FDA ಪ್ರಶ್ನೆ ಪತ್ರಿಕೆ ಸೋರಿಕೆ: ವಿಧಾನಸೌಧದಲ್ಲಿ ಕೆಲಸದ ಕನಸು ಕಂಡಿದ್ದ ರಮೇಶ್‌ಗೆ ಯುವತಿ ಸನಾ ಸಾಥ್‌!

ಬೆಂಗಳೂರು : ಪ್ರಥಮ ದರ್ಜೆ ಸಹಾಯಕ () ಹುದ್ದೆಗಳ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ 'ಮೂಲ' ಕೆಪಿಎಸ್‌ಸಿ ಕಚೇರಿಯೇ ಎಂಬುದನ್ನು ಬಯಲು ಮಾಡಿರುವ ಸಿಸಿಬಿ, ಪ್ರಶ್ನೆಗಳಿದ್ದ ಕಂಪ್ಯೂಟರ್‌ನಿಂದ ಪೆನ್‌ಡ್ರೈವ್‌ಗೆ ಕಾಪಿ ಮಾಡಿಕೊಂಡು ಸೋರಿಕೆ ಮಾಡಿದ್ದ ಸ್ಟೆನೋಗ್ರಾಫರ್‌ ಸೇರಿದಂತೆ ಆಯೋಗದ ಇಬ್ಬರು ನೌಕರರನ್ನು ಬಂಧಿಸಿದೆ. ಕೆಪಿಎಸ್‌ಸಿ ಪರೀಕ್ಷೆಗಳ ವಿಭಾಗದ ಕಂಟ್ರೋಲರ್‌ ಕಚೇರಿ ಸ್ಟೆನೋಗ್ರಾಫರ್‌ ಸನಾ ಬೇಡಿ ಹಾಗೂ ಆಯೋಗದ ದ್ವಿತೀಯ ದರ್ಜೆ ಸಹಾಯಕ ರಮೇಶ್‌ ಹೆರಕಲ್‌ ಅವರನ್ನು ಸೋಮವಾರ ಬಂಧಿಸಲಾಗಿದೆ. ಪರೀಕ್ಷಾ ವಿಭಾಗದ ಕಂಪ್ಯೂಟರ್‌ನಿಂದ ಸನಾ ಬೇಡಿ ಪ್ರಶ್ನೆ ಪತ್ರಿಕೆ ಕಾಪಿ ಮಾಡಿಕೊಂಡು ನಂತರ ಅವುಗಳನ್ನು ರಮೇಶ್‌ ಹೆರಕಲ್‌ಗೆ ಕೊಟ್ಟಿದ್ದಳು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಪ್ರಶ್ನೆಗಳಿರುವ ಕಂಪ್ಯೂಟರ್‌ ಪಾಸ್‌ವರ್ಡ್‌ ಅರಿತಿದ್ದ ಸನಾ, ಜ.18ರಂದೇ ಪ್ರಶ್ನೆಗಳನ್ನು ಪೆನ್‌ಡ್ರೈವ್‌ಗೆ ಕಾಪಿ ಮಾಡಿಕೊಂಡು ರಮೇಶ್‌ಗೆ ನೀಡಿದ್ದಳು. ಆರೋಪಿ ರಮೇಶ್‌, ಆ ಪ್ರಶ್ನೆಗಳನ್ನು ಪ್ರಿಂಟ್‌ ಹಾಕಿಕೊಂಡು ವಾಣಿಜ್ಯ ತೆರಿಗೆ ಇಲಾಖೆ ಇನ್ಸ್‌ಪೆಕ್ಟರ್‌ ಚಂದ್ರು, ರಾಚಪ್ಪ ಅವರ ಮೂಲಕ ಅಭ್ಯರ್ಥಿಗಳಿಗೆ ತಲಾ 10 ಲಕ್ಷ ರೂ.ಗಳಂತೆ ಮಾರಿಕೊಂಡಿದ್ದ. ಪರೀಕ್ಷೆಗೆ ಒಂದೆರಡು ದಿನಗಳ ಮೊದಲು ಪತ್ರಿಕೆ ಮಾರಾಟದ ವ್ಯವಹಾರ ಆರಂಭಿಸಿದ್ದರು ಎಂಬುದು ಸಿಸಿಬಿ ಪೊಲೀಸರ ಈವರೆಗಿನ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಸನಾ, 2017ರಲ್ಲಿ ಸ್ಟೆನೋಗ್ರಾಫರ್‌ ಆಗಿ ಕೆಲಸಕ್ಕೆ ಸೇರಿದ್ದಳು. ರಮೇಶ್‌ ಕೂಡ ನಾಲ್ಕೈದು ವರ್ಷಗಳ ಹಿಂದೆ ಎಸ್‌ಡಿಎ ಆಗಿ ಕೆಪಿಎಸ್‌ಸಿಗೆ ಸೇರಿದ್ದ. ಆರಂಭದಲ್ಲಿ ಪರೀಕ್ಷಾ ವಿಭಾಗದಲ್ಲೇ ರಮೇಶ್‌ ಕೆಲಸ ಮಾಡುತ್ತಿದ್ದ. ಅದಾದ ನಂತರ ಬೇರೆ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ. ಪರೀಕ್ಷೆ ವಿಭಾಗದಲ್ಲಿದ್ದ ಕಾರಣ ಆತನಿಗೆ ಪ್ರಶ್ನೆ ಪತ್ರಿಕೆ ತಯಾರಿ, ಪ್ರಶ್ನೆಗಳು ಎಲ್ಲಿರುತ್ತವೆ? ಯಾವಾಗ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುತ್ತದೆ. ಪ್ರಶ್ನೆಗಳಿರುವ ಕಂಪ್ಯೂಟರ್‌ನ ಪಾಸ್‌ವರ್ಡ್‌ ಯಾರಿಗೆ ಗೊತ್ತಿರುತ್ತದೆ ಎಂಬ ಸಾಮಾನ್ಯ ಮತ್ತು ಗೌಪ್ಯ ಮಾಹಿತಿ ಗೊತ್ತಿತ್ತು. ಆ ವಿಭಾಗಕ್ಕೆ ಕೆಪಿಎಸ್‌ಸಿಯ ಯಾವುದೇ ಸಿಬ್ಬಂದಿಗೆ ಪ್ರವೇಶ ಇರುತ್ತಿರಲಿಲ್ಲ. ಆ ವಿಭಾಗದಲ್ಲಿ ಸನಾ ಕೆಲಸ ಮಾಡುತ್ತಿರುವುದು ರಮೇಶ್‌ಗೆ ಗೊತ್ತಿತ್ತು. ಒಂದೇ ಕಚೇರಿಯಲ್ಲಿದ್ದ ಕಾರಣ ಪರಸ್ಪರ ಪರಿಚಯವಾಗಿದ್ದರು. ವಿಧಾನಸೌಧದಲ್ಲಿ ಕೆಲಸಕ್ಕೆ ಸೇರಲು ಯೋಚಿಸಿದ್ದ ರಮೇಶ್‌!: 'ಎಸ್‌ಡಿಎ ಆಗಿ ಕೆಪಿಎಸ್‌ಸಿಯಲ್ಲಿದ್ದರೆ ಬೇರೆ ಇಲಾಖೆಗಳಿಗೆ ವರ್ಗಾವಣೆ ಸಿಗುವುದಿಲ್ಲ. ಇದೇ ಕಚೇರಿಯಲ್ಲಿ ಇರಲು ಇಷ್ಟವಿಲ್ಲ. ಎಫ್‌ಡಿಎ ಆಗಿ ವಿಧಾನಸೌಧಕ್ಕೆ ಹೋಗಬೇಕು ಎಂದು ಯೋಚನೆ ಮಾಡಿದ್ದೇನೆ. ಅತಿ ಹೆಚ್ಚು ಅಂಕ ಪಡೆದರೆ ವಿಧಾನಸೌಧದಲ್ಲಿ ಖಾಲಿ ಇರುವ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ಹೀಗಾಗಿ, ಪ್ರಶ್ನೆ ಪತ್ರಿಕೆ ತೆಗೆದುಕೊಡುವಂತೆ ರಮೇಶ್‌ ತನಗೆ ಕೇಳಿದ್ದ. ಹೀಗಾಗಿ, ಪ್ರಶ್ನೆಗಳನ್ನು ಕಾಪಿ ಮಾಡಿಕೊಂಡಿದ್ದೆ,' ಎಂದು ಸನಾ ಪ್ರಾಥಮಿಕ ವಿಚಾರಣೆ ವೇಳೆ ತಿಳಿಸಿದ್ದಾಳೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ರಮೇಶ್‌ನಿಂದ ಸನಾ ಈವರೆಗೆ ಹಣ ಪಡೆದಿರುವ ಮಾಹಿತಿ ಇಲ್ಲ. ಅದೇ ರೀತಿ ರಮೇಶ್‌ನ ಬಳಿ ಹೆಚ್ಚಿನ ಹಣ ಸಿಕ್ಕಿಲ್ಲ. ಆತನಿಂದ ಪ್ರಶ್ನೆಪತ್ರಿಕೆ ಪಡೆದಿರುವ ತೆರಿಗೆ ಇಲಾಖೆ ಇನ್ಸ್‌ಪೆಕ್ಟರ್‌ ಚಂದ್ರು ಮತ್ತು ಮತ್ತೊಬ್ಬ ಆರೋಪಿ ರಾಚಪ್ಪ ಅಧಿವರು ಅಭ್ಯರ್ಥಿಗಳಿಂದ ಹಣ ಪಡೆದಿದ್ದಾರೆ. ಬಹುಶಃ ಡೀಲ್‌ ಮುಗಿದ ಬಳಿಕ ಬಂದ ಹಣವನ್ನು ಮೂಲ ಸೋರಿಕೆದಾರರೊಂದಿಗೆ ಹಂಚಿಕೊಳ್ಳುವ ಯೋಚನೆ ಮಾಡಿರಬಹುದು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಲಾಗುವುದು ಎಂದು ಅಧಿಕಾರಿ ತಿಳಿಸಿದರು. ಚಂದ್ರು ಈಗಾಗಲೇ ಸಿಸಿಬಿ ವಶದಲ್ಲಿದ್ದಾನೆ. ಉಳಿದಂತೆ ಬಂಧಿತರಾದ ಸನಾ, ರಮೇಶ್‌ ಮತ್ತು ಜೈಲಿನಲ್ಲಿರುವ ರಾಚಪ್ಪನನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ತನಿಖಾಧಿಕಾರಿ ವೇಣುಗೋಪಾಲ್‌ ತಿಳಿಸಿದರು.


from India & World News in Kannada | VK Polls https://ift.tt/3c9Pd2S

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...