ಆರ್.ಶ್ರೀಧರ್ ಅನ್ನದಾತರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು ಎಂಬ ಮಹದೋದ್ದೇಶದೊಂದಿಗೆ ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯ ಸರಕಾರ ಆರಂಭಿಸಿರುವ 'ಒಂದು ಜಿಲ್ಲೆಒಂದು ಉತ್ಪನ್ನ' ಯೋಜನೆಗೆ ಜಿಲ್ಲೆಯಲ್ಲಿ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಯೋಜನೆ ಜಾರಿಗೆ ಬಂದ ಎರಡು ವರ್ಷಗಳಲ್ಲಿ ಈ ಯೋಜನೆಯಡಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಕೇವಲ 42, ಸಾಲ ಸೌಲಭ್ಯ ದೊರೆತಿರುವುದು ಕೇವಲ ಒಬ್ಬರಿಗಷ್ಟೇ. 3 ಸಾವಿರ ಬೆಳೆಗಾರರು: ಜಿಲ್ಲೆಯಲ್ಲಿ ಒಟ್ಟು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಸುಮಾರು 3 ಸಾವಿರ ಮಂದಿ ತೆಂಗು ಬೆಳೆಯನ್ನೇ ಪ್ರಧಾನವಾಗಿ ಬೆಳೆಯುತ್ತಿದ್ದಾರೆ. ಇಂತಹವರಿಗಾಗಿಯೇ ಯೋಜನೆ ಜಾರಿಗೊಂಡಿದ್ದರೂ, ಇದಕ್ಕೆ ಆಸಕ್ತಿ ತೋರುವವರೆ ಇಲ್ಲದಿರುವುದು ವಿರ್ಪಯಾಸ. ಹಣ್ಣು ತರಕಾರಿಗೆ ಬೇಕಿತ್ತು: ಹಣ್ಣು ಮತ್ತು ತರಕಾರಿಯಂತಹ ಆಯಾ ಜಿಲ್ಲೆಯ ಪ್ರಮುಖ ಬೆಳೆಗಳನ್ನು ಗುರುತಿಸಿ ಅವುಗಳಿಗೆ ಪ್ರೋತ್ಸಾಹಿಸುವ ಸಂಸ್ಕರಿತ ಘಟಕಗಳನ್ನು ಸ್ಥಾಪಿಸಬೇಕು, ಆಯಾ ಜಿಲ್ಲೆಯಲ್ಲೇ ಬೆಳೆಗೆ ಮಾರುಕಟ್ಟೆ ಒದಗಿಸಬೇಕೆಂಬ ಉದ್ದೇಶದಿಂದ ಶುರುವಾಗಿರುವ ಈ ಯೋಜನೆಗೆ ಜಿಲ್ಲೆಯಲ್ಲಿ ತೆಂಗು ಬೆಳೆ ಆಯ್ಕೆ ಮಾಡಿಕೊಳ್ಳಲಾಗಿದೆ. 2020-21ನೇ ಸಾಲಿನಲ್ಲಿ 16 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಒಂದು ಅರ್ಜಿಯನ್ನು ಇಲಾಖೆ ತಿರಸ್ಕರಿಸಿದೆ. ಸಾಲ ಸೌಲಭ್ಯಕ್ಕಾಗಿ 15 ಅರ್ಜಿಗಳನ್ನು ಕೃಷಿ ಇಲಾಖೆಯು ಬ್ಯಾಂಕ್ಗೆ ಸಲ್ಲಿಸಿದೆ. ಇದರಲ್ಲಿ ಒಂದು ಅರ್ಜಿಗೆ ಮಾತ್ರವೇ ಸಾಲಸೌಲಭ್ಯ ದೊರಕಿದೆ. 2021-22ನೇ ಸಾಲಿಗೆ 160 ಅರ್ಜಿಗಳ ಗುರಿ ಇದ್ದರೆ, ಕೇವಲ 26 ಅರ್ಜಿಗಳು ಸಲ್ಲಿಕೆಯಾಗಿವೆ. ಜಿಲ್ಲಾ ಮಟ್ಟದಲ್ಲಿಇಷ್ಟು ಅರ್ಜಿಗಳು ಆಯ್ಕೆಯಾಗಿದ್ದರೂ, ಸಾಲ ದೊರೆಯುವುದು ಎಷ್ಟು ಮಂದಿಗೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. 10 ಲಕ್ಷದ ವರೆಗೂ ಸಾಲ ಸೌಲಭ್ಯ: ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಯಲ್ಲಿ ಆಯ್ಕೆಯಾಗಿರುವ ತೆಂಗು ಬೆಳೆ ಮೂಲಕ ಚಾಕೊಲೇಟ್, ಐಸ್ ಕ್ರೀಮ್ , ಬಿಸ್ಕೆಟ್, ನೀರಾ, ಕೊಬ್ಬರಿ ಎಣ್ಣೆ, ಕೊಬ್ಬರಿ ಪೌಡರ್ ಸೇರಿದಂತೆ 30 ರೀತಿಯ ತೆಂಗು ಉತ್ಪನ್ನಗಳ ಸಂಸ್ಕರಣಾ ಘಟಕ ತೆರೆಯಬಹುದು. ಇದಕ್ಕಾಗಿ ಶೇ.35ರಷ್ಟು ಸಬ್ಸಿಡಿ ದರದಲ್ಲಿ ಗರಿಷ್ಟ 10 ಲಕ್ಷ ದವರೆಗು ಸಾಲ ದೊರೆಯುತ್ತದೆ. ಆದರೆ, ತೆಂಗು ಬೆಳೆಗಾರರಿಗೆ ಈ ಬಗ್ಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಆನ್ಲೈನ್ ಮೂಲಕ ಇಲ್ಲವೇ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಮೂಲಕ ಅರ್ಜಿ ಸಲ್ಲಿಸಬಹುದು. ಜಿಲ್ಲಾ ಸಮಿತಿ ಮೂಲಕ ಬ್ಯಾಂಕ್ಗಳಿಗೆ ಸಾಲದ ಶಿಫಾರಸು ತಲುಪಲಿದೆ. ಆದರೆ, ಕೃಷಿ ಇಲಾಖೆ ಕೇವಲ ಬ್ಯಾಂಕ್ಗಳಿಗೆ ಶಿಫಾರಸ್ಸು ಮಾಡುವ ಅಧಿಕಾರವನ್ನಷ್ಟೇ ಹೊಂದಿದೆ. ಇದರಲ್ಲಿ ಬ್ಯಾಂಕ್ಗಳು ಸಾಲ ನೀಡಲು ನಿರಾಕರಿಸಲು ಬಹುದು. ಹೀಗಾಗಿ, ಬೆಳೆಗಾರರು ಅರ್ಜಿ ಸಲ್ಲಿಕೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಬಹುದು. ಇದೊಂದು ಕಾರಣ: ಈ ಯೋಜನೆಯಡಿ ಗರಿಷ್ಠ ಸಿಗುವ ಅನುದಾನ 10 ಲಕ್ಷ ರೂ. ಒಬ್ಬ ಫಲಾನುಭವಿಗೆ ಶೇ.35ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. 10 ಲಕ್ಷಕ್ಕೆ 3.5 ಲಕ್ಷ ಸಹಾಯಧನ ಸಿಗಲಿದೆ. ಹಾಗಾದರೆ, ರೈತರು 10ಲಕ್ಷದ ಪ್ರಾಜೆಕ್ಟ್ಗೆ 6.5 ಲಕ್ಷ ಹಣ ಬಂಡವಾಳ ಹೂಡಬೇಕು. ಬ್ಯಾಂಕ್ನಿಂದ ಸಾಲ ಸಿಗುತ್ತಿದೆಯಾದರೂ ಅದಕ್ಕೆ ರೈತನೇ ಹೊಣೆಗಾರನಾಗಬೇಕಾಗುತ್ತದೆ. ಸಂಸ್ಕರಣ ಘಟಕದಿಂದ ಬಂದ ಉತ್ಪನ್ನವನ್ನು ಮಾರಾಟ ಮಾಡುವುದು ಹೇಗೆ? ಪ್ರತಿಷ್ಠಿತ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಬೇಕು. ಆದರೆ, ಆ ಕಂಪನಿಗಳ ಜತೆ ಒಪ್ಪಂದ ಮಾಡಿಸುವವರು ಯಾರು ಎನ್ನುವುದು ಸಹ ರೈತರ ಚಿಂತೆಯಾಗಿದೆ. ಒಂದು ಜಿಲ್ಲೆ-ಒಂದು ಉತ್ಪನ್ನ- ತೆಂಗು ಬೆಳೆ
- ತೆಂಗು ಬೆಳೆಯುವ ಪ್ರದೇಶ-20 ಸಾವಿರ ಹೆಕ್ಟೇರ್
- ತೆಂಗು ಬೆಳೆಗಾರರು-3 ಸಾವಿರ
- 2020-21ನೇ ಸಾಲಿಗೆ ಅರ್ಜಿ ಸಲ್ಲಿಕೆ- 16
- ಸಾಲ ಪಡೆದ ಅರ್ಜಿ- 1
- 2021-22 ಸಾಲಿಗೆ ಗುರಿ-160
- ಅರ್ಜಿ ಸಲ್ಲಿಕೆ- 26
from India & World News in Kannada | VK Polls https://ift.tt/3xnvfbV