ಸುಬ್ರಹ್ಮಣ್ಯ: ಕುಕ್ಕೆ ಶ್ರೀ ದೇವಸ್ಥಾನದಲ್ಲಿ ಸೆ.24ರಿಂದ ನಡೆಯಲಿದೆ. ಪ್ರತಿ ಪಾಳಿಯಲ್ಲಿ 75 ರಶೀದಿಗಳನ್ನು ನೀಡಲಾಗುವುದು. ಈ ರೀತಿ ಒಟ್ಟು ದಿನದಲ್ಲಿ 225 ರಶೀದಿ ನೀಡಲಾಗುವುದು. ಗುರುವಾರದಿಂದ ಸಂಜೆಯ ಆಶ್ಲೇಷ ಬಲಿ ಸೇವೆ ಆರಂಭವಾಗಲಿದೆ. ಷಷ್ಠಿ, ಆಶ್ಲೇಷ ನಕ್ಷತ್ರ ದಿನ, ಆದಿತ್ಯವಾರ, ಸಾರ್ವತ್ರಿಕ ಸರಕಾರಿ ರಜಾದಿನಗಳಲ್ಲಿ ಬೆಳಗ್ಗಿನ 2 ಪಾಳಿಯಲ್ಲಿ 100 ರಶೀದಿಯಂತೆ ಮೂರು ಪಾಳಿಯಲ್ಲಿ 300 ರಶೀದಿ ನೀಡಲಾಗುವುದು ಎಂದು ಶ್ರೀ ದೇವಳದ ಆಡಳಿತಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ತಿಳಿಸಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತ ಕಚೇರಿಯಲ್ಲಿ ಗುರುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀ ದೇವಳಕ್ಕೆ ದಿನವಾಹಿ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವುದರಿಂದ ಮತ್ತು ಪ್ರಮುಖ ಸೇವೆಗಳ ಸಂಖ್ಯೆ ಅಧಿಕ ಮಾಡಲು ಭಕ್ತರಿಂದ ಬೇಡಿಕೆ ಬರುತ್ತಿರುವುದರಿಂದ ಪ್ರಮುಖ ಸೇವೆಯಾದ ಆಶ್ಲೇಷ ಬಲಿಯನ್ನು ಮೂರು ಪಾಳಿಯಲ್ಲಿ ನಡೆಸಲಾಗುವುದು. ಬೆಳಗ್ಗೆ 7ರಿಂದ 8.30 ಹಾಗೂ 9ರಿಂದ 10.30ರ ತನಕ ಮತ್ತು ಸಂಜೆ 5ಗಂಟೆಯಿಂದ 6.30 ತನಕ ನಡೆಯಲಿದೆ. ಅಲ್ಲದೆ ಸುಮಾರು ಶೇ. 50ನಷ್ಟು ಆಶ್ಲೇಷ ಬಲಿ ಸೇವೆಯನ್ನು ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು. ಕುಕ್ಕೆ ದೇವಳಕ್ಕೆ ರಾಜ್ಯ ಸೇರಿದಂತೆ ದೇಶಾದ್ಯಂತದಿಂದ ಭಕ್ತರು ಸೇವೆಗೆ ಆಗಮಿಸುತ್ತಾರೆ. ಆದುದರಿಂದ ಭಕ್ತರ ಆರೋಗ್ಯ ಹಿತದೃಷ್ಠಿಯಿಂದ ಕಡಿಮೆ ಸೇವೆ ನಡೆಸಲು ಅವಕಾಶ ನೀಡಲಾಗಿದೆ. ಮುಜರಾಯಿ ಸಚಿವರು, ಮುಜರಾಯಿ ಆಯುಕ್ತರು, ಧಾರ್ಮಿಕ ಪರಿಷತ್ ಸದಸ್ಯರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆರಂಭದಲ್ಲಿ ಕಡಿಮೆ ಸೇವೆಗಳನ್ನು ಆರಂಭಿಸಿ ನಂತರ ಹಂತ ಹಂತವಾಗಿ ಸೇವೆಗಳನ್ನು ಅಧಿಕಗೊಳಿಸಲಾಗುವುದು. ಹಿಂದಿನಂತೆ ಅಧಿಕ ಸಂಖ್ಯೆಯ ಸೇವೆ ನಡೆಸಲು ಅವಕಾಶ ನೀಡಿದರೆ ಕೊರೊನಾ ಸೋಂಕು ಹರಡಿದರೆ ದೇವಳವನ್ನು ಮತ್ತೆ ಬಂದ್ ಮಾಡಬೇಕಾದ ಅನಿವಾರ್ಯತೆ ಬರಬಹುದು. ಈ ರೀತಿ ಸಂದರ್ಭ ಸೃಷ್ಠಿಯಾಗಬಾರದೆಂಬ ಮುಂಜಾಗೃತೆಗಾಗಿ ಕನಿಷ್ಠ ಸೇವೆ ಆರಂಭಿಸಲಾಗಿದೆ ಎಂದು ಆಡಳಿತಾಧಿಕಾರಿಗಳು ಹೇಳಿದರು. ಸರ್ಪಸಂಸ್ಕಾರ ಸೇವೆಯನ್ನು ಈಗಾಗಲೇ 3107 ಮಂದಿ ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಈ ಎಲ್ಲಾ ಭಕ್ತರಿಗೆ ಶ್ರೀ ದೇವಳದಿಂದ ಕರೆ ಮಾಡಿ ಅವರಿಗೆ ಸೇವೆ ನೆರವೇರಿಸಲು ಅನುಕೂಲವಿರುವ ದಿನಾಂಕವನ್ನು ತಿಳಿದುಕೊಳ್ಳಲಾಗುವುದು. ಆ ಬಳಿಕ ಪ್ರತಿದಿನ ನೀಡುವ 50 ರಶೀದಿಯಲ್ಲಿ ಉಳಿಕೆಯಾದ ಸೇವಾ ರಶೀದಿಗಳನ್ನು ಇತರ ಭಕ್ತರಿಗೆ ನೀಡಲಾಗುವುದು. ಈ ಮೂಲಕ ಇತರ ಭಕ್ತರಿಗೆ ಕೂಡಾ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಈ ಹಿಂದೆ ಬುಕ್ಕಿಂಗ್ ಮಾಡಿದ ಭಕ್ತರು ತಮ್ಮ ಸೇವೆಯ ದಿನಾಂಕ ಸೂಚಿಸಿದ ಬಳಿಕ ಈಗಾಗಲೇ ತಡೆ ಹಿಡಿಯಲಾಗಿರುವ ಸರ್ಪಸಂಸ್ಕಾರ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಪುನರಾರಂಭಿಸಲಾಗುವುದು. ಅಲ್ಲದೆ ಹಂತ ಹಂತವಾಗಿ ಸರ್ಪಸಂಸ್ಕಾರ ಸೇವೆಯ ಸಂಖ್ಯೆಯನ್ನು ಅಧಿಕಗೊಳಿಸಲು ಚಿಂತನೆ ನಡೆಸಲಾಗುವುದು. ಶ್ರೀ ದೇವಳದಲ್ಲಿ ಭೋಜನ ಪ್ರಸಾದವನ್ನು ಬಫೆ ಮಾದರಿಯಲ್ಲಿ ಸಾಮಾಜಿಕ ಅಂತರದೊಂದಿಗೆ ಭಕ್ತರಿಗೆ ನೀಡಲಾಗುತ್ತಿದೆ. ಈ ವ್ಯವಸ್ಥೆಯು ನಿಯಮಾನುಸಾರವಾಗಿ ಮುಂದುವರೆಯಲಿದೆ ಎಂದು ನುಡಿದರು. ಈ ಸಂದರ್ಭ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್ ಉಪಸ್ಥಿತರಿದ್ದರು.
from India & World News in Kannada | VK Polls https://ift.tt/2FZA3iO