ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆನ್ಲೈನ್ ಖದೀಮರ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಅನೇಕ ಜನರು ಈ ಸಮಸ್ಯೆ ಸಿಲುಕಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಕೂಡ ಈ ಪಿಡುಗು ಬಿಟ್ಟಿಲ್ಲ. ಇದೀಗ ಕಿಡಿಗೇಡಿಗಳು ಹಿರಿಯ ಐಪಿಎಸ್ ಅಧಿಕಾರಿ, ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ಫೇಸ್ಬುಕ್ ಅಕೌಂಟ್ನನ್ನೂ ಹ್ಯಾಕ್ ಮಾಡಿದ್ದಾರೆ ಎನ್ನಲಾಗಿದ್ದು, ಆನ್ಲೈನ್ ಖದೀಮರು ಹಲವರಿಗೆ ಫೇಸ್ಬುಕ್ ಮೂಲಕ ಹಣಕ್ಕಾಗಿ ಮೆಸೇಜ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸ್ವತಃ ಭಾಸ್ಕರ್ ರಾವ್ ಅವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ತಿಳಿಸಿದ್ದಾರೆ. ಅಕೌಂಟ್ ಹ್ಯಾಕ್ ಆಗಿರುವ ಬಗ್ಗೆ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಭಾಸ್ಕರ್ ರಾವ್, ‘ನನ್ನ ಅಕೌಂಟ್ ಹ್ಯಾಕ್ ಆಗಿದೆ. ಹಣ ಕಳುಹಿಸಿ ಎಂದು ಯಾವುದಾದರೂ ಸಂದೇಶಗಳು ಫೇಸ್ಬುಕ್ನಲ್ಲಿ ಬಂದರೆ ದಯವಿಟ್ಟು ಹಣ ಕಳುಹಿಸಬೇಡಿ. ನನ್ನ ಅಕೌಂಟ್ ಹ್ಯಾಕ್ ಆಗಿದ್ದರೂ, ನಾನು ಹಣ ಕೇಳುವುದಿಲ್ಲ ಎಂದು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಜನ ಸಾಮಾನ್ಯರು, ಪೊಲೀಸರು, ಹಿರಿಯ, ಕಿರಿಯ ಅಧಿಕಾರಿಗಳು, ಸೆಲೆಬ್ರಿಟಿಗಳೂ ಸೇರಿದಂತೆ ಎಲ್ಲರ ಹೆಸರಿನಲ್ಲಿ ನಕಲಿ ಫೇಸ್ಬುಕ್, ಇನ್ಸ್ಟಾಗ್ರಾಂ ಖಾತೆ ತೆರೆಯುವ ಆನ್ಲೈನ್ ಖದೀಮರು, ತುರ್ತಾಗಿ ಹಣ ಬೇಕಿದೆ ಕಳುಹಿಸಿ ಎಂದು ಹೇಳಿ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕೆಲ ದಿನಗಳ ಹಿಂದೆ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಅವರ ಫೇಸ್ಬುಕ್ ಖಾತೆಯನ್ನೂ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದರು.
from India & World News in Kannada | VK Polls https://ift.tt/3qgkggQ