
ಸುನಿಲ್ ಪೊನ್ನೇಟಿ ಮಡಿಕೇರಿ ಮಡಿಕೇರಿ: ಯಡಿಯೂರಪ್ಪ ಸಂಪುಟದಲ್ಲಿ ಈ ಬಾರಿಯೂ ಕೊಡಗಿಗೆ ಪ್ರಾತಿನಿಧ್ಯ ಸಿಗದಕ್ಕೆ ಬಿಜೆಪಿಯೊಳಗೇ ಅಸಮಾಧಾನದ ಮಾತುಗಳು ಕೇಳಿಬರುತ್ತಿದೆ. ಪಕ್ಷಕ್ಕೆ ಸತತವಾಗಿ ಶಕ್ತಿ ತುಂಬುತ್ತಾ ಬಂದಿದ್ದರೂ ಜಿಲ್ಲೆಯ ಬಗ್ಗೆ ತಾತ್ಸಾರ ತೋರಿಸಲಾಗುತ್ತಿದೆ ಎನ್ನುವ ನೋವು ಕಾಣಿಸಿಕೊಂಡಿದೆ. ಇಬ್ಬರು ಹಿರಿಯ ಶಾಸಕರ ಪೈಕಿ ಕನಿಷ್ಠ ಒಬ್ಬರಾದರೂ ಮಂತ್ರಿಯಾಗುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗಿರುವುದು ಕಾರ್ಯಕರ್ತರ ನಿರಾಸೆಗೆ ಕಾರಣವಾಗಿದೆ. ರಾಜ್ಯದಲ್ಲಿ ಮತ್ತೆ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜಿಲ್ಲೆಯಲ್ಲಿನ ಪಕ್ಷದ ಕಾರ್ಯಕರ್ತರಲ್ಲಿ ನಿರೀಕ್ಷೆಗಳು ಗರಿ ಗೆದರಿದ್ದವು. ಎದುರಿಸುತ್ತಿದ್ದ ಮಂತ್ರಿಸ್ಥಾನದ ಬರಕ್ಕೆ ಈಗಲಾದರೂ ಮುಕ್ತಿ ಸಿಗಬಹುದು ಎನ್ನುವ ಆಸೆ ಇತ್ತು. ಆದರೆ ಆರಂಭದಲ್ಲೇ ನಿರಾಸೆ ಎದುರಿಸುವಂತಾಯಿತು. ಕಳೆದ ವರ್ಷದ ಫೆಬ್ರವರಿಯಲ್ಲಿ ನಡೆದ ಸಂಪುಟ ವಿಸ್ತರಣೆ ಸಂದರ್ಭವೂ ಸಂಖ್ಯಾ ಬಲದ ಆಟದ ಮುಂದೆ ಜಿಲ್ಲೆಯ ಶಾಸಕರಿಗೆ ಯೋಗ ಕೂಡಿ ಬಂದಿರಲಿಲ್ಲ. ಈಗಲೂ ಅದೇ ಸ್ಥಿತಿ. ಬಿಜೆಪಿ ಸರಕಾರ ಇದ್ದಾಗ 2012ರಲ್ಲಿ ಸಿಎಂ ಜಗದೀಶ್ ಶೆಟ್ಟರ್ ಮಂತ್ರಿಮಂಡಲದಲ್ಲಿ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಯ ಮಂತ್ರಿ ಆಗಿದ್ದರು. ಆನಂತರ ಬಂದ ಸರಕಾರಗಳಲ್ಲಿ ಕೊಡಗು ಮೂಲದ ದಿನೇಶ್ ಗುಂಡೂರಾವ್, ಕೆ.ಜೆ. ಜಾರ್ಜ್ ಸಚಿವರಾಗಿದ್ದರೂ ಜಿಲ್ಲೆಯಿಂದ ಗೆದ್ದು ಬಂದ ಯಾರೊಬ್ಬರೂ ಮಂತ್ರಿಗಳಾಗಿರಲಿಲ್ಲ. ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿಯೂ ಹೊರ ಜಿಲ್ಲೆಯವರ ಪಾಲಾಗಿತ್ತು. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಕೊಡಗಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎನ್ನುವ ಕೊರಗು ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ ಜಿಲ್ಲೆಯ ಜನತೆಯಲ್ಲೂಇದೆ. ಕಾಂಗ್ರೆಸ್ ಸರಕಾರವಿದ್ದಾಗ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ವೇಳೆ ಒಂದೇ ಸಮಯದಲ್ಲಿ ಕೊಡಗಿನ ಮೂವರು ಮಂತ್ರಿಯಾಗಿದ್ದರು. ಸುಮಾ ವಸಂತ್, ಎಂ.ಎಂ .ನಾಣಯ್ಯ ಹಾಗೂ ಟಿ. ಜಾನ್ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿ ಭದ್ರಕೋಟೆ ಈಗ ಕೊಡಗು ಬಿಜೆಪಿಯ ಭದ್ರ ಕೋಟೆಯಾಗಿ ಗುರುತಿಸಿಕೊಂಡಿದೆ. ಈಚೆಗೆ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಭರ್ಜರಿಯಾಗಿ ಗೆದ್ದಿದ್ದಾರೆ. ಜಿಲ್ಲೆಯ ಮೂರು ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯಲ್ಲೂ ಬಿಜೆಪಿಯೇ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇಬ್ಬರು ಶಾಸಕರು, ಒಬ್ಬ ವಿಧಾನಪರಿಷತ್ ಸದಸ್ಯ ಆಡಳಿತ ಪಕ್ಷದವರೇ ಇದ್ದಾರೆ. ಲೋಕಸಭಾ ಚುನಾವಣೆ ವೇಳೆ ಮೈಸೂರು-ಕೊಡಗು ಅಭ್ಯರ್ಥಿ ಗೆಲುವಿನಲ್ಲೂ ಜಿಲ್ಲೆಯ ಮತದಾರರು ಮಹತ್ವದ ಪಾತ್ರ ವಹಿಸಿದ್ದಾರೆ. ಹೀಗಿದ್ದರೂ ಮಂತ್ರಿ ಸ್ಥಾನದ ವಿಷಯದಲ್ಲಿ ಜಿಲ್ಲೆಯ ಬಗೆಗಿನ ತಾತ್ಸಾರ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ. ಬಹಳ ನೋವಾಗಿದೆ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ "ನನಗೆ ಬಹಳಷ್ಟು ನೋವಾಗಿದೆ. ನಾನು 5 ಬಾರಿ ಗೆದ್ದವನು. ಈಗಿನ ಪರಿಸ್ಥಿತಿಯಲ್ಲಿ ಏನು ಮಾನದಂಡ ಅಂತ ಮುಖ್ಯಮಂತ್ರಿ ಅವರನ್ನೇ ಕೇಳಬೇಕಾಗಿದೆ. ಪ್ರಮಾಣಿಕವಾಗಿ ಪಕ್ಷ ನಿಷ್ಠೆಯಿಂದ ಸಂಘಟನೆಗೆ ತೊಂದರೆ ಆಗದ ರೀತಿಯಲ್ಲಿ, ಯಾವುದೇ ಹೇಳಿಕೆ ಕೊಡದೆ ಕೆಲಸ ಮಾಡಿದವರಿಗೆ ಕಾಲ ಇದಲ್ಲ ಎಂದು ಈಗ ಗೊತ್ತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ನಾಲ್ಕು ಬಾರಿ ಆಯ್ಕೆಯಾಗಿರುವ ಹಾಲಿ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಎಂಪಿ ಅಪ್ಪಚ್ಚುರಂಜನ್ ಅವರಿಗೆ ಈ ಬಾರಿಯ ಮಂತ್ರಿಮಂಡಲದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇತ್ತಾದರೂ ಕಳೆದ ಬಾರಿಯಂತೆ ಈ ಬಾರಿಯೂ ಅದು ಹುಸಿಯಾಗಿದೆ. ಜಿಲ್ಲೆಗೆ ಆಗಮಿಸಿದ ನಾಯಕರೆಲ್ಲಾ ಮಂತ್ರಿಗಿರಿ ನೀಡುವ ಮಾತನ್ನು ಭಾಷಣ ಮತ್ತು ಮಾಧ್ಯಮಗಳ ಹೇಳಿಕೆಗೆ ಮಾತ್ರ ಸೀಮಿತವಾಗಿಸಿದ್ದು ವಿಷಾದನೀಯ. ಕೆ.ಜಿ. ಮನು, ಬಿಜೆಪಿ ತಾಲೂಕು ವಕ್ತಾರ
from India & World News in Kannada | VK Polls https://ift.tt/2XKidWt