ಫಾರ್ಚುನರ್‌ ಕಾರು, 56 ಇಂಚಿನ ಟಿವಿಗಾಗಿ ಸಿದ್ದರಾಮಯ್ಯ, ಕಾಗೇರಿ ಮಧ್ಯೆ ಜಗ್ಗಾಟ!

- ರಾಘವೇಂದ್ರ ಭಟ್‌, ಬೆಂಗಳೂರು ಪ್ರಧಾನಿ ನರೇಂದ್ರ ಮೋದಿಯವರ '56 ಇಂಚಿನ' ಎದೆಯ ಬಗ್ಗೆ ಸದಾ ವ್ಯಂಗ್ಯವಾಡುತ್ತಿದ್ದ ಪ್ರತಿಪಕ್ಷ ನಾಯಕ , ವಿಧಾನಸಭೆಯ ಪ್ರತಿಪಕ್ಷ ಮೊಗಸಾಲೆಯಲ್ಲಿರುವ ತಮ್ಮ ಕಚೇರಿಗೆ 56 ಇಂಚಿನ ಟಿವಿ, ಫುಲ್ಲಿಲೋಡೆಡ್‌ ಫಾರ್ಚುನರ್‌ ಕಾರು ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ, ಅವರ ಈ ಬೇಡಿಕೆಗೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಯಿಂದ ನೀರಸ ಪ್ರತಿಸ್ಪಂದನೆ ಲಭಿಸಿದೆ. ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಿಗೆ ಈ ಹಿಂದೆ ನೀಡಿದ್ದ ಎರಡು ಫಾರ್ಚುನರ್‌ ಕಾರುಗಳ ಪೈಕಿ ಒಂದನ್ನೂ ಬಳಸದೆ ಹೊಸ ಕಾರಿನ ಬೇಡಿಕೆಯನ್ನು ಜೀವಂತವಿಟ್ಟಿದ್ದಾರೆ. ಇದರ ಜತೆಗೆ, ತಮ್ಮ ಇಬ್ಬರು ಸಿಬ್ಬಂದಿಗೆ ವಿಶೇಷ ಕರ್ತವ್ಯಾಧಿಕಾರಿ ಹುದ್ದೆ (ಓಎಸ್‌ಡಿ)ಗೆ ಬಡ್ತಿ ನೀಡಿ ಎಂದು ಕೇಳಿಕೊಂಡಿದ್ದಾರೆ. ಈ ಮನವಿಗೆ ಹಣಕಾಸು ಇಲಾಖೆಯಿಂದ ಆಕ್ಷೇಪ ಎದುರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಸ್ಪೀಕರ್‌ ಕಚೇರಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಕಳೆದ ವಿಧಾನಸಭೆ ಅಧಿವೇಶನದ ವೇಳೆ ಕಾಗೇರಿ ಮತ್ತು ಸಿದ್ದರಾಮಯ್ಯ ನಡುವೆ ನಡೆದ ವಾಗ್ವಾದದ ಹಿನ್ನೆಲೆಯಲ್ಲಿಸವಲತ್ತಿನ ಬೇಡಿಕೆ ಗಮನ ಸೆಳೆದಿದೆ. ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರೇ ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಆರ್ಥಿಕ ಪರಿಸ್ಥಿತಿ ಕಾರಣಪ್ರತಿಪಕ್ಷ ನಾಯಕರ ಕಚೇರಿಯಲ್ಲಿ ಈಗಿರುವ ಟಿವಿ ಚಿಕ್ಕದಾಗಿರುವುದರಿಂದ ದೊಡ್ಡದು ಬೇಕು ಎನ್ನುವುದು ಸಿದ್ದರಾಮಯ್ಯ ಬೇಡಿಕೆ. ಜತೆಗೆ ಉತ್ತಮ ಸೌಕರ್ಯ ಹೊಂದಿರುವ ಕಾರಿಗೆ ಆಗ್ರಹ. ಆದರೆ, ಹಿಂದೆ ಕೊಟ್ಟಿರುವ ಕಾರುಗಳನ್ನೇ ಬಳಸಲಿ ಎನ್ನುವುದು ಸ್ಪೀಕರ್‌ ಕಚೇರಿ ವಾದ. ಹೊಸ ವಾಹನ ಖರೀದಿಗೆ ಸುಮಾರು 40 ಲಕ್ಷ ರೂ. ವೆಚ್ಚ ಮಾಡಬೇಕಾಗುತ್ತದೆ. ನೆರೆಯಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿದೆ. ಇಂಥ ಸಂದರ್ಭದಲ್ಲಿ ಶಾಸಕಾಂಗದಲ್ಲೂ ಆರ್ಥಿಕ ಮಿತವ್ಯಯ ಸಾಧಿಸಬೇಕಾಗುತ್ತದೆ. ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯನವರು ಈ ಸಂಕಷ್ಟ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ವಾದವನ್ನು ಸ್ಪೀಕರ್‌ ಕಚೇರಿ ಮುಂದಿಟ್ಟಿದೆ. ಇಬ್ಬರಿಗೂ ಪ್ರತಿಷ್ಠೆ ಪ್ರಶ್ನೆನಿಲುವಳಿ ಸೂಚನೆ ಪೂರ್ವಭಾವಿ ಚರ್ಚೆ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಿಗೆ ಸಮಯದ ಮಿತಿ ವಿಧಿಸುವುದಕ್ಕೆ ನಿಯಮಾವಳಿ ಪ್ರಕಾರ ಸ್ಪೀಕರ್‌ಗೆ ಅಧಿಕಾರ ಇದೆ ಎಂದು ಕಾಗೇರಿ ಸಾಬೀತು ಮಾಡಿದ್ದು ಸಿದ್ದರಾಮಯ್ಯನವರನ್ನು ಕೆರಳಿಸಿದೆ. ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲೂ ಕಾಗೇರಿ ಕೋಮುವಾದಿ ಎಂದು ಆರೋಪಿಸುತ್ತಿದ್ದ ಸಿದ್ದರಾಮಯ್ಯ ಬಾದಾಮಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ 'ಅದ್ಯಾವುದೋ ಕಾಗೇರಿ ಅಂತೆ, ಅವರಿಗೆ ಏನು ಗೊತ್ತೇ ಇಲ್ಲ, ನನಗೆ ಮಾತನಾಡುವುದಕ್ಕೆ ಬಿಡಲಿಲ್ಲ' ಎಂದು ಏಕವಚನ ಪ್ರಯೋಗಿಸಿದ್ದರು. ಇದರಿಂದ ಕಾಗೇರಿ ಬೇಸರಗೊಂಡಿದ್ದರು. ಸಿಎಂ ಕೂಡಾ ಆಕ್ಷೇಪಿಸಿದ್ದರು. ಸಿದ್ದರಾಮಯ್ಯ ವಿರುದ್ಧ 'ಹಕ್ಕು ಚ್ಯುತಿ ' ನಿರ್ಣಯ ಮಂಡನೆಗೂ ಚಿಂತನೆ ನಡೆದಿತ್ತು. ಇಷ್ಟೆಲ್ಲ ನಡೆದರೂ ಸಿದ್ದರಾಮಯ್ಯ ಸೌಜನ್ಯಕ್ಕೂ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲ. ಹೀಗಾಗಿ ಅವರ ಬೇಡಿಕೆಗಳನ್ನು ಸಕಾರಣಗಳೊಂದಿಗೆ ಮಾನ್ಯ ಮಾಡುತ್ತಿಲ್ಲ ಎನ್ನಲಾಗಿದೆ. ಪ್ರತಿಪಕ್ಷ ನಾಯಕನ ಕಾನೂನುಬದ್ಧ ಸವಲತ್ತುಗಳಿಗೆ ಸ್ಪಂದಿಸಬೇಕಾದುದು ಸ್ಪೀಕರ್‌ ಕರ್ತವ್ಯ. ನನಗೆ ಕಾರು ಮತ್ತು ಆಪ್ತ ಸಿಬ್ಬಂದಿ ಒದಗಿಸಲಾಗದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. - ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ


from India & World News in Kannada | VK Polls https://ift.tt/2MW42c1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...