ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸರಕಾರ ರಚನೆಗೆ ಕಾರಣರಾದ ಎಲ್ಲರಿಗೂ ಸಚಿವ ಸ್ಥಾನ ನೀಡುವಂತೆ ಪಟ್ಟು ಹಾಕಿರುವ 'ಮಿತ್ರಮಂಡಳಿ' ಸದಸ್ಯರೊಂದಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಶನಿವಾರ ಸಭೆ ನಡೆಸಲಿದ್ದಾರೆ. ಈ ವೇಳೆ ಸಂಧಾನ ಸೂತ್ರ ಸಿದ್ಧಪಡಿಸಿ ಬಿಕ್ಕಟ್ಟು ನಿವಾರಿಸುವುದು ಸಿಎಂ ಉದ್ದೇಶವಾಗಿದೆ. ಈ ಬಾರಿ ಸಂಪುಟ ವಿಸ್ತರಣೆ ಖಚಿತವಾದರೂ ಸೋತವರಿಗೆ ಮಂತ್ರಿ ಸ್ಥಾನ ನೀಡಲು ಸಾಧ್ಯವಾಗುತ್ತಿಲ್ಲ. ಗೆದ್ದವರಲ್ಲಿ11 ಮಂದಿ ಅರ್ಹರಲ್ಲಿ9 ಮಂದಿಗಷ್ಟೇ ಸಚಿವ ಸ್ಥಾನದ ಖಾತರಿಯಿದೆ. ಇನ್ನು ಈ ಸಂಖ್ಯೆಯನ್ನು 7ಕ್ಕೆ ತಗ್ಗಿಸಬೇಕು ಎಂಬ ಲೆಕ್ಕಾಚಾರವೂ ಇದೆ. ಆದರೆ, ಈ ಪ್ರಸ್ತಾಪ ಒಪ್ಪುವ ಸ್ಥಿತಿಯಲ್ಲಿಮಿತ್ರಮಂಡಳಿಯವರು ಇಲ್ಲ. ಉಪ ಚುನಾವಣೆಯಲ್ಲಿಗೆಲುವು ದಾಖಲಿಸಿರುವ 11 ಅರ್ಹರಿಗೂ ಸಚಿವ ಸ್ಥಾನ ನೀಡಬೇಕು. ಜತೆಗೆ ಸೋಲುಂಡಿರುವ ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್ ಹಾಗೂ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಆರ್. ಶಂಕರ್ ಅವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಮಿತ್ರಮಂಡಳಿಯವರು ಒತ್ತಡ ತಂತ್ರ ಮುಂದುವರಿಸಿದ್ದಾರೆ. ಆದರೆ, ಮೂಲ ಬಿಜೆಪಿಯಿಂದಲೂ 3-4 ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆಯಿದೆ. ಇದನ್ನೆಲ್ಲಇತ್ಯರ್ಥ ಪಡಿಸಿಕೊಳ್ಳಲು ಸಿಎಂ ಅವರು ಮಿತ್ರಮಂಡಳಿ ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ರಾಜೀ ಸಂಧಾನದ ತೀರ್ಮಾನ ಹೊರಹೊಮ್ಮುವ ನಿರೀಕ್ಷೆಯಿದೆ. ಅರ್ಹರಲ್ಲಿ9 ಮಂದಿಗಷ್ಟೇ ಸ್ಥಾನ. ಒಂದು ವೇಳೆ ಹೈಕಮಾಂಡ್ ಸೂಚಿಸಿದರೆ 7 ಮಂದಿಗಷ್ಟೇ ಮಂತ್ರಿ ಸ್ಥಾನ ನೀಡಲಾಗುತ್ತದೆ. ಅದಕ್ಕೂ ತಯಾರಿರಬೇಕು. ಮುಂದಿನ ದಿನಗಳಲ್ಲಿಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ ಎಂದು ಮಿತ್ರಮಂಡಳಿಯನ್ನು ಒಪ್ಪಿಸಲು ಸಿಎಂ ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಡಿಸಿಎಂ ಗೊಂದಲ ಈ ಮಧ್ಯೆ ಡಿಸಿಎಂ ಸ್ಥಾನ ತೆರವುಗೊಳಿಸಬೇಕೊ ಬೇಡವೊ ಎಂಬ ಗೊಂದಲವೂ ಮುಂದುವರಿದಿದೆ. ಸಿಎಂ ಇಚ್ಛಿಸಿದರೆ ಹಾಲಿ ಡಿಸಿಎಂಗಳನ್ನು ಉಳಿಸಿಕೊಂಡು ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿಸಬಹುದು. ಈ ವಿಚಾರವಾಗಿ ದಿಲ್ಲಿಭೇಟಿಯಲ್ಲೇ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.
from India & World News in Kannada | VK Polls https://ift.tt/2sWTIKb