವನ್ನರಸಿಕೊಂಡು ಕಾಡಾನೆಗಳ ಹಿಂಡು ವಾಪಸ್ ಸ್ವಸ್ಥಾನ ಸೇರದೆ ತೆಂಗಿನಕಲ್ಲುಅರಣ್ಯವನ್ನೇ ಕಾಯಂ ವಾಸಸ್ಥಳವನ್ನಾಗಿ ಮಾಡಿಕೊಂಡಿವೆ. ಎರಡು-ಮೂರು, ನಾಲ್ಕು, ಹೀಗೆ ಗುಂಪುಗಳಾಗಿ ವಿಂಗಡಣೆಯಾಗಿ ಅರಣ್ಯದಂಚಿನ ಗ್ರಾಮಗಳಿಗೆ ಲಗ್ಗೆ ಇಡುತ್ತಿವೆ. ಗ್ರಾಮಗಳ ಆಸುಪಾಸಿನಲ್ಲಿ ಇಷ್ಟಾನುಸಾರ ಓಡಾಟ ನಡೆಸಿ ಮಾವು, ತೆಂಗಿನ ಮರ ಸಹಿತ ರೈತರ ಫಸಲುಗಳನ್ನು ಹಾಳು ಮಾಡುವ ಜೊತೆಗೆ ಬೋರ್ವಲ್ ಪರಿಕರ ನಾಶಪಡಿಸುತ್ತಿವೆ. ಓಡಿಸಿದರೂ ವಾಪಸ್ ಬರುತ್ತವೆ ಪ್ರತಿ ನಿತ್ಯ ಒಂದು ಆನೆಗೆ 200 ರಿಂದ 250 ಕೆ.ಜಿಯಷ್ಟು ಮೇವು ಹಾಗೂ 150 ರಿಂದ 200 ಲೀಟರ್ನಷ್ಟು ಕುಡಿಯಲು ನೀರು ಬೇಕಾಗಿದೆ. ಈ ಪ್ರಮಾಣದ ಮೇವು ಸಿಗದ ಕಾರಣ ಹಗಲು ವೇಳೆಯಲ್ಲಿ ಕಾಡಂಚಿನ ಸ್ಥಳದಲ್ಲಿ ಬೀಡು ಬಿಡುವ ಆನೆಗಳು ರಾತ್ರಿಯಾಗುತ್ತಿದ್ದಂತೆ ಆಹಾರ ಮತ್ತು ನೀರು ಅರಸುತ್ತಾ ನಾಡಿಗೆ ನುಗ್ಗುತ್ತಿವೆ. ಅರಣ್ಯ ಇಲಾಖೆ ಆನೆಗಳನ್ನು ಪಟಾಕಿ, ತಮಟೆ ಸೈರನ್ಗಳ ಮೂಲಕ ಆನೆಗಳನ್ನು ಓಡಿಸುವ ಕೆಲಸ ಮಾಡುತ್ತಾರೆ. ಆದರೆ, ಅರೆಹೊಟ್ಟೆ ತಿಂದು ವಾಪಸ್ಸಾಗದ ಆನೆಗಳು ರೈತರ ಜಮೀನುಗಳಿಗೆ ನುಗ್ಗುವುದು ವಾಡಿಕೆ ಎಂಬಂತಾಗಿದೆ.
from India & World News in Kannada | VK Polls https://ift.tt/3llXRA3