ಶಿವಮೊಗ್ಗ: ಕಳೆದ ಜುಲೈನಲ್ಲಿ ಹೊರ ಬಿದ್ದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮರುಎಣಿಕೆ ವ್ಯತ್ಯಾಸದಿಂದ ಅಂಕ ಕಡಿತಗೊಂಡಿದ್ದ ವಿದ್ಯಾರ್ಥಿನಿ ಧಾರಿಣಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ. 96 ಅಂಕ ಪಡೆದ ಎಚ್.ಆರ್. ಧಾರಿಣಿ ಅವರಿಗೆ ಲೆಕ್ಕಶಾಸ್ತ್ರದಲ್ಲಿ ಎಣಿಕೆ ತಪ್ಪಾಗಿರುವುದನ್ನು ಸರಿಪಡಿಸುವಂತೆ ರಾಜ್ಯ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಪಿಯು ಬೋರ್ಡ್ ಎಣಿಕೆ ಸರಿಪಡಿಸಿ ಲೆಕ್ಕಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ನೀಡಿದೆ. ಕಳೆದ ಮಾರ್ಚ್ನಲ್ಲಿ ನಡೆದ ಪರೀಕ್ಷೆಯಲ್ಲಿ ಲೆಕ್ಕಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ನಿರೀಕ್ಷಿಸಿ 99 ಅಂಕ ಪಡೆದಿದ್ದ ಧಾರಿಣಿ ಒಂದು ಅಂಕ ಎಲ್ಲಿ ತಪ್ಪಾಗಿದೆ ನೋಡಬೇಕೆಂಬ ಕಾರಣಕ್ಕೆ ಹಣ ಕಟ್ಟಿ ಉತ್ತರ ಪತ್ರಿಕೆ ತರಿಸಿದ್ದರು. ಹೆಚ್ಚುವರಿ ಪ್ರಶ್ನೆಗಳಿಗೆ ಉತ್ತರ ಬರೆದಲ್ಲಿ ಹೆಚ್ಚು ಅಂಕ ಬಂದ ಉತ್ತರವನ್ನು ಪರಿಗಣಿಸಬೇಕೆಂಬ ನಿಯಮಕ್ಕೆ ಬದಲಾಗಿ ಕಡಿಮೆ ಅಂಕವನ್ನು ಪರಿಗಣಿಸಿದ ಪರಿಣಾಮ ನೂರರ ಬದಲು 99 ಅಂಕ ಬಂದಿತ್ತು. ಇದನ್ನು ಉಲ್ಲೇಖಿಸಿ ಸರಿಪಡಿಸುವಂತೆ ಕಾಲೇಜಿನ ಮೂಲಕವೇ ಪಿಯು ಪರೀಕ್ಷಾ ಮಂಡಳಿಗೆ ಮನವಿ ಮಾಡಲಾಗಿತ್ತು. ಆದರೆ, ವಿಪರ್ಯಾಸವೆಂದರೆ ಮರುಎಣಿಕೆ ನಂತರ 100ರ ಬದಲು 88 ಅಂಕ ಬಂದಿತ್ತು. ಇದನ್ನು ನೋಡಿದಾಗ ಒಂದು ಉತ್ತರವನ್ನೇ ಪರಿಗಣಿಸದ ಕಾರಣ ಮತ್ತೊಮ್ಮೆ ಮನವಿ ಮಾಡಲಾಗಿತ್ತು. ಆಗಲೂ 88 ಅಂಕವೇ ಬಂತು. ಈ ಕುರಿತು ಕೇಳಿದಾಗ ಎರಡನೇ ಬಾರಿ ಮೂರು ಜನ ತಜ್ಞರು ಎಣಿಕೆ ಮಾಡಿದ್ದು ಅದನ್ನು ಬದಲಾಯಿಸುವಂತಿಲ್ಲ ಎಂದು ತಿಳಿಸಿದ್ದರು. ತೀವ್ರ ಕೋವಿಡ್ ಆತಂಕದ ಆ ದಿನಗಳಲ್ಲೂ ಖುದ್ದು ವಿದ್ಯಾರ್ಥಿನಿಯೇ ಬೆಂಗಳೂರಿಗೆ ಹೋಗಿ ಮಂಡಳಿಯಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿದರೂ, ಪ್ರಯೋಜನ ಆಗಿರಲಿಲ್ಲ. ಎರಡನೇ ಬಾರಿ ಎಣಿಕೆ ಮಾಡಿದ ನಂತರ ಮತ್ತೆ ಅಂಕ ಬದಲಾಯಿಸಲು ಕಾನೂನಿನಲ್ಲಿ ಅವಕಾಶ ಇಲ್ಲವೆಂದು ಅಲ್ಲಿನ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಇದನ್ನು ಪ್ರಶ್ನಿಸಿ ಧಾರಿಣಿಯ ತಂದೆ ಹನಿಯ ರವಿ ಅವರು ರಾಜ್ಯ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಹೈಕೋರ್ಟ್ ಪೂರ್ಣ ಪರಿಶೀಲನೆಯ ನಂತರ ಎರಡು ವಾರದೊಳಗೆ ಸರಿಪಡಿಸುವಂತೆ ಆದೇಶಿಸಿ ತಪ್ಪಿದ್ದಲ್ಲಿ ನಿಗದಿತ ದಿನದ ನಂತರ ವಾರಕ್ಕೆ 2000 ರೂ. ನಂತೆ ಅರ್ಜಿದಾರರಿಗೆ ದಂಡ ನೀಡಬೇಕೆಂದು ಆದೇಶಿಸಿದೆ. ಈ ಪ್ರಕಾರ ಪಿಯು ಬೋರ್ಡ್ ಅಂಕವನ್ನು ಸರಿಪಡಿಸಿ ಧಾರಿಣಿಗೆ ಲೆಕ್ಕಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ನೀಡಿ ಹೊಸ ಅಂಕಪಟ್ಟಿ ನೀಡಲು ಅಣಿಯಾಗಿದೆ. ಅರ್ಜಿದಾರರ ಪರವಾಗಿ ಬಿ.ಎಸ್.ಪ್ರಸಾದ್ ಹನಿಯ ವಾದಿಸಿದ್ದರು. ಹೈಕೋರ್ಟ್ನಿಂದ ನ್ಯಾಯ ದೊರೆತಿರುವುದು ಸಂತಸ ತಂದಿದೆ. ನನಗೆ ಅಂಕ ವ್ಯತ್ಯಾಸ ಆಗಿದ್ದಕ್ಕಿಂತಲೂ ಇಂತಹದ್ದೇ ಅದೆಷ್ಟೋ ತಪ್ಪುಗಳು ನಡೆದು ಹೋರಾಟ ಮಾಡಲು ಸಾಧ್ಯವಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ನ್ಯಾಯ ಸಿಗುವಂತಾಗಬೇಕು.-ಎಚ್.ಆರ್.ಧಾರಿಣಿ, ವಿದ್ಯಾರ್ಥಿನಿ ಒಂದು ಅಂಕ ಹೆಚ್ಚು ಕಡಿಮೆಯಾದರೆ ವಿದ್ಯಾಭ್ಯಾಸಕ್ಕೆ ಭಾರಿ ವ್ಯತ್ಯಾಸವೇನೂ ಆಗದು. ಆದರೆ ತಪ್ಪನ್ನು ಸರಿಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲಎಂಬ ಅಧಿಕಾರಿಗಳ ಮಾತಿಗೋಸ್ಕರ ನ್ಯಾಯಾಲಯಕ್ಕೆ ಹೋಗಬೇಕಾಯಿತು. ಕೆಲವೇ ಮೌಲ್ಯಮಾಪಕರ ಬೇಜವಾಬ್ದಾರಿಯಿಂದ ಎಷ್ಟೋ ಪ್ರತಿಭಾವಂತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಸರಕಾರ ಈಗಲಾದರೂ ಈ ವಿಷಯದ ಕುರಿತು ಗಂಭೀರ ಚಿಂತನೆ ನಡೆಸಬೇಕು.- ಹನಿಯ ರವಿ, ಅರ್ಜಿದಾರ.
from India & World News in Kannada | VK Polls https://ift.tt/3a4AqE3