ಗುವಾಹಟಿ: ಹೊಸ ವರ್ಷ ಆರಂಭವಾಗಿರುವಂತೆಯೇ ಭಾರತ ಕ್ರಿಕೆಟ್ ತಂಡವು ಹೊಸ ಸವಾಲುಗಳಿಗೆ ಸಜ್ಜಾಗುತ್ತಿದೆ. ಶ್ರೀಲಂಕಾ ವಿರುದ್ದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾಗವಹಿಸುತ್ತಿದೆ. ಈ ಮಧ್ಯೆ ಎಲ್ಲರ ಗಮನ ಬಲಗೈ ವೇಗದ ಬೌಲರ್ ಮೇಲೆ ನೆಟ್ಟಿದೆ. ಬೆನ್ನಿನ ಕೆಳಭಾಗದಲ್ಲಿ ಸ್ಟ್ರೆಚ್ ಫ್ರಾಕ್ಚರ್ ಗಾಯದ ಸಮಸ್ಯೆಗೊಳಗಾಗಿ ನಾಲ್ಕು ತಿಂಗಳುಗಳಷ್ಟು ಕಾಲ ಕ್ರಿಕೆಟ್ ರಂಗದಿಂದ ದೂರವುಳಿದಿರುವ ಜಸ್ಪ್ರೀತ್ ಬುಮ್ರಾ ಪುನರಾಗಮನದ ಹೊಸ್ತಿಲಲ್ಲಿದ್ದಾರೆ. ಭಾರತ ಹಾಗೂ ಶ್ರೀಲಂಕಾ ನಡುವಣ ಮೊದಲ ಟಿ20 ಪಂದ್ಯವು ಭಾನುವಾರದಂದು ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿದೆ. ಈ ಮಧ್ಯೆ ಆಟಗಾರರು ಮೈದಾನವನ್ನು ತಲುಪಿದ್ದು, ಅಭ್ಯಾಸದಲ್ಲಿ ಭಾಗಿಯಾಗಿದ್ದಾರೆ. ಈ ಪೈಕಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಅಭ್ಯಾಸವನ್ನು ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ನಿಖರ ಯಾರ್ಕರ್ ದಾಳಿಯ ಮೂಲಕ ಗಮನ ಸೆಳೆದ ಬುಮ್ರಾ, ತಮ್ಮಲ್ಲಿ ಇನ್ನೂ ಸಾಮರ್ಥ್ಯ ಬಾಕಿ ಉಳಿದಿದೆ ಎಂಬುದನ್ನು ಸಾಬೀತು ಮಾಡಿದರು. ಅಲ್ಲದೆ ಎದುರಾಳಿ ಲಂಕಾ ತಂಡಕ್ಕೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದರು. ತಮ್ಮದೇ ಆದ ವಿಶಿಷ್ಟ ಬೌಲಿಂಗ್ ಶೈಲಿಯನ್ನು ಹೊಂದಿರುವ ಬುಮ್ರಾ, ನಿಖರ ಯಾರ್ಕರ್ ದಾಳಿಯ ಮೂಲಕ ವಿಕೆಟ್ ಉಡಾಯಿಸಿದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ವಿಡಿಯೋವನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದೆ. ಅಲ್ಲದೆ 'ಹಿ ಈಸ್ ಬ್ಯಾಕ್' ಎಂಬ ಕ್ಯಾಪ್ಷನ್ ನೀಡಿದೆ. ಕಳೆದ ವರ್ಷ ಸೆಪ್ಟೆಂಬರ್ 24ರಂದು ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾಗಿದ್ದ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ವೆಸ್ಟ್ಇಂಡೀಸ್ ಸರಣಿಯಲ್ಲಿ ಬುಮ್ರಾ ಕೊನೆಯದಾಗಿ ಆಡಿದ್ದರು. ಅಲ್ಲದೆ ಹರ್ಭಜನ್ ಸಿಂಗ್ ಹಾಗೂ ಇರ್ಫಾನ್ ಪಠಾಣ್ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್ ಎಂಬ ಕೀರ್ತಿಗೆ ಭಾಜನವಾಗಿದ್ದರು. ಅಷ್ಟೇ ಯಾಕೆ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ಇಂಡೀಸ್ ನೆಲದಲ್ಲಿ ಐದು ವಿಕೆಟ್ ಸಾಧನೆ ಮಾಡಿದ ಅಪರೂಪದ ದಾಖಲೆಯನ್ನು ಹೊಂದಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QHsS0t