ನಂಜನಗೂಡು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ನಡೆಸುತ್ತಿರುವ ಭ್ರಷ್ಟರೇ ಪವಿತ್ರವಾದ ರಾಜಕಾರಣವನ್ನು ಬಿಟ್ಟು ತೊಲಗಿ ರಾಜ್ಯ ವ್ಯಾಪಿ ಅಭಿಯಾನದ ವೇಳೆ ನಂಜನಗೂಡಿನ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಸೇರಿದಂತೆ ಇತರೆ ಪದಾಧಿಕಾರಿಗಳ ವಿರುದ್ಧ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ನಂಜನಗೂಡಿನ ತಹಸೀಲ್ದಾರ್ ಮೋಹನ ಕುಮಾರಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ.31 ರಂದು ಸಂಜೆ ವೇಳೆ ರವಿ ಕೃಷ್ಣಾ ರೆಡ್ಡಿ ಸೇರಿದಂತೆ ಸುಮಾರು 15 ರಿಂದ 20 ಜನರ ಗುಂಪು ತಾಲೂಕು ಕಚೇರಿಗೆ ಪ್ರವೇಶಿಸಿ ಎಸ್ಡಿಎ ಶ್ರೀನಿವಾಸ್ ಬಳಿಗೆ ಬಂದು ಮರಡಿಹುಂಡಿ ಗ್ರಾಮದ ನಟರಾಜು ಎಂಬುವರಿಗೆ ಸಾಗುವಳಿ ಚೀಟಿ ನೀಡದಿರಲು ಕಾರಣವೇನು ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಸಾಗುವಳಿ ಚೀಟಿಯನ್ನು ಕೊಡಲೇಬೇಕು ಎಂದು ಬೆದರಿಕೆ ಒಡ್ಡಿದ್ದಾರೆ. ಈ ವೇಳೆ ಅವರ ಅರ್ಜಿ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ವಜಾಗೊಂಡಿರುವ ಬಗ್ಗೆ ಹಿಂಬರಹ ನೀಡಿದ್ದರೂ ಕೇಳದೆ ಅವಾಚ್ಯ ಶಬ್ದಗಳಿಂದ ಸಿಬ್ಬಂದಿಯನ್ನು ಬೆದರಿಸಿದ್ದಾರೆ ಎಂದು ದೂರಿದ್ದಾರೆ. ಅಲ್ಲದೇ ಬಳಿಕ ತಹಸೀಲ್ದಾರ್ ಕೊಠಡಿಗೆ ಬಂದ ಅವರು ಮಹಿಳಾ ಅಧಿಕಾರಿ ಎಂಬುದನ್ನು ಕಾಣದೆ ಏರು ಧ್ವನಿಯಲ್ಲಿ ಮಾತನಾಡಿ, ಬೆದರಿಕೆಯೊಡ್ಡಿ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದರು. ಇನ್ನು ಯಾವುದೇ ಅನುಮತಿಯಿಲ್ಲದೇ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ನನಗೆ ಹಾಗೂ ಕಚೇರಿಯ ಸಿಬ್ಬಂದಿಗಳಿಗೆ ಮಾನಸಿಕವಾಗಿ ನೋವಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ತಹಸೀಲ್ದಾರ್ ಮೋಹನಕುಮಾರಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ರವಿ ಕೃಷ್ಣಾ ರೆಡ್ಡಿ, ಮರಡಿಹುಂಡಿ ಗ್ರಾಮದ ನಟರಾಜು ಸೇರಿದಂತೆ 15 ರಿಂದ 20 ಜನರ ಗುಂಪಿನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪಿಎಸ್ಐ ವಿಜಯರಾಜ್ ತನಿಖೆ ಕೈಗೊಂಡಿದ್ದಾರೆ. ರವಿ ಕೃಷ್ಣಾ ರೆಡ್ಡಿ ಅವರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸ್ಥಾಪಿಸಿ ರಾಜ್ಯದೆಲ್ಲೆಡೆ ಅಭಿಯಾನ ನಡೆಸುತ್ತಿದ್ದು, ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡು ಭ್ರಷ್ಟ ಅಧಿಕಾರಿಗಳ ಪಾಲಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದಾರೆ. ಈ ಹಿಂದೆಯೂ ಹಲವೆಡೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಿದ್ದರು. ಅಲ್ಲದೇ ಜನಸಾಮಾನ್ಯರು ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಪ್ರೇರೇಪಿಸುತ್ತಾರೆ ಎಂದು ತಿಳಿದಾಗ ಅವರೊಂದಿಗೆ ಆ ಕಚೇರಿಗೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಈ ಹಿಂದೆಯೂ ಇದೇ ಕಾರಣಕ್ಕೆ ಅವರ ವಿರುದ್ಧ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.
from India & World News in Kannada | VK Polls https://ift.tt/3teVlxh