
ಬೆಂಗಳೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಬೆಂಗಳೂರಿನಲ್ಲಿ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಬೆಂಗಳೂರಿನ ಗಡಿ ಭಾಗಗಳಲ್ಲಿ ಅಪಾರ ಸಂಖ್ಯೆಯಲ್ಲಿ ರೈತರು ಜಮಾವಣೆಗೊಳ್ಳುತ್ತಿದ್ದು ರಾಜಧಾನಿಗೆ ಕೆಲವೇ ಕ್ಷಣಗಳಲ್ಲಿ ಲಗ್ಗೆ ಇಡಲಿದ್ದಾರೆ. ರೈತರ ಟ್ರ್ಯಾಕ್ಟರ್ ಪರೇಡ್ಗೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ. ಟ್ರ್ಯಾಕ್ಟರ್ ಹೊರತಾಗಿ ಇತರ ವಾಹನಗಳಲ್ಲಿ ಬಂದು ಪ್ರತಿಭಟನೆಯನ್ನು ನಡೆಸಬಹುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ್ದಾರೆ. ಆದರೆ ರೈತರು ಇದಕ್ಕೆ ಒಪ್ಪದೆ ಟ್ರ್ಯಾಕ್ಟರ್ ಮೂಲಕವೇ ರಾಜ್ಯ ರಾಜ್ಯಧಾನಿಗೆ ಲಗ್ಗೆ ಇಡಲು ಪ್ಲ್ಯಾನ್ ರೂಪಿಸುತ್ತಿದ್ದಾರೆ. ಈಗಾಗಲೇ ಮಾದಾವರ ಜಂಕ್ಷನ್ ಬಳಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಟ್ರ್ಯಾಕ್ಟರ್ನಲ್ಲಿ ಸಾಂಕೇತಿಕವಾಗಿ ರೈತರು ಕುಳಿತುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೇನು ಗಣರಾಜ್ಯೋತ್ಸವದ ಅಂಗವಾಗಿ ನಡೆಯಲಿರುವ ಸರ್ಕಾರದ ಅಧಿಕೃತ ಕಾರ್ಯಕ್ರಮ ಹಾಗೂ ಧ್ವಜಾರೋಹಣದ ಮುಗಿದ ಬೆನ್ನಲ್ಲೇ ರೈತರು ಒಟ್ಟಾಗಿ ಬೆಂಗಳೂರು ನಗರಕ್ಕೆ ಆಗಮಿಸಲಿದ್ದಾರೆ. ಬೆಂಗಳೂರಿನ ಗಡಿಭಾಗಗಳಾದ ಕೋಲಾರ ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ ಭಾಗಗಳಲ್ಲಿ ರೈತರು ಜಮಾವಣೆಗೊಳ್ಳುತ್ತಿದ್ದಾರೆ. ಟ್ರ್ಯಾಕ್ಟರ್ಗೆ ನಿಷೇಧ ಇದ್ದರೂ ಪೊಲೀಸರಿಗೆ ಸಡ್ಡು ಹೊಡೆಯಲು ರೈತ ಸಂಘಟನೆಗಳು ಮುಂದಾಗಿದ್ದು ಟ್ರ್ಯಾಕ್ಟರ್ ಜೊತೆಗೆ ಪರೇಡ್ ನಡೆಸುವ ಸಿದ್ದತೆಯಲ್ಲಿದ್ದಾರೆ. ಇನ್ನು ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸುಮಾರು 2000 ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.
from India & World News in Kannada | VK Polls https://ift.tt/3ogaWsp