ಕುರುವಳ್ಳಿಯಲ್ಲಿ ಜಿಲೆಟಿನ್ ಸ್ಪೋಟಕ್ಕೆ ಪತ್ತೆಯಾದ ಸಾಕ್ಷ್ಯ: ವಿಕೆ ವರದಿ ಬಳಿಕ ತಹಶೀಲ್ದಾರ್ ತಂಡ ದಾಳಿ!

ತೀರ್ಥಹಳ್ಳಿ (ಶಿವಮೊಗ್ಗ): ತಾಲೂಕಿನ ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಸೋಮವಾರ ತಹಸೀಲ್ದಾರ್‌ ನೇತೃತ್ವದ ತಂಡ ದಾಳಿ ನಡೆಸಿದ್ದು, ಕಲ್ಲುಸ್ಫೋಟಕ್ಕೆ ಜಿಲೆಟಿನ್‌ ಸಾಮಗ್ರಿ ಬಳಸಿರುವ ಸಾಕ್ಷ್ಯ ದೊರಕಿದೆ. ''ವು ಜ.25ರಂದು 'ಕುರುವಳ್ಳಿ ಗಣಿಯಲ್ಲಿ ನಿತ್ಯವೂ ಸ್ಫೋಟ' ಶೀರ್ಷಿಕೆಯಡಿ ವರದಿ ಪ್ರಕಟಿಸಿದ ಬೆನ್ನಲ್ಲೆ ತಹಸೀಲ್ದಾರ್‌ ಡಾ.ಎಸ್‌.ಬಿ.ಶ್ರೀಪಾದ್‌ ನೇತೃತ್ವದಲ್ಲಿ ಪೊಲೀಸ್‌ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಕುರುವಳ್ಳಿ ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಈ ಸಂದರ್ಭ ಗಣಿಗಾರಿಕೆ ಪ್ರದೇಶದಲ್ಲಿ ಕಲ್ಲು ಸ್ಫೋಟಿಸಲು ಜಿಲೆಟಿನ್‌ ಸಾಮಗ್ರಿ ಬಳಸಿದ ಸಾಕ್ಷ್ಯ ದೊರಕಿದೆ. ಸ್ಫೋಟದಿಂದ ಕರಟಿದ ಜಿಲೆಟಿನ್‌ ಸಾಮಗ್ರಿ, ಸ್ಫೋಟಕದಿಂದ ಕಲ್ಲುಸ್ಫೋಟಿಸಲು ಮಾಡಿರುವ ಗುಳಿ ಪತ್ತೆಯಾಗಿದೆ. ಕುರುವಳ್ಳಿ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿರುವುದು ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್‌ ಇಲಾಖೆ ಗಮನದಲ್ಲಿದೆ. ಹಲವು ಬಾರಿ 35ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಾಗಿದ್ದು, ದಂಡ ವಸೂಲಿ ಮಾಡಲಾಗಿದೆ. ನ್ಯಾಯಾಲಯದಲ್ಲಿ ಇಂದಿಗೂ ಪ್ರಕರಣ ಕುರಿತು ವಿಚಾರಣೆ ನಡೆಯುತ್ತಿದೆ. ಗಣಿಗಾರಿಕೆಯಲ್ಲಿನ ಸಕ್ರಮ ಪ್ರದೇಶ ಕುರಿತಂತೆ ಸ್ಪಷ್ಟ ಮಾಹಿತಿ ನೀಡುವಂತೆ 2 ವರ್ಷಗಳ ಹಿಂದೆಯೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪೊಲೀಸ್‌ ಇಲಾಖೆ ಪತ್ರ ಬರೆದಿದೆ. ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ದಿನದಂದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸ್ಥಳದ ಸರ್ವೆ ಕಾರ್ಯ ನಿಗದಿಪಡಿಸಿದ್ದು, ಬಂದೋಬಸ್ತ್ ಕರ್ತವ್ಯದ ಹಿನ್ನೆಲೆಯಲ್ಲಿ ಸರ್ವೆ ಕಾರ್ಯದಲ್ಲಿ ಪೊಲೀಸ್‌ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿರಲಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಏಕಪಕ್ಷೀಯವಾಗಿ ಸರ್ವೆ ಮಾಡಿದ್ದು ಪೋಲಿಸ್‌ ಇಲಾಖೆಗೆ ಈವರೆಗೂ ವಿವರ ನೀಡಿಲ್ಲ. ಗಣಿಗಾರಿಕೆ ಪ್ರದೇಶದಲ್ಲಿ ನಿರಂತರ ಅಕ್ರಮ ಕುರಿತಂತೆ ಕಳೆದ ವರ್ಷವೂ ಪ್ರಕರಣ ದಾಖಲಾಗಿದೆ. ಪ್ರತಿ ದಿನ ಬೆಳಗ್ಗೆ ವಾಯುವಿಹಾರಕ್ಕೆ ತೆರಳುವ ಸಾರ್ವಜನಿಕರಿಗೆ, ಸ್ಥಳೀಯರಿಗೆ ಸ್ಫೋಟದ ಭಾರಿ ಶಬ್ದ ಕೇಳುತ್ತದೆ. ಪಕ್ಷಿ, ಪ್ರಾಣಿಗಳ ಆಕ್ರಂದನ ಕಿವಿಗೆ ಅಪ್ಪಳಿಸುತ್ತಿದ್ದರೂ ಆಡಳಿತ ವ್ಯವಸ್ಥೆ ಗಣಿಗಾರಿಕೆ ಅಕ್ರಮ ಸಮರ್ಥಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನುಮಾನ ಮೂಡಿಸಿದ ಡಿಸಿ ಹೇಳಿಕೆ ಪಶ್ಚಿಮಘಟ್ಟ ಸಾಲಿನ ಅತ್ಯಂತ ಸೂಕ್ಷ್ಮಪರಿಸರ ಪ್ರದೇಶದಲ್ಲಿ ಒಂದಾಗಿರುವ ತಾಲೂಕಿನ ಕುರುವಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ಹಲವು ವರ್ಷಗಳಿಂದ ನಡೆಯುತ್ತಿದ್ದು, ಜಿಲ್ಲಾಡಳಿತ ಈ ಅಕ್ರಮ ಮುಚ್ಚಿಡುವ ಪ್ರಯತ್ನಕ್ಕೆ ಕೈ ಹಾಕಿದೆಯೆ ಎಂಬ ಅನುಮಾನ ಸಾರ್ವಜನಿಕರಲ್ಲಿ ದಟ್ಟವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಕುರುವಳ್ಳಿ ಕಲ್ಲುಗಣಿಗಾರಿಕೆ ಕುರಿತಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ನೀಡಿದ ಹೇಳಿಕೆ ಕುರಿತಂತೆ ದಿನಪತ್ರಿಕೆ ಒಂದರಲ್ಲಿ ಪ್ರಕಟಗೊಂಡ ಸುದ್ದಿ ಅನುಮಾನಗಳಿಗೆ ಇನ್ನಷ್ಟು ಪುಷ್ಟಿ ನೀಡಿದ್ದು, ಜಿಲ್ಲಾಧಿಕಾರಿ ತಪ್ಪು ಮಾಹಿತಿ ನೀಡುವ ಅಗತ್ಯವೇನಿತ್ತು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕುರುವಳ್ಳಿಯಲ್ಲಿ ನಿರಂತರ ಸ್ಫೋಟ ನಡೆಯುತ್ತಿರುವ ಮಾಹಿತಿಯಿದ್ದರೂ ಜಿಲ್ಲಾಧಿಕಾರಿ ಈವರೆಗೂ ಭೇಟಿ ನೀಡಿದ ಮಾಹಿತಿ ಬಹಿರಂಗಗೊಂಡಿಲ್ಲ. 2 ಬಾರಿ ಭೇಟಿ ನೀಡಿದಾಗಲೂ ಸ್ಫೋಟಕದ ಮಾಹಿತಿ ದೊರೆತಿಲ್ಲ ಎಂಬ ಜಿಲ್ಲಾಧಿಕಾರಿ ಹೇಳಿಕೆ ಈಗ ವಿವಾದಕ್ಕೆ ಗುರಿಯಾಗಿದೆ. ಜಿಲ್ಲಾಧಿಕಾರಿ ಗಣಿಗಾರಿಕೆ ಪ್ರದೇಶ ವೀಕ್ಷಿಸಲಿ ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ. ಕುರುವಳ್ಳಿ ಕಲ್ಲುಗಣಿಗಾರಿಕೆ ಪ್ರದೇಶವನ್ನು ಸಂಪೂರ್ಣ ವೈಜ್ಞಾನಿಕ ತಪಾಸಣೆಗೆ ಒಳಪಡಿಸಿದರೆ ಜಿಲೆಟಿನ್‌ ಸಾಮಗ್ರಿ ಬಳಸಿ ಕಲ್ಲುಸ್ಫೋಟಿಸಿದ ಎಲ್ಲ ಕುರುಹು ಲಭ್ಯವಾಗುತ್ತವೆ ಎನ್ನುತ್ತಾರೆ ಸ್ಥಳೀಯ ಪ್ರಜ್ಞಾವಂತ ನಾಗರಿಕರು. ಉಸ್ತುವಾರಿ ಸಚಿವರಿದ್ದ ಮಹತ್ವದ ಸಭೆಯಲ್ಲಿ ತಜ್ಞರ ತಂಡದಿಂದ ವೈಜ್ಞಾನಿಕ ತನಿಖೆ ನಡೆಸುವ ಕುರಿತಂತೆ ಪ್ರಸ್ತಾಪಿಸದೆ, ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಜಿಲ್ಲಾಧಿಕಾರಿ ಪ್ರಯತ್ನ ಸಾರ್ವತ್ರಿಕವಾಗಿ ಪ್ರಶ್ನೆಗೆ ಗುರಿ ಆಗಿದೆ ಕುರುವಳ್ಳಿ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ, ಮಹತ್ವದ ಮಾಹಿತಿ ಪಡೆಯಲಾಗಿದೆ. ಅಕ್ರಮ-ಸಕ್ರಮ ಗಣಿಗಾರಿಕೆ ಕುರಿತಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ದಾಖಲೆ ಪಡೆದು, ಶೀಘ್ರ ಸಭೆ ನಡೆಸಿ ಅಕ್ರಮ ವಿರುದ್ಧ ಕಟ್ಟುನಿಟ್ಟು ಕ್ರಮ ಕೈಗೊಳ್ಳಲಾಗುವುದು. ಡಾ.ಎಸ್‌.ಬಿ. ಶ್ರೀಪಾದ್‌, ತಹಸೀಲ್ದಾರ್‌, ತೀರ್ಥಹಳ್ಳಿ ಕುರುವಳ್ಳಿಯಲ್ಲಿ ಅನೇಕ ವರ್ಷದಿಂದ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರುವುದು ಆಡಳಿತಕ್ಕೆ ಗೊತ್ತಿದೆ. ಬಂಡೆ ಒಡೆಯಲು ಜಿಲೆಟಿನ್‌ ಸ್ಫೋಟಕ ಬಳಸುತ್ತಿದ್ದು ತಜ್ಞರಿಂದ ಪರಿಶೀಲನೆ ನಡೆಸಲಿ. ವಿಷಯ ತಿಳಿಯದೆ ಜಿಲ್ಲಾಧಿಕಾರಿಯಿಂದ ಅಕ್ರಮ ಗಣಿಗಾರಿಕೆ ಸಮರ್ಥನೆ ಖಂಡನೀಯ. ಹೊಸಕೊಪ್ಪ ಸುಂದರೇಶ್‌, ಜಿಲ್ಲಾಧ್ಯಕ್ಷ, ಮಲೆನಾಡು ಸಂಘರ್ಷ ಹೋರಾಟ ಸಮಿತಿ ಜಿಲೆಟಿನ್‌ ಸ್ಫೋಟಕ ಬಳಕೆಯಿಂದ ಕುಂಬಾರದಡಿಗೆ ಬಳಿ ಹಲವು ಮನೆಗಳಿಗೆ ತೀವ್ರ ಹಾನಿ ಆಗಿದೆ. ಈ ಕುರಿತಂತೆ ಗ್ರಾ.ಪಂ., ತಹಸೀಲ್ದಾರ್‌, ಪೊಲೀಸ್‌ ಇಲಾಖೆಗೆ ಅನೇಕರು ದೂರು ನೀಡಿದ್ದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ತನಿಖೆ ನಡೆಸಿದರೆ ಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟಕ ಬಳಕೆಯಿಂದ ಆಗಿರುವ ಹಾನಿ, ಪರಿಸರ ನಾಶ ಕೃತ್ಯಕ್ಕೆ ಬೇಕಾದಷ್ಟು ಸಾಕ್ಷ್ಯ ದೊರೆಯುತ್ತವೆ. ಹೆಸರೇಳಲಿಚ್ಛಿಸದ ಸ್ಥಳೀಯ ನಿವಾಸಿ, ಕುರುವಳ್ಳಿ


from India & World News in Kannada | VK Polls https://ift.tt/36dcCwQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...