ಬೆಂಗಳೂರು ವಿವಿಯಲ್ಲಿ ಅಂಕ ತಿರುಚಿದ ಹಗರಣ: ಸಿಐಡಿ ತನಿಖೆಗೆ ಕೋರಿ ಸರ್ಕಾರಕ್ಕೆ ಶಿಫಾರಸು!

ಬೆಂಗಳೂರು: ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೇಲಿನ ಅಂಕ ತಿರುಚಿರುವ ಹಗರಣ ಕುರಿತು ನಡೆಸುವಂತೆ ಕೋರಿ ಸರಕಾರವನ್ನು ಕೋರಲು ನಿರ್ಧರಿಸಿದೆ. ಅಲ್ಲದೆ, ವಿಶ್ವವಿದ್ಯಾಲಯದ ಲೆಕ್ಕಪರಿಶೋಧನೆಗೂ ಸರಕಾರಕ್ಕೆ ಮನವಿ ಸಲ್ಲಿಸಲಿದೆ ''ಜ.5ರಂದು ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯ ನಿರ್ಣಯದ ಅನ್ವಯ 'ಅಂಕ ತಿರುಚಿರುವ ಹಗರಣ'ವನ್ನು ಸರಕಾರದ ಮೂಲಕ ಸಿಐಡಿಗೆ ವಹಿಸಲಾಗುತ್ತಿದೆ. ಕೇವಲ 2020ರ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ನಡೆದ ಪದವಿ ಪರೀಕ್ಷೆಗಳಲ್ಲಿ ನಡೆದಿರುವ ಅಂಕ ತಿರುಚಿರುವ ಪ್ರಕರಣಗಳಷ್ಟೇ ಅಲ್ಲದೇ, ಈ ಹಿಂದೆ ಕೂಡ ಇಂತಹ ಕೆಲವು ಪ್ರಕರಣಗಳು ನಡೆದಿವೆ. ಹಾಗಾಗಿ, ಎಲ್ಲಾ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆಗೆ ಮನವಿ ಮಾಡಲಾಗುವುದು,'' ಎಂದು ಕುಲಸಚಿವ (ಮೌಲ್ಯಮಾಪನ) ಡಾ.ಜೆ.ಟಿ.ದೇವರಾಜು 'ವಿಕ'ಗೆ ತಿಳಿಸಿದರು. ''ಇದೇ ವೇಳೆ ವಿಶ್ವವಿದ್ಯಾಲಯದ ಲೆಕ್ಕಪರಿಶೋಧನೆಗೆ ಸರಕಾರಕ್ಕೆ ಮನವಿ ಮಾಡಲಾಗುವುದು. ಸುಮಾರು ಒಂದೂವರೆ ತಿಂಗಳ ಒಳಗೆ ಲೆಕ್ಕಪರಿಶೋಧನೆ ಪೂರ್ಣಗೊಂಡರೆ, ಮುಂದಿನ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗಲಿದೆ,'' ಎಂದು ಹೇಳಿದರು. ಏನಿದು ಪ್ರಕರಣ?ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 2020ರ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ನಡೆದ ಪದವಿ ಪರೀಕ್ಷೆಗಳಲ್ಲಿ 804 ಉತ್ತರ ಪತ್ರಿಕೆಗಳಲ್ಲಿನ ಅಂಕಗಳನ್ನು ತಿರುಚಲಾಗಿದೆ. ಉತ್ತರ ಪತ್ರಿಕೆಗಳನ್ನು ಸ್ಕ್ಯಾ‌ನ್‌ ಮಾಡಿಕೊಡುವ ಗುತ್ತಿಗೆ ಪಡೆದಿದ್ದ ವಿಶ್ವವಿದ್ಯಾಲಯದ ಅಧಿಕೃತ ಏಜೆನ್ಸಿ ಟಿಆರ್‌ಎಸ್‌ ಫಾರಂ ಆ್ಯಂಡ್‌ ಸರ್ವಿಸಸ್‌ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಕುಲಸಚಿವರು ಜ್ಞಾನಭಾರತಿ ಪೊಲೀಸ್‌ ಠಾಣೆಗೆ ಜ.1ರಂದು ದೂರು ನೀಡಿದ್ದರು. ಮೌಲ್ಯಮಾಪಕರಿಗೆ ಉತ್ತರಪತ್ರಿಕೆಗಳ ವಿದ್ಯಾರ್ಥಿಗಳ ಹೆಸರು, ನೋಂದಣಿ ಸಂಖ್ಯೆ ತಿಳಿಯದಂತೆ ಮಾಡುವ ಸಲುವಾಗಿ, ಉತ್ತರಪತ್ರಿಕೆಗಳ ಮುಖಪುಟವನ್ನು ಬೇರ್ಪಡಿಸಿ, ಡಮ್ಮಿ ಸಂಖ್ಯೆ ನೀಡಲು ಮತ್ತು ಮೌಲ್ಯಮಾಪನದ ನಂತರ ಡಮ್ಮಿ ಸಂಖ್ಯೆ ಮತ್ತು ನೋಂದಣಿ ಸಂಖ್ಯೆ ತಾಳೆ ಮಾಡಲು ಟಿಆರ್‌ಎಸ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಏಜೆನ್ಸಿಯವರು, ಮೂಲ ನೋಂದಣಿ ಸಂಖ್ಯೆ ಮತ್ತು ಡಮ್ಮಿ ಸಂಖ್ಯೆಯನ್ನು ಒಂದೆಡೆ ದಾಖಲು ಮಾಡಿಕೊಂಡು, ಒಎಂಆರ್‌ ಪುಟದ ಮೇಲ್ಭಾಗ ಬೇರ್ಪಡಿಸಿ, ಡಮ್ಮಿ ಸಂಖ್ಯೆ ಹಾಕಿ ಮೌಲ್ಯಮಾಪಕರಿಗೆ ನೀಡಿದ್ದರು. ಮೌಲ್ಯಮಾಪನದ ನಂತರ ಡಮ್ಮಿ ನಂಬರ್‌ನಿಂದ ನೋಂದಣಿ ಸಂಖ್ಯೆಗೆ ಪರಿವರ್ತಿಸುವ ಏಜೆನ್ಸಿ, ಸೆಮಿಸ್ಟರ್‌ವಾರು ಫಲಿತಾಂಶ ಸಿದ್ಧಪಡಿಸಿ ಇ-ಮೇಲ್‌ ಅಥವಾ ಸಿಡಿಯನ್ನು ವಿಶ್ವವಿದ್ಯಾಲಯದ ಕಂಪ್ಯೂಟರ್‌ ವಿಭಾಗಕ್ಕೆ ಕಳುಹಿಸಲಾಗುತ್ತದೆ. ಈ ಫೈಲ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಡೇಟಾ ಬೇಸ್‌ ಸರ್ವರ್‌ಗೆ ಫಲಿತಾಂಶದ ಅಂಕಗಳನ್ನು ಅಪ್‌ಲೋಡ್‌ ಮಾಡುವ ವೇಳೆ ವಿಶ್ವವಿದ್ಯಾಲಯದ ಪ್ರೋಗ್ರಾಮರ್‌ಗಳು ಮತ್ತು ಟಿಆರ್‌ಎಸ್‌ ಕಂಪನಿಯ ಕೆಲವರು ಅಂಕಗಳನ್ನು ತಿರುಚಿದ್ದಾರೆ ಎನ್ನಲಾಗಿದೆ. ಈ ಸಂಬಂಧ, ಟಿಆರ್‌ಎಸ್‌ ಸಂಸ್ಥೆ ಸೇರಿದಂತೆ ವಿಶ್ವವಿದ್ಯಾಲಯದ ಕಂಪ್ಯೂಟರ್‌ ವಿಭಾಗದ ಪ್ರೋಗ್ರಾಮರ್‌ಗಳು, ಶಿಕ್ಷಣಾಧಿಕಾರಿಗಳು ಮತ್ತು ಕೆಲವು ವಿದ್ಯಾರ್ಥಿಗಳು, ಮಧ್ಯವರ್ತಿಗಳ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ.


from India & World News in Kannada | VK Polls https://ift.tt/2XHuFGQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...