ಹೊಸ ವರ್ಷದ ಮೊದಲ ಕದನ; ಲಂಕಾ ದಹನಕ್ಕೆ ಸಜ್ಜಾದ ಟೀಮ್ ಇಂಡಿಯಾ

ಗುವಾಹಟಿ: 2019ನೇ ವರ್ಷದ ಯಶಸ್ಸಿನ ಬಳಿಕ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ. ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾಗವಹಿಸುತ್ತಿದ್ದು, ಮೊದಲ ಕದನ ಜನವರಿ 4 ಭಾನುವಾರದಂದು ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿದೆ. 2019 ವಿಶ್ವಕಪ್ ವರ್ಷ ಎಂದೇ ಗುರುತಿಸಲ್ಪಟ್ಟಿದೆ. ಅಕ್ಟೋಬರ್ ತಿಂಗಳಲ್ಲಿ ಚುಟುಕು ವಿಶ್ವಕಪ್‌ಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಟ್ವೆಂಟಿ-20 ಪಂದ್ಯಗಳತ್ತ ಭಾರತ ಚಿತ್ತ ಹಾಯಿಸಿದೆ. ಈ ಹಿನ್ನಲೆಯಲ್ಲಿ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಲಂಕಾ ಸರಣಿಯು ಹೆಚ್ಚಿನ ಮಹತ್ವ ಗಿಟ್ಟಿಸಿಕೊಂಡಿದೆ. ಗಾಯ ಮುಕ್ತಗೊಂಡಿರುವ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದು, ಅಮೋಘ ಫಾರ್ಮ್ ಮುಂದುವರಿಸುವ ಇರಾದೆಯಲ್ಲಿದ್ದಾರೆ. ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಬುಮ್ರಾ ತಮ್ಮ ಲಯ ಕಂಡುಕೊಳ್ಳಬೇಕಿದೆ. ಉಪನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ಸೂಚಿಸಿರುವ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಜೊತೆಗೆ ಅನುಭವಿ ಶಿಖರ್ ಧವನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಧವನ್ ಕೂಡಾ ಗಾಯದ ಸಮಸ್ಯೆಯ ಬಳಿಕ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಅಲ್ಲದೆ ಕಳಪೆ ಫಾರ್ಮ್‌ನ ಬಳಿಕ ತಮ್ಮ ಲಯ ಕಂಡುಕೊಳ್ಳುವ ಇರಾದೆಯಲ್ಲಿದ್ದಾರೆ. ನಾಯಕ ಎಂದಿನಂತೆ ಬ್ಯಾಟಿಂಗ್ ವಿಭಾಗದ ಜವಾಬ್ದಾರಿ ವಹಿಸಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ರಿಷಬ್ ಪಂತ್ ಬಲ ತುಂಬಲಿದ್ದಾರೆ. ಅಯ್ಯರ್ ಆಗಲೇ ನಾಲ್ಕನೇ ಕ್ರಮಾಂಕದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಇನ್ನೊಂದೆಡೆ ರಿಷಬ್ ಪಂತ್ ಇನ್ನು ಒತ್ತಡದಲ್ಲಿದ್ದು, ತಮ್ಮ ಸ್ಥಾನವನ್ನು ಸಮರ್ಥಿಸಿಕೊಳ್ಳಬೇಕಿದೆ. ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಆಲ್‌ರೌಂಡರ್‌ಗಳ ಸ್ಥಾನವನ್ನು ತುಂಬುವ ಸಾಧ್ಯತೆಯಿದೆ. ಈ ಮಧ್ಯೆ ಕುಲ್ಚಾ ಜೋಡಿಗಳಾದ ಕುಲ್‌ದೀಪ್ ಯಾದವ್ ಹಾಗೂ ಯುಜ್ವೇಂದ್ರ ಚಹಲ್‌ರನ್ನು ಜೊತೆಯಾಗಿ ಆಡಿಸುವರೇ ಎಂಬುದನ್ನು ಕಾದು ನೋಡಬೇಕಿದೆ. ಜಸ್ಪ್ರೀತ್ ಬುಮ್ರಾ ಹಾಗೂ ನವದೀಪ್ ಸೈನಿ ವೇಗದ ಅಸ್ತ್ರವಾಗಲಿದ್ದಾರೆ. ಇವರ ಜೊತೆಗೆ ವಿಂಡೀಸ್ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಶಾರ್ದೂಲ್ ಠಾಕೂರ್ ಸಹ ಲೈನ್‌ನಲ್ಲಿದ್ದಾರೆ. ಇನ್ನೊಂದೆಡೆ ಕರ್ನಾಟಕದ ಮನೀಶ್ ಪಾಂಡೆ ಹಾಗೂ ಕೇರಳದ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆಯಾಗಿದೆ. ಶಿವಂ ದುಬೆ ಕೂಡಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲು ನಾಯಕ ವಿರಾಟ್ ಕೊಹ್ಲಿಯ ವಿಶ್ವಾಸ ಗೆಲ್ಲಬೇಕಿದೆ. ಅತ್ತ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿರುವ ಅನುಭವಿ ವೇಗದ ಬೌಲರ್ ಲಸಿತ್ ಮಾಲಿಂಗ ಮುಂದಾಳತ್ವದ ಲಂಕಾ ತಂಡ ಭಾರತದಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಇರಾದೆಯಲ್ಲಿದೆ. ಇವರಿಗೆ ಅನುಭವಿ ಆ್ಯಂಗಲೋ ಮ್ಯಾಥ್ಯೂಸ್ ಕೂಡಾ ಸಾಥ್ ನೀಡಲಿದ್ದಾರೆ. ಕುಸಾಲ್ ಪರೇರಾ, ಬಾನುಕ ರಾಜಪಕ್ಸ, ಒಶಾಡ ಫೆರ್ನಾಂಡೊ, ದನುಶ್ಕ ಗುಣತಿಲಕ, ಎಡಗೈ ಸ್ಪಿನ್ನರ್ ವಾನಿಂಡು ಹಸರಂಗ, ನಿರೋಶನ್ ಡಿಕ್‌ವೆಲ್ಲ, ಇಸುರು ಉದಾನ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಬೇಕಿದೆ. ಒಟ್ಟಿನಲ್ಲಿ ಗುವಾಹಟಿಯಲ್ಲಿ ರೋಚಕ ಹಣಾಹಣಿ ನಿರೀಕ್ಷೆ ಮಾಡಲಾಗುತ್ತಿದೆ. ತಂಡಗಳು ಇಂತಿದೆ: ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಸಂಜು ಸ್ಯಾಮ್ಸನ್, ರಿಷಬ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ಯುಜ್ವೇಂದ್ರ ಚಹಲ್, ಕುಲ್‌ದೀಪ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ ಮತ್ತು ವಾಷಿಂಗ್ಟನ್ ಸುಂದರ್. ಶ್ರೀಲಕಾ: ಲಸಿತ್ ಮಾಲಿಂಗ (ನಾಯಕ), ಧನುಷ್ಕ ಗುಣತಿಲಕ, ಅವಿಶ್ಕ ಫೆರ್ನಾಂಡೊ, ಆ್ಯಂಗಲೋ ಮ್ಯಾಥ್ಯೂಸ್, ದಸುನ್ ಶನಕ, ಕುಸಾಲ್ ಪರೇರಾ, ನಿರೋಶನ್ ಡಿಕ್‌ವೆಲ್ಲ, ಧನಂಜಯ ಡಿ ಸಿಲ್ವ, ಇಸುರು ಉದಾನ, ಭಾನುಕ ರಾಜಪಕ್ಸ, ಒಶಾಡ ಫೆರ್ನಾಂಡೊ, ವಾನಿಂಡು ಹಸರಂಗ, ಲಹಿರು ಕುಮಾರ, ಕುಸಾಲ್ ಮೆಂಡಿಸ್, ಲಕ್ಷ್ಮಣ್ ಸಂಡಕನ್ ಮತ್ತು ಕಸುನ್ ರಜಿತ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2MVtHS5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...