ಕನ್ನಡ ಕಲಿಸದ ಶಾಲೆಗಳಿಗೆ ಸರಿಯಾಗಿ ಪಾಠ ಕಲಿಸಬೇಕಾದೀತು: ಸುರೇಶ್‌ಕುಮಾರ್‌ ಖಡಕ್‌ ಎಚ್ಚರಿಕೆ

ಬೆಂಗಳೂರು: ಕಡ್ಡಾಯ ಕನ್ನಡ ಕಲಿಕಾ ಅಧಿನಿಯಮದನ್ವಯ ರಾಜ್ಯದಲ್ಲಿಕನ್ನಡ ಬೋಧಿಸದ ಶಾಲೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಎಚ್ಚರಿಕೆ ನೀಡಿದ್ದಾರೆ. ಶಿಕ್ಷಣ ಇಲಾಖೆಯು ಶುಕ್ರವಾರ ಮೌಂಟ್‌ ಕಾರ್ಮೆಲ್‌ ಮಹಿಳಾ ಕಾಲೇಜಿನಲ್ಲಿಕನ್ನಡ ಭಾಷಾ ಅನುಷ್ಠಾನ ಕುರಿತ ಕಾರಾರ‍ಯಗಾರ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ''ಕಡ್ಡಾಯ ಕನ್ನಡ ಕಲಿಕಾ ಅಧಿನಿಯಮ 2015ರಲ್ಲೇ ಜಾರಿಯಾಗಿದ್ದರೂ 2017-18ರಿಂದ ಕಟ್ಟುನಿಟ್ಟಾಗಿ ಎಲ್ಲಶಾಲೆಗಳೂ ಅದನ್ನು ಅನುಷ್ಠಾನಗೊಳಿಸಬೇಕಿತ್ತು. ಆದರೂ ಪಾಲಿಸುತ್ತಿಲ್ಲ,''ಎಂದರು ''ಸರಕಾರ ನಿಗದಿಪಡಿಸಿರುವ ಪಠ್ಯಪುಸ್ತಕವನ್ನೇ ಬಳಸಿ ಒಂದನೇ ತರಗತಿಯಿಂದ ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯಾಗಿ ಕಲಿಸಲೇಬೇಕು. ಬೇರೆ ಕನ್ನಡ ಪಠ್ಯ ಬೋಧಿಸಲು ನಿಯಮಗಳಲ್ಲಿಅವಕಾಶಗಳಿಲ್ಲಎಂಬುದನ್ನೂ ಶಾಲೆಗಳು ಅರ್ಥ ಮಾಡಿಕೊಳ್ಳಬೇಕು'' ಎಂದು ಸೂಚಿಸಿದರು. ''ಕನ್ನಡ ನೆಲದಲ್ಲಿದ್ದೂ ಕನ್ನಡ ನೆಲ ಜಲ ಬಳಸಿಕೊಂಡೂ ಕನ್ನಡ ಕಲಿಯದಿದ್ದರೂ ಬದುಕಬಹುದು ಎಂಬ ಭಾವನೆ ಬೇಡ. ಕಾವೇರಿ ನೀರು ಕುಡಿಯುವವರೆಲ್ಲರೂ, ಕನ್ನಡ ನೆಲದಲ್ಲಿವಾಸಿಸುವರೆಲ್ಲರೂ ಕನ್ನಡ ಕಲಿಯಲೇಬೇಕು,'' ಎಂದರು. ''ಒಂದು ವೇಳೆ ನೀವು ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದಿಲ್ಲಎಂದಾದರೆ ಏನು ಮಾಡಬೇಕು, ಹೇಗೆ ನಿಮ್ಮಿಂದ ಮಕ್ಕಳಿಗೆ ಕನ್ನಡ ಕಲಿಸಬೇಕು, ಅದಕ್ಕಾಗಿ ಏನು ಮಾಡಬೇಕು, ಯಾವಾಗ ಮಾಡಬೇಕು ಎಂಬುದು ಸರಕಾರಕ್ಕೆ ಗೊತ್ತಿದೆ. ಇನ್ನು ಸಹಿಸಲು ಸಾಧ್ಯವೇ ಇಲ್ಲ,''ಎಂದು ಎಚ್ಚರಿಕೆ ನೀಡಿದರು. ವೇತನ ತಾರತಮ್ಯದ ವಿರುದ್ಧ ಕ್ರಮ ''ಕನ್ನಡ ಶಿಕ್ಷಕರಿಗೆ ವೇತನದಲ್ಲಿ ತಾರತಮ್ಯ ಮಾಡುವ ಶಾಲೆಗಳ ವಿರುದ್ಧವೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಾಗಾರಕ್ಕೆ ಗೈರು ಹಾಜರಾದ ಶಾಲೆಗಳಿಗೆ ನೊಟೀಸ್‌ ಜಾರಿಗೊಳಿಸಿ ವಿವರಣೆ ಪಡೆಯಲಾಗುವುದು'' ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಮಾತನಾಡಿ, ''ಕನ್ನಡದ ಕೆಲಸಗಳು ಸರಕಾರದಿಂದ ಚೆನ್ನಾಗಿಯೇ ನಡೆದಿವೆ. ಆದರೆ, ಕೊನೆ ಹಂತದಲ್ಲಿ ಜಾರಿಗೊಳಿಸುವವರು ಸರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿಲ್ಲ. ಕನ್ನಡವನ್ನು ಭಾಷೆಯನ್ನಾಗಿ ಕಲಿಸಲು ಶಾಲೆಗಳಿಗೆ ಏನು ತೊಂದರೆ'' ಎಂದು ಪ್ರಶ್ನಿಸಿದರು. ''ನೆಲದ ಭಾಷೆ ಕಲಿಸಲು ಇಂತಹ ಪೊಲೀಸಿಂಗ್‌ ವ್ಯವಸ್ಥೆ ಇರಬೇಕಾದುದು ದುರ್ದೈವ ಸಂಗತಿ. ಸಂಸ್ಕೃತಿಯ ಮೂಲ ಭಾಷೆಯಾದ್ದರಿಂದ ಮುಂದೆ ಆ ಮಗು ಸಾಂಸ್ಕೃತಿಕವಾಗಿ ಉತ್ತಮವಾಗಿ ಬೆಳೆಯಬೇಕಾದರೆ ತನ್ನ ನೆಲದ ಭಾಷೆ ಕಲಿಯಲೇಬೇಕು,'' ಎಂದರು. ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ ಭಾಗವಹಿಸಿದ್ದರು. ಬೆಂಗಳೂರು ನಗರದ ಸಿಬಿಎಸ್‌ಇ/ ಐಸಿಎಸ್‌ಇ/ ಐಜಿಸಿಎಸ್‌ಇ ಶಾಲೆಗಳು ಮತ್ತು ಕೇಂದ್ರೀಯ ವಿದ್ಯಾಲಯಗಳ ಪ್ರಾಚಾರ್ಯರು ಮತ್ತು ಕನ್ನಡ ಉಪಾಧ್ಯಾಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.


from India & World News in Kannada | VK Polls https://ift.tt/2twIT13

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...