![](https://vijaykarnataka.com/photo/81342810/photo-81342810.jpg)
ಮೈಸೂರು: ಕೋಮು ಸೌಹಾರ್ದಕ್ಕೆ ಪ್ರತೀಕವಾದ ಹಾಗೂ ಜಮಾಲ್ ಬೀಬಿ ಉರುಸ್ಗೆ ಸಕಲ ಸಿದ್ಧತೆ ನಡೆದಿದ್ದು ಮಾ.5ರಂದು ಚಾಲನೆ ದೊರೆಯಲಿದೆ. ಹಿಂದು ಮುಸ್ಲಿಂ ಭಾವೈಕ್ಯತೆಗೆ ಪ್ರತೀಕವಾದ ಈ ಉತ್ಸವ ಕೋಮು ಸೌಹಾರ್ದಕ್ಕೆ ಪ್ರತೀಕವಾಗಿದ್ದು ಎರಡು ದಶಕಗಳಿಂದ ಗ್ರಾಮದಲ್ಲಿ ಸದ್ಭಾವನಾ ಜಾತ್ರೆಯಾಗಿ ಹೊರ ಹೊಮ್ಮಿದೆ. ಆಂಜನೇಯಸ್ವಾಮಿ ಹಾಗೂ ಜಮಾಲ್ ಬೀಬಿ ದರ್ಗಾ ಗ್ರಾಮದ ಒಂದೇ ಪ್ರದೇಶದಲ್ಲಿವೆ. ಯುವಸಮುದಾಯದಲ್ಲಿ ಅನ್ಯೂನ್ಯತೆ ಪ್ರೇರಣೆಯಾಗಿದ್ದು, ಸದ್ಭಾವನಾ ಜಾತ್ರೆಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರವಹಿಸುವ ಮನಸ್ಥಿತಿ ಹುಟ್ಟುಹಾಕಿರುವುದು ವಿಶೇಷವಾಗಿದೆ. ರತ್ನಾಪುರಿ ದರ್ಗಾ ಜಾತ್ರೆ ಎಂದೇ ಹೆಸರುವಾಸಿಯಾದ ಈ ಉತ್ಸವಕ್ಕೆ ರೈತರು ಜಾನುವಾರುಗಳನ್ನು ತರುವುದು, ಖರೀದಿ ಮಾಡುವುದರಿಂದ ಈ ಸಮಯದಲ್ಲಿ ಕೋಟಿ ಲೆಕ್ಕದಲ್ಲಿ ವಹಿವಾಟು ನಡೆಯುತ್ತದೆ. ಜಾನುವಾರುಗಳನ್ನು ಒಂದೆಡೆ ಸೇರಿಸಿ ಈ ವಹಿವಾಟು ನಡೆಸುವುದು ಉತ್ಸವ ಪ್ರಸಿದ್ಧಿಗೆ ಬರಲು ಒಂದು ಪ್ರಮುಖ ಕಾರಣವಾಗಿದೆ. ವಿವಿಧ ಭಾಗಗಳಿಂದ 10 –15 ದಿನಗಳ ಮುಂಚಿತವಾಗಿ ರಾಸುಗಳನ್ನು ತಂದು ಜಾತ್ರೆಯಲ್ಲಿ ವ್ಯಾಪಾರ ನಡೆಸುತ್ತಾರೆ. ರಾಸುಗಳನ್ನು ಖರೀದಿಸಿದ ರೈತರು ಜಮಾಲ್ ಬೀಬಿ ದರ್ಗಾದಲ್ಲಿ ಗಂಧೋತ್ಸವ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ಬೂಂದಿ ಖರೀದಿಸುವುದು ವಾಡಿಕೆ ಎನ್ನುತ್ತಾರೆ ಜಾತ್ರಾ ಸಮಿತಿಯ ಅಜ್ಗರ್ ಪಾಷಾ. ಮಾ.5ಕ್ಕೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹೋಮ ಹವನದೊಂದಿಗೆ ಆರಂಭವಾಗುವ ಜಾತ್ರೆ, ಮಾ.7ರಂದು ಜಮಾಲ್ ಬೀಬಿ ಉರುಸ್ನ ಗಂಧೋತ್ಸವದೊಂದಿಗೆ ಅಂತ್ಯವಾಗಲಿದೆ. ಈ ಬಾರಿ ಕೋವಿಡ್ ಇರುವುದರಿಂದ ಜಾತ್ರೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ಕಟ್ಟು ನಿಟ್ಟಿನ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ಸಂಬಂಧ ತಾಲ್ಲೂಕು ಆಡಳಿತ ಸೂಚನೆ ನೀಡಿದ್ದು ಒಂದು ವಾರ ನಡೆಯಬೇಕಾಗಿದ್ದ ಜಾತ್ರೆಯನ್ನು ಮೂರು ದಿನಕ್ಕೆ ಇಳಿಸಲಾಗಿದೆ ಎಂದು ಸಮಿತಿ ಸದಸ್ಯರು ತಿಳಿಸಿದರು. ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕಿಡಿಗೇಡಿಗಳು ಮೂಳೆ ತುಂಡು ಹಾಕಿ ಅಪವಿತ್ರ ಮಾಡಿ ಸದ್ಭಾವನೆಗೆ ಪ್ರತೀಕವಾದ ಗ್ರಾಮಕ್ಕೆ ಕಳಂಕ ಹಚ್ಚಿದ್ದಾರೆ. ಈ ಸಂಬಂಧ ಪೊಲೀಸರು ಈಗಾಗಲೇ ತಂಡ ರಚಿಸಿ ಕಿಡಿಗೇಡಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಜ್ಗರ್ ಪಾಷಾ ತಿಳಿಸಿದರು. ‘ಹಿಂದು ಮುಸ್ಲಿಂ ಇತರರಿಗೆ ಮಾದರಿ’ ಜಿಲ್ಲೆಯಲ್ಲಿ ಹಿಂದು ಮುಸ್ಲಿಂ ಸಮುದಾಯದವರು ಒಟ್ಟಾಗಿ ಆಂಜನೇಯಸ್ವಾಮಿ ಉತ್ಸವ ಹಾಗೂ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಪರಸ್ಪರ ಹೊಂದಾಣಿಕೆ ಜಾತ್ರೆಗೆ ಸೀಮಿತಗೊಳ್ಳದೆ ದೈನಂದಿನ ಬದುಕಿನಲ್ಲೂ ಎರಡೂ ಸಮುದಾಯ ಪರಸ್ಪರ ಹೊಂದಾಣಿಕೆ ಜೀವನ ನಡೆಸಿ ಸೌಹಾರ್ದತೆ ಕಾಪಾಡಿಕೊಂಡು ಬರುತ್ತಿದ್ದಾರೆ. ಇಬ್ಬರ ಹೊಂದಾಣಿಕೆಗೆ ಈ ಜಾತ್ರೆಯೇ ಆಧಾರವಾಗಿದೆ.
from India & World News in Kannada | VK Polls https://ift.tt/3uRfTwx