
: ಕೃಷಿ ಕಾಯಿದೆಗಳ ಸಾಧಕ ಬಾಧಕ ಕುರಿತು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ತಜ್ಞರ ಸಮಿತಿ ಸಿದ್ಧಪಡಿಸಿರುವ ವರದಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಬಿಡುಗಡೆಗೊಳಿಸುವಂತೆ ಕೋರಿ ಎನ್. ವಿ. ರಮಣ ಅವರಿಗೆ ಸಮಿತಿಯ ಸದಸ್ಯ ಅನಿಲ್ ಘನವತ್ ಪತ್ರ ಬರೆದಿದ್ದಾರೆ. ಕೇಂದ್ರದ ಮೂರು ಕೃಷಿ ಕಾಯಿದೆಗಳು ರೈತ ವಿರೋಧಿ ಎಂದು ಬಿಂಬಿಸಿ ಕೆಲವು ಸಂಘಟನೆಗಳು ಪ್ರತಿಭಟನೆಗೆ ಇಳಿದಾಗ ಅದರ ಪರಿಶೀಲನೆಗೆ ಸುಪ್ರೀಂ ಕೋರ್ಟ್ ತಜ್ಞರ ಸಮಿತಿ ರಚಿಸಿತ್ತು. ಸಮಿತಿಯು ಹಲವು ತಿಂಗಳುಗಳ ಕಾಲ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿ ಕೋರ್ಟ್ಗೆ ಒಪ್ಪಿಸಿತ್ತು. ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಗುರುನಾನಕ್ ಜಯಂತಿ ದಿನದಂದು ವಿವಾದಗ್ರಸ್ತ ಕೃಷಿ ಕಾಯಿದೆಗಳನ್ನು ರದ್ದುಗೊಳಿಸುವ ಘೋಷಣೆ ಮಾಡಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೃಷಿ ಕಾಯಿದೆಗಳನ್ನು ಹಿಂಪಡೆಯುವ ವಿಧೇಯಕಕ್ಕೆ ಅಂಗೀಕಾರ ಸಿಗಲಿದ್ದು, ಸಂಸತ್ನ ಚಳಿಗಾಲದ ಅಧಿವೇಶನದಲ್ಲಿಯೇ ಮಂಡಿಸಲು ಸರಕಾರ ಸಿದ್ಧತೆ ನಡೆಸಿದೆ. ಈ ನಡುವೆಯೇ, 'ಜಡ ನೀತಿಗಳಿಂದ ಭಾರತದ ಕೃಷಿ ಸೊರಗಿ ಹೋಗಿದೆ. ಸುಧಾರಣೆಯ ಅಗತ್ಯ ಇರುವಾಗಲೇ ವಿವಾದದ ಕಿಡಿ ಹೊತ್ತಿಸಿ ಅತ್ಯುತ್ತಮವಾದ ಮೂರು ಕಾಯಿದೆಗಳನ್ನು ರದ್ದುಗೊಳಿಸಲಾಗುತ್ತಿದೆ. ಇದು ದುರದೃಷ್ಟಕರ. ಇವುಗಳ ನಡುವೆ ಸಮಿತಿ ಸಿದ್ಧಪಡಿಸಿರುವ ವರದಿ ಮೂಲೆ ಗುಂಪಾಗಬಾರದು. ಸುಪ್ರೀಂ ಕೋರ್ಟ್ ಶೀಘ್ರವೇ ಆ ವರದಿಯನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಸಮಿತಿಗಾದರೂ ಅಂತಹ ಅಧಿಕಾರ ನೀಡಬೇಕು' ಎಂದು ಘನವತ್ ಮನವಿ ಮಾಡಿದ್ದಾರೆ. ಈ ಕುರಿತು 23 ಪುಟಗಳ ಸುದೀರ್ಘ ಪತ್ರವನ್ನು ಅವರು ಸಿಜೆಐ ಎನ್. ವಿ. ರಮಣ ಅವರಿಗೆ ಬರೆದಿದ್ದಾರೆ. ಕಾನೂನು ಮಾಡಿದರೆ ಬಿಕ್ಕಟ್ಟು: 'ಬೆಂಬಲ ಬೆಲೆಗೆ ಕಾನೂನು ಖಾತರಿ ಕುರಿತ ರೈತರ ಬೇಡಿಕೆ ಅನುಷ್ಠಾನ ಯೋಗ್ಯವಾದದ್ದಲ್ಲ. ಒಂದೊಮ್ಮೆ ಅಂತಹ ಕಾನೂನು ರೂಪಿಸಿದರೆ ಬಹು ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗಲಿದೆ. ವಾಸ್ತವವಾಗಿ ಈ ದೇಶಕ್ಕೆ ಬೇಕಾಗಿರುವುದು ಸಮಗ್ರ ಕೃಷಿ ಸುಧಾರಣೆ ನೀತಿ. ಮೂರು ಕೃಷಿ ಕಾಯಿದೆಗಳು ಅದನ್ನು ಸಮರ್ಥವಾಗಿ ಪ್ರತಿನಿಧಿಸಿದ್ದವು. ಆದರೆ ಕೆಲವರ ವೈಯಕ್ತಿಕ ಹಿತಾಸಕ್ತಿಯಿಂದ ಅವು ಈಗ ರದ್ದುಗೊಳ್ಳುವ ಹಂತದಲ್ಲಿವೆ. ಈ ವಿಷಯದಲ್ಲಿ ರೈತರನ್ನು ಸಂಪೂರ್ಣ ದಾರಿ ತಪ್ಪಿಸಲಾಗಿದೆ. ಅಧ್ಯಯನ ವರದಿ ಬಿಡುಗಡೆ ಮಾಡಿದರೆ, ಕನಿಷ್ಠ ಪಕ್ಷ ಕೃಷಿ ಸುಧಾರಣೆಯ ಅಗತ್ಯ ಏನು ಅನ್ನುವುದಾದರೂ ಅರ್ಥವಾಗುತ್ತದೆ ಎಂದು ಘನವತ್ ಪ್ರತಿಪಾದಿಸಿದರು. ಕಳೆದ ಮಾರ್ಚ್ 19ರಂದೇ ತಜ್ಞರ ಸಮಿತಿ ಸುಪ್ರೀಂ ಕೋರ್ಟ್ಗೆ ಅಧ್ಯಯನ ವರದಿ ಸಲ್ಲಿಸಿತ್ತು.
from India & World News in Kannada | VK Polls https://ift.tt/3cF9cpo