ಮೊಹಾಲಿ: ಅಂಪೈರ್ ಏನೇ ತೀರ್ಪು ನೀಡಿದರೂ ಅದನ್ನು ಚಾಚು ತಪ್ಪದೇ ಪಾಲಿಸುವುದು ಸಭ್ಯರ ಆಟ ಕ್ರಿಕೆಟ್ನ ಲಕ್ಷ್ಮಣವಾಗಿದೆ. ಹಾಗಿರಬೇಕೆಂದರೆ ಯುವ ಭರವಸೆಯ ಆಟಗಾರನೊಬ್ಬ ಅಂಪೈರ್ ಔಟ್ ತೀರ್ಪು ನೀಡಿದರೂ ಕ್ರೀಸ್ ಬಿಟ್ಟು ಕದಲದಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಇದರಿಂದಾಗಿ ಪಂದ್ಯ 10 ನಿಮಿಷಗಳಷ್ಟು ಕಾಲ ಸ್ಥಗಿತಗೊಂಡಿತ್ತು. ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯಲ್ಲಿ ಪಂಜಾಬ್ ಹಾಗೂ ದಿಲ್ಲಿ ನಡುವಣ ಪಂದ್ಯದಲ್ಲಿ ಘಟನೆ ನಡೆದಿದೆ. ಐಎಸ್ ಬಿದ್ರಾ ಸ್ಟೇಡಿಯಂನಲ್ಲಿ ನಡೆದ ರಣಜಿ ಪಂದ್ಯದಲ್ಲಿ ಅಂಪೈರ್ ಔಟ್ ತೀರ್ಪು ನೀಡಿದರೂ ಪಂಜಾಬ್ ಯುವ ಬ್ಯಾಟ್ಸ್ಮನ್ ಕ್ರೀಸ್ ಬಿಟ್ಟು ತೆರಳಿಲ್ಲ. ಇದರ ಬದಲಾಗಿ ಅಂಪೈರ್ ಜೊತೆಗೆ ವಾಗ್ವಾದಕ್ಕಿಳಿದರು. ಕೊನೆಗೂ ಅನ್ಯ ದಾರಿಯಿಲ್ಲದೇ ಅಂಪೈರ್ ತಮ್ಮ ನಿರ್ಧಾರವನ್ನು ಬದಲಾಯಿಸಿದರು. ನಿಧಾನಗತಿಯ ವೇಗದ ಬೌಲರ್ ಸಭೋದ್ ಭಾಟಿ ದಾಳಿಯಲ್ಲಿ ಗಿಲ್ 10 ರನ್ ಗಳಿಸಿದ್ದ ವೇಳೆಯಲ್ಲಿ ವಿವಾದ ನಡೆದಿತ್ತು. ಬ್ಯಾಟ್ ಮುಂದುವರಿಸಿದ ಗಿಲ್ ಆಟ ಹೆಚ್ಚು ಹೊತ್ತು ಸಾಗಲಿಲ್ಲ. 23 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಭಾರತ 'ಎ' ತಂಡದ ನಾಯಕರೂ ಆಗಿರುವ ಗಿಲ್ ವರ್ತನೆಯು ಬಹಳಷ್ಟು ಟೀಕೆಗೆ ಕಾರಣವಾಗುತ್ತಿದೆ. ಆಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಗಿಲ್, ಟೆಸ್ಟ್ ತಂಡಕ್ಕೂ ಆಯ್ಕೆಯಾಗಿದ್ದರು. ಯುವ ಪ್ರತಿಭಾವಂತ ಬ್ಯಾಟ್ಸ್ಮನ್ ರಣಜಿ ಟ್ರೋಫಿಯಲ್ಲಿ ಕೆಟ್ಟ ವರ್ತನೆ ತೋರಿರುವ ಹಿನ್ನಲೆಯಲ್ಲಿ ಶಿಸ್ತಿನ ಕ್ರಮಕ್ಕೆ ಒಳಗಾಗುವ ಸಾಧ್ಯತೆಯಿದೆ. ಫೀಲ್ಡ್ ಅಂಪೈರ್ ಮೊಹಮ್ಮದ್ ರಫಿ ಮೊದಲು ಔಟ್ ತೀರ್ಪು ನೀಡಿದ್ದರು. ಶುಭಮನ್ ಗಿಲ್ ವಾಗ್ವಾದಕ್ಕೆ ಇಳಿದ ಹಿನ್ನಲೆಯಲ್ಲಿ ಸ್ಕ್ವೇರ್ ಲೆಗ್ ಅಂಪೈರ್ ಜೊತೆ ಚರ್ಚಿಸಿ ತಮ್ಮ ನಿರ್ಧಾರವನ್ನು ಹಿಂಪಡೆದರು. ಇದು ದಿಲ್ಲಿ ಆಟಗಾರರ ಕೋಪಕ್ಕೆ ಕಾರಣವಾಗಿತ್ತು. ಅಂಪೈರ್ ನಿರ್ಣಯದಿಂದ ಕುಪಿತಗೊಂಡ ದಿಲ್ಲಿ ಆಟಗಾರರು ಮೈದಾನದಿಂದ ವಾಕೌಟ್ ಮಾಡಲು ನಿರ್ಧರಿಸಿದ್ದರು ಎಂಬುದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಮ್ಯಾಚ್ ರೆಫರಿ ರಂಗನಾಥನ್ ವಿವಾದವನ್ನು ಇತ್ಯರ್ಥಗೊಳಿಸಿದರು. ಬಳಿಕ ಪಂದ್ಯವು ಮುಂದುವರಿಯಿತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2SQctJU