ಗೇಟ್‌ವಾಲ್‌ಗೆ ಚೀನಾ ಮಾಲ್‌: ಜಲಸಂಪನ್ಮೂಲ ಇಲಾಖೆಯಲ್ಲಿ ಗೋಲ್‌ಮಾಲ್‌

- ಶಶಿಧರ ಹೆಗಡೆ, ಬೆಂಗಳೂರು ಜಲಸಂಪನ್ಮೂಲ ಇಲಾಖೆಯಲ್ಲೂ 'ಚೀನಾ ಮಾಲ್‌ ಗೋಲ್‌ಮಾಲ್‌'ಗೆ ರಹದಾರಿ ನಿರ್ಮಾಣವಾಗಿದ್ದು ಕೃಷ್ಣಾ ಭಾಗ್ಯ ಜಲ ನಿಗಮದ(ಕೆಬಿಜೆಎನ್‌ಎಲ್‌) ವ್ಯಾಪ್ತಿಯ ಕಾಲುವೆಗಳಿಗೆ ಸ್ವಯಂಚಾಲಿತ ಗೇಟ್‌ ಅಳವಡಿಸುವ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರದ ಶಂಕೆ ಮೂಡಿದೆ. ರೈತರ ಹೊಲಗಳಿಗೆ ಕಾಲುವೆಗಳಿಂದ ನೀರು ಹರಿಸುವಾಗ ವೈಜ್ಞಾನಿಕ ಮಾದರಿ ಅನುಸರಿಸಲು ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂಥ ಕ್ರಮ ಕೈಗೊಳ್ಳಲಾಗುತ್ತಿದೆ. ನೀರಿನ ಸೋರಿಕೆ ತಡೆಯುವುದರಲ್ಲಿ ಈ ತಂತ್ರಜ್ಞಾನ ನೆರವಿಗೆ ಬರಲಿದೆ. ಆದರೆ, ಇದಕ್ಕೆ ಬೇಕಾದ ಗುಣಮಟ್ಟದ ವಸ್ತುಗಳನ್ನು ಅಮೆರಿಕ ಹಾಗೂ ಆಸ್ಪ್ರೇಲಿಯಾದಿಂದ ತರಿಸಿಕೊಳ್ಳಬೇಕು ಎಂಬ ಷರತ್ತನ್ನು ಉಲ್ಲಂಘಿಸಲಾಗಿದೆ. ಯೋಜನೆ ಸಂಬಂಧ ಅಲ್ಪಾವಧಿ ಟೆಂಡರ್‌ ಕರೆದಿದ್ದಲ್ಲದೆ ಕಾಮಗಾರಿ ವೆಚ್ಚವನ್ನು 1 ಸಾವಿರ ಕೋಟಿ ರೂ.ದಿಂದ 2 ಸಾವಿರ ಕೋಟಿ ರೂ. ಗೆ ಹೆಚ್ಚಿಸಲು ಮುಂದಾಗಲಾಗಿದೆ ಎಂಬ ಆಪಾದನೆಯಿದೆ. ಕೆಬಿಜೆಎನ್‌ಎಲ್‌ ಅಡಿಯ ನಾರಾಯಣಪುರ ಎಡದಂಡೆ ಕಾಲುವೆ ಸೇರಿದಂತೆ ಎಸ್‌ಬಿಸಿ, ಜೆಬಿಸಿ, ಎಂಬಿಸಿ ಹಾಗೂ ಐಬಿಸಿ ಕಾಲುವೆಗಳ ಸಂಪರ್ಕ ಜಾಲ ಸಂಬಂಧ ಆಟೊಮ್ಯಾಟಿಕ್‌ ಗೇಟ್‌ ಅಳವಡಿಸಲಾಗುತ್ತಿದೆ. ಇದು ಭೌಗೋಳಿಕ ತಂತ್ರಜ್ಞಾನ ಮಾಹಿತಿ(ಜಿಐಎಸ್‌) ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತದೆ. ಇಂತಹ ಪ್ರಮುಖ ಯೋಜನೆಗೆ ಜಾಗತಿಕ ಟೆಂಡರ್‌ ಆಹ್ವಾನಿಸಬೇಕಿತ್ತು. ಆದರೆ, ಕೊಟೇಷನ್‌ ಮೂಲಕ ಅಂದಾಜು ಪಟ್ಟಿ ತಯಾರಿಸಲಾಗಿದೆ. ನಿಗಮದ ಅಂದಾಜು ಪಟ್ಟಿ ಪರಿಶೀಲನಾ ಸಮಿತಿಯ(ಇಆರ್‌ಸಿ) ಸಲಹೆಯನ್ನೂ ಪಡೆಯಲಾಗಿಲ್ಲ. ಬೋರ್ಡ್‌ ಮೀಟಿಂಗ್‌ನಲ್ಲೂ ಚರ್ಚಿಸಲಾಗಿಲ್ಲ. ಆಂಧ್ರ ಮೂಲದ ಕಂಪನಿಯೊಂದಕ್ಕೆ ಇದರ ಗುತ್ತಿಗೆ ವಹಿಸಲಾಗಿದ್ದು ಇಲಾಖೆಯ ಕೆಲವೇ ಕೆಲವು ಉನ್ನತಾಧಿಕಾರಿಗಳ ಮಟ್ಟದಲ್ಲಿತೀರ್ಮಾನ ಕೈಗೊಳ್ಳಲಾಗಿದೆ. 2018ರ ಅಕ್ಟೋಬರ್‌ನಲ್ಲೆ ಇದರ ಟೆಂಡರ್‌ ಕರೆಯಲಾಗಿದ್ದು ಈ 'ರಹಸ್ಯ ಕಾರ್ಯಾಚರಣೆ'ಗೆ ಅಂದಿನ ಸರಕಾರದ ರಕ್ಷಾಕವಚವಿತ್ತು ಎಂದು ಗೊತ್ತಾಗಿದೆ. ಕಳಪೆ ವಸ್ತುಗಳ ಖರೀದಿಆಟೊಮ್ಯಾಟಿಕ್‌ ಗೇಟ್‌ಗೆ ಬೇಕಾಗುವ ಅಲ್ಯೂಮಿನಿಯಂ ಅಲಾಯ್‌ ಗ್ರೇಡ್‌-ಎ2 ಸಾಮಗ್ರಿಗಳನ್ನು ಅಮೆರಿಕ, ಆಸ್ಪ್ರೇಲಿಯದಿಂದ ತರಿಸಬೇಕೆಂಬ ಸಾಮಾನ್ಯ ನಿಯಮವಿದೆ. ಈ ವಸ್ತುಗಳನ್ನು ಖರೀದಿಸಿದ ಬಳಿಕ ಭಾರತೀಯ ವಿಜ್ಞಾನ ಮಂದಿರದಿಂದ(ಐಐಎಸ್‌ಸಿ) ಪ್ರಮಾಣೀಕರಿಸಬೇಕು. ಈ ಯಾವ ಪ್ರಕ್ರಿಯೆಯನ್ನೂ ನಡೆಸಲಾಗಿಲ್ಲ. ನೀರು ಹರಿಯುತ್ತಿರುವ ಕಾರಣ ಕೃಷ್ಣಾ ಯೋಜನೆ ವ್ಯಾಪ್ತಿಯ ಕಾಲುವೆಗಳಲ್ಲಿ ಮಾರ್ಚ್ ನಂತರವೇ ಈ ಗೇಟ್‌ಗಳನ್ನು ಅಳವಡಿಸಬೇಕು. ಆದರೆ, ಗೇಟ್‌ಗೆ ಅಗತ್ಯವಾದ ಈ ಸಾಮಗ್ರಿಗಳು ಕಳಪೆ ಮಟ್ಟದಲ್ಲಿ ಇರುವುದರಿಂದ ಬಾಳಿಕೆ ಬರುವುದಿಲ್ಲ. ಹಾಗಾಗಿ ಈ ಟೆಂಡರ್‌ ರದ್ದು ಪಡಿಸಿ ಹೊಸದಾಗಿ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಜಲಸಂಪನ್ಮೂಲ ಇಲಾಖೆಯಲ್ಲೆ ಕಾರ್ಯ ನಿರ್ವಹಿಸುತ್ತಿರುವ ತಾಂತ್ರಿಕ ಪರಿಣಿತರೊಬ್ಬರು ಹೇಳುತ್ತಾರೆ. ವಿರೋಧಿಸಿದ ಅಧಿಕಾರಿಗೆ ವರ್ಗಾವಣೆ ಶಿಕ್ಷೆಈ ಯೋಜನೆಯ ಉಸ್ತುವಾರಿ ಕೆಬಿಜೆಎನ್‌ಎಲ್‌ ಕಾಲುವೆ ವಲಯ ಭೀಮರಾಯನಗುಡಿ ಹಾಗೂ ಪಾಲನೆ ಮತ್ತು ಪೋಷಣೆ ವಲಯ ನಾರಾಯಣಪುರದ ವ್ಯಾಪ್ತಿಗೆ ಬರುತ್ತದೆ. ಈ ಯೋಜನೆ ಟೆಂಡರ್‌ ಪ್ರಕ್ರಿಯೆ ಸಮರ್ಪಕವಾಗಿಲ್ಲವೆಂದು ವಿರೋಧಿಸಿದ್ದ ನಾರಾಯಣಪುರದ ಈ ಹಿಂದಿನ ಮುಖ್ಯ ಎಂಜಿನಿಯರ್‌ ಅನ್ನು ಆಣೆಕಟ್ಟೆ ವಲಯ ಆಲಮಟ್ಟಿಗೆ ವರ್ಗಾಯಿಸಲಾಗಿತ್ತು. ಈ ಮಧ್ಯೆ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯ ಅಧೀಕ್ಷಕ ಎಂಜಿನಿಯರ್‌ ಹುದ್ದೆಯನ್ನು ಮುಖ್ಯ ಎಂಜಿನಿಯರ್‌ ದರ್ಜೆಗೇರಿಸಲಾಗಿದೆ. ಈ ಹುದ್ದೆಗೆ ರೆಗ್ಯೂಲರ್‌ ಮುಖ್ಯ ಎಂಜಿನಿಯರ್‌ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆಯೂ ಅಧೀಕ್ಷಕ ಎಂಜಿನಿಯರ್‌ ಒಬ್ಬರು ತಾವೇ ಮುಂದುವರಿಯುವ ಯತ್ನದಲ್ಲಿದ್ದಾರೆ. ಪ್ರಭಾವಿಗಳ ಬೆಂಬಲವಿರುವ ಈ ಅಧಿಕಾರಿ ಅಧೀಕ್ಷಕ ಎಂಜಿನಿಯರ್‌ ಜತೆಗೆ ಪ್ರಭಾರ ಮುಖ್ಯ ಎಂಜಿನಿಯರ್‌ ಆಗಿರಲು ಕಸರತ್ತು ನಡೆಸುತ್ತಿದ್ದಾರೆ. ಕಾಲುವೆಗಳಿಗೆ ಸ್ವಯಂಚಾಲಿತ ಗೇಟ್‌ ಅಳವಡಿಸುವ ಟೆಂಡರ್‌ ಪ್ರಕ್ರಿಯೆಯ ಪೂರ್ಣ ಮಾಹಿತಿ ಇರುವುದರಿಂದಲೇ ಈ ಅಧಿಕಾರಿ ಸ್ಥಳದಿಂದ ಕದಲುತ್ತಿಲ್ಲ ಎನ್ನಲಾಗಿದೆ. ಏನಿದು ಸ್ವಯಂಚಾಲಿತ ವ್ಯವಸ್ಥೆ?ನ್ಯಾಷನಲ್‌ ವಾಟರ್‌ ಮಿಷನ್‌ ಮಾರ್ಗಸೂಚಿಯಲ್ಲೂ ಜಲ ಸಂರಕ್ಷಣೆಗೆ ಒತ್ತು ಕೊಡಲು ಸೂಚಿಸಲಾಗಿದೆ. ಅದರ ಅನುಸಾರ ಕಾಲುವೆಗಳಿಗೆ ಅಗತ್ಯಾನುಸಾರ ನೀರು ಬಿಡಲು 'ಸ್ಕಾಡಾ ಆಟೊಮೇಷನ್‌' ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರ ಮೂಲಕ ಸ್ವಯಂಚಾಲಿತ ಗೇಟ್‌ಗಳನ್ನು ಹಾಕಲಾಗುತ್ತದೆ. ನೀರಿನ ಸೋರಿಕೆ ತಡೆಯಲು ಇದು ಪರಿಣಾಮಕಾರಿ ಕ್ರಮ ಎನಿಸಿಕೊಳ್ಳಲಿದೆ. ಈ ಯೋಜನೆ ಬಗ್ಗೆ ಆರೋಪ ಬಂದಿರಬಹುದು. ಆದರೆ, ಕಾಮಗಾರಿ ಕೈಗೆತ್ತಿಕೊಂಡಾಗ ಕೇಂದ್ರ ಸರಕಾರದ ಮಾನ್ಯತೆಯಿರುವ ಥರ್ಡ್‌ ಪಾರ್ಟಿ ಸಂಸ್ಥೆಯಿಂದ ಪರಿಶೀಲನೆ ಮಾಡಿಸಲಾಗುವುದು. ಟೆಂಡರ್‌ ಪ್ರಕ್ರಿಯೆ 2018ರಲ್ಲೆ ನಡೆದಿದೆ. -ಎನ್‌.ಜಯರಾಂ, ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕ.


from India & World News in Kannada | VK Polls https://ift.tt/2FlC3hU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...