ಓವಲ್‌ ಟೆಸ್ಟ್‌ನಲ್ಲಿ ಬೈರ್‌ಸ್ಟೋವ್‌ಗೆ ಡಿಕ್ಕಿ ಹೊಡೆದ 'ಜಾರ್ವೊ' ಬಂಧನ!

ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ವೇಳೆ ಅಂಗಣಕ್ಕೆ ಪ್ರವೇಶಿಸಿ ನಾನ್‌ ಸ್ಟ್ರೈಕ್‌ನಲ್ಲಿದ್ದ ಜಾನಿ ಬೈರ್‌ಸ್ಟೋವ್‌ಗೆ ಡಿಕ್ಕಿ ಹೊಡೆದು ಆಕ್ರಮಣಕಾರಿ ಪ್ರವೃತ್ತಿ ತೋರಿದ ಜಾರ್ವೊ-69 ಜೆರ್ಸಿ ಹೆಸರಿನ ಡೇನಿಯಲ್‌ ಜಾರ್ವಿಸ್‌ ಅವರನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ಲಾರ್ಡ್ಸ್ ಟೆಸ್ಟ್ ಹಾಗೂ ಹೆಡಿಂಗ್ಲೇ ಟೆಸ್ಟ್‌ ಪಂದ್ಯಗಳ ಸಮಯದಲ್ಲಿ ಜಾರ್ವೊ ಅನಗತ್ಯವಾಗಿ ಪಿಚ್‌ ಬಳಿ ಬಂದು ಪಂದ್ಯಕ್ಕೆ ಅಡ್ಡಿ ಉಂಟು ಮಾಡಿದ್ದರು. ಎರಡನೇ ಟೆಸ್ಟ್‌ ಪಂದ್ಯದ ವೇಳೆ ಸಂಖ್ಯೆಯ ವೈಟ್ಸ್‌ ಧರಿಸಿಕೊಂಡು ಕ್ರೀಸ್‌ ಬಳಿ ಬಂದಿದ್ದ ಜಾರ್ವಿಸ್‌, ತಾನು ಭಾರತ ತಂಡದ ಆಟಗಾರ ಎಂದು ಹೇಳಿದ್ದರು. ನಂತರ ಸ್ಟೇಡಿಯಂನ ಭದ್ರತಾ ಸಿಬ್ಬಂದಿ ಅವರನ್ನು ಮೈದಾನದಿಂದ ಹೊರ ಕಳುಹಿಸಿದ್ದರು. ಅಷ್ಟಕ್ಕೆ ಸುಮ್ಮನಾಗದ ಡೇನಿಯಲ್‌ ಜಾರ್ವಿಸ್‌, ಹೆಡಿಂಗ್ಲೇ ಟೆಸ್ಟ್‌ ಪಂದ್ಯದ ವೇಳೆ ಸಂಪೂರ್ಣ ಪ್ಯಾಡ್‌ ಅಪ್‌ ಆಗಿ ನಾಯಕ ವಿರಾಟ್‌ ಕೊಹ್ಲಿ ಸ್ಥಾನದಲ್ಲಿ ಕ್ರೀಸ್‌ ಬಳಿ ಬಂದು, ನನಗೆ ಬೌಲ್‌ ಮಾಡಿ ಎಂದು ಹೇಳಿದ್ದರು. ಈ ವೇಳೆಯೂ ಭದ್ರತಾ ಸಿಬ್ಬಂದಿ ಜಾರ್ವೊ ಅವರನ್ನು ಮೈದಾನದಿಂದ ಹೊರಗೆ ಕಳುಹಿಸಲು ಹರ ಸಾಹಸ ಪಟ್ಟಿದ್ದರು. ಈ ಎರಡೂ ಘಟನೆಗಳ ಹಿನ್ನೆಲೆಯಲ್ಲಿ ಡೇನಿಯಲ್‌ ಜಾರ್ವಿಸ್‌ ಅವರನ್ನು ಲಾರ್ಡ್ಸ್ ಹಾಗೂ ಹೆಡಿಂಗ್ಲೇ ಮೈದಾನಗಳ ಜೀವಿತಾವಧಿ ಪ್ರವೇಶವನ್ನು ಇಸಿಬಿ ರದ್ದುಗೊಳಿಸಿದೆ. ಅಂದಹಾಗೆ, ಇಲ್ಲಿನ ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನವೂ ಜಾರ್ವೊ ಚೆಂಡಿನೊಂದಿಗೆ ಮೈದಾನಕ್ಕೆ ಆಗಮಿಸಿದ್ದರು. ಈ ವೇಳೆ ಬೌಲ್‌ ಮಾಡಲು ಸಜ್ಜಾಗುತ್ತಿದ್ದ ಉಮೇಶ್‌ ಯಾದವ್‌, ಜಾರ್ವೊ ಬರುತ್ತಿದ್ದನ್ನು ನೋಡಿ ಕೆಲ ನಿಮಿಷಗಳ ಕಾಲ ಸುಮ್ಮನಾದರು. ಅದರಂತೆ ಒಂದು ಎಸೆತ ಪೂರ್ಣಗೊಳಿಸಿದ ಜಾರ್ವೊ ನಿಯಂತ್ರಣ ಕಳೆದುಕೊಂಡು ನಾನ್‌ಸ್ಟ್ರೈಕ್‌ನಲ್ಲಿದ್ದ ಜಾನಿ ಬೈರ್‌ಸ್ಟೋವ್‌ಗೆ ಡಿಕ್ಕಿ ಹೊಡೆದರು. ತಕ್ಷಣ ಆಗಮಿಸಿದ ಭದ್ರತಾ ಸಿಬ್ಬಂದಿ, ಜಾರ್ವೊರನ್ನು ಹೊರಗೆ ಕಳುಹಿಸುವಲ್ಲಿ ಸಫಲರಾದರು. ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟೆಸ್ಟ್ ಸರಣಿಗೆ ಸತತ ಮೂರನೇ ಬಾರಿ ಅಡ್ಡಿ ಮಾಡಿದ ಡೇನಿಯಲ್ ಜಾರ್ವಿಸ್‌ ಅವರನ್ನು ಬಂಧಿಸಲಾಗಿದೆ ಎಂದು ರಾಯಿಟರ್ಸ್‌ ವರದಿಯಿಂದ ತಿಳಿದುಬಂದಿದೆ. "ಸೆ. 3ರಂದು ದಿ ಓವಲ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದಿದ್ದ ಘಟನೆ ಹಾಗೂ ಹಲ್ಲೆ ಆರೋಪದ ಮೇರೆಗೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವರಿನ್ನೂ ಸೌಥ್‌ ಲಂಡನ್‌ ಪೊಲೀಸ್‌ ಸ್ಟೇಷನ್‌ನಲ್ಲಿಯೇ ಬಂಧನದಲ್ಲಿದ್ದಾರೆ," ಎಂದು ಇಲ್ಲಿನ ಪೊಲೀಸ್‌ ಅಧಿಕಾರಿ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪಿಚ್‌ ಬಳಿಕ ಬಂದು ಆಕ್ರಮಣಕಾರಿಯಾಗಿ ನಡೆದುಕೊಳ್ಳುವುದು 'ಸಂಪೂರ್ಣವಾಗಿ ಸ್ವೀಕಾರರ್ಹವಲ್ಲ' ಎಂದು ಇಂಗ್ಲೆಂಡ್‌ ಹಾಗೂ ವೇಲ್ಸ್ ಕ್ರಿಕೆಟ್‌ ಮಂಡಳಿ ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. "ಆಟಗಾರರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಪಾಯವನ್ನುಂಟು ಮಾಡುವ ಯಾವುದೇ ವರ್ತನೆಗಳನ್ನು ಇಸಿಬಿ ಹಾಗೂ ಆತಿಥೇಯ ಸ್ಥಳಗಳು ಪ್ರೋತ್ಸಾಹಿಸುವುದಿಲ್ಲ. ಅಲ್ಲದೆ, ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಅವರ ಭದ್ರತಾ ಕಾರ್ಯಾಚರಣೆಯನ್ನು ಹೆಚ್ಚಿಸಲು ಇಸಿಬಿ ನಮ್ಮ ಎಲ್ಲಾ ಸ್ಥಳಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ," ಎಂದು ರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಹೇಳಿದೆ. ಅಂದಹಾಗೆ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ವಿಕೆಟ್‌ ನಷ್ಟವಿಲ್ಲದೆ 43 ರನ್‌ ಗಳಿಸಿದ್ದು, ಇನ್ನೂ56 ರನ್‌ ಹಿನ್ನಡೆಯಲ್ಲಿದೆ. ಆರಂಭಿಕರಾದ ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌ ರಾಹುಲ್‌ ಮೂರನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್‌ ತಂಡ 290 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3h1J0rC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...