ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಮುಂದಿನ ಐದು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬುಧವಾರ ಮುನ್ಸೂಚನೆ ನೀಡಿದೆ. ವಿಶೇಷವಾಗಿ, ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯಪುರ, ರಾಯಚೂರು, ಧಾರವಾಡ, ಹಾವೇರಿ ಜಿಲ್ಲೆಗಳ ಕೆಲವೆಡೆ ಮುಂದಿನ ಐದು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನೆಯಲ್ಲಿ ಹೇಳಿದೆ. ಬೆಂಗಳೂರು ನಗರದಲ್ಲಿ ಮುಂದಿನ ಎರಡು ದಿನ ಮೋಡ ಕವಿದ ವಾತಾವರಣವಿರಲಿದ್ದು, ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ 29 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ ಎಂದು ಇಲಾಖೆ ತಿಳಿಸಿದೆ. ಬುಧವಾರ ಕೊಪ್ಪಳ ಜಿಲ್ಲೆಯ ಮುನಿರಾಬಾದ್ನಲ್ಲಿ 6 ಸೆಂ.ಮೀ, ಉಡುಪಿ ಜಿಲ್ಲೆಯ ಕೋಟ, ಬಾಗಲಕೋಟೆ ಜಿಲ್ಲೆಯ ಹುನುಗುಂದದಲ್ಲಿ ತಲಾ 4 ಸೆಂ.ಮೀ. ಮಳೆಯಾಗಿದೆ. ವಿಜಯಪುರದಲ್ಲಿ ಕೊಚ್ಚಿ ಹೋದ ವ್ಯಕ್ತಿ, ನೆಲಕ್ಕುರುಳಿದ ಬೆಳೆ ವಿಜಯಪುರ ಜಿಲ್ಲೆಯಾದ್ಯಂತ ಕೆಲದಿನಗಳಿಂದ ಸತತ ಮಳೆಯಾಗುತ್ತಿದ್ದು, ಬುಧವಾರವೂ ಕೆಲಗಂಟೆ ಧಾರಾಕಾರ ಮಳೆ ಸುರಿದ ಪರಿಣಾಮ ಅಪಾರ ಹಾನಿ ಉಂಟಾಗಿದೆ. ತಾಳಿಕೋಟೆಯಲ್ಲಿ ಡೋಣಿ ಪ್ರವಾಹಕ್ಕೆ ಸಿಲುಕಿ ವ್ಯಕ್ತಿ ಕೊಚ್ಚಿ ಹೋಗಿದ್ದರೆ, ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿದೆ. 2 ದಿನಗಳಿಂದ ಮಳೆ ಸುರಿದ ಪರಿಣಾಮ ಡೋಣಿ ನದಿ ಪ್ರವಾಹ ಉಂಟಾಗಿದೆ. ತಾಳಿಕೋಟೆ - ಹಡಗಿನಾಳದ ನೆಲಮಟ್ಟದ ಸೇತುವೆ ಮೇಲೆ ನೀರು ಹರಿದಿದ್ದು, ಬುಧವಾರ ಮಧ್ಯಾಹ್ನ ತಾಳಿಕೋಟೆಯ ಇಬ್ರಾಹಿಂ ಬೇಪಾರಿ ಎಂಬ ವ್ಯಕ್ತಿ ಸೇತುವೆ ದಾಟುತ್ತಿದ್ದಾಗ ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದಾನೆ. ಜಿಲ್ಲೆಯಾದ್ಯಂತ ಕೆಲ ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ತೊಗರಿ ಬೆಳೆಗೆ ಹಸಿ ಹೆಚ್ಚಾಗಿ ಕೀಟ ಬಾಧೆ, ಕೊಳೆ ರೋಗ ಸಮಸ್ಯೆ ಎದುರಾಗಿದೆ. ಹೊಸಪೇಟೆಯಲ್ಲಿ ಬಿರುಸಿನ ಮಳೆ ನಗರ ಸೇರಿ ತಾಲೂಕಿನಲ್ಲಿ ಎರಡು ದಿನಗಳಿಂದ ಬಿರುಸಿನ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಹಂಪಿ ರಸ್ತೆ, ರೈಲ್ವೆ ನಿಲ್ದಾಣ, ರೋಟರಿವೃತ್ತ, ಟಿ.ಬಿ.ಡ್ಯಾಂ, ಸೇರಿ ಕಮಲಾಪುರ, ಮರಿಯಮ್ಮನಹಳ್ಳಿ ಕಡೆ ಉತ್ತಮ ಮಳೆಯಾಗಿದೆ. ಮಂಗಳವಾರ ನಸುಕಿನಿಂದ ಸುರಿಯುತ್ತಿರುವ ಮಳೆ ಬುಧವಾರವೂ ಮುಂದುವರಿಯಿತು. ಇದರಿಂದ ನಾನಾ ಕೆಲಸಕ್ಕೆ ಮಾರುಕಟ್ಟೆಗೆ ಬಂದಿದ್ದ ವಾಹನ ಸವಾರು, ಸಾರ್ವಜನಿಕರು ಪರದಾಡಿದರು. ಕರಾವಳಿಯಲ್ಲಿ ಸಾಧಾರಣ ಮಳೆ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಡೆಯಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ. ಬೆಳಗ್ಗೆ ಹೊತ್ತಿನಲ್ಲಿ ತುಂತುರು ಮಳೆಯಾದರೆ ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ 4.6 ಮಿ.ಮೀ ಮಳೆಯಾಗಿದೆ. ಮಂಗಳವಾರ ಬೆಳಗ್ಗೆಯಿಂದ ಬುಧವಾರ ಬೆಳಗ್ಗಿನ ವರೆಗೆ ಬೆಳ್ತಂಗಡಿಯಲ್ಲಿ 2.9 ಮಿ.ಮೀ, ಬಂಟ್ವಾಳದಲ್ಲಿ 2.7 ಮಿ.ಮೀ, ಮಂಗಳೂರಿನಲ್ಲಿ 4.4 ಮಿ.ಮೀ, ಪುತ್ತೂರಿನಲ್ಲಿ 4.2 ಮಿ.ಮೀ, ಸುಳ್ಯದಲ್ಲಿ 11.3 ಮಿ.ಮೀ, ಮೂಡುಬಿದಿರೆಯಲ್ಲಿ 4.5 ಮಿ.ಮೀ, ಕಡಬದಲ್ಲಿ 3.4 ಮಿ.ಮೀ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯ ಹಲವೆಡೆ ಚದುರಿದಂತೆ ಮಳೆ ಜಿಲ್ಲೆಯಲ್ಲಿ ಮಳೆಯ ತುರ್ತು ಅಗತ್ಯವಿರುವ ಈ ಹೊತ್ತಲ್ಲಿ ಅದರ ಕಣ್ಣಾಮುಚ್ಚಾಲೆ ಆಟ ಮುಂದುವರಿದಿದೆ. ಬುಧವಾರ ಕೂಡ ಜಿಲ್ಲೆಯ ಹಲವೆಡೆ ಚುದುರಿದಂತೆ ಮಳೆಯಾಗಿದೆ. ದಾವಣಗೆರೆ ನಗರ ಸೇರಿ ತಾಲೂಕಿನ ಆರನೇ ಮೈಲಿಕಲ್ಲು, ತರಳಬಾಳು ನಗರ, ಹದಡಿ, ಕೈದಾಳೆ ಸೇರಿ ಈ ಭಾಗದಲ್ಲಿ ಮಧ್ಯಾಹ್ನ 2 ಗಂಟೆ ಹೊತ್ತಲ್ಲಿ ಕೊಂಚ ಮಳೆಯಾಗಿದೆ. ಚನ್ನಗಿರಿ ತಾಲೂಕಿನ ಹಿರೇಕೋಗಲೂರು, ತ್ಯಾವಣಿಗೆ, ಮತ್ತಿ, ಸೂಳೆಕೆರೆ ಇತರೆಡೆಗಳಲ್ಲಿಯೂ ಮಳೆಯಾಗಿದೆ. ನ್ಯಾಮತಿ ತಾಲೂಕಿನಲ್ಲಿ ಜಿಟಿ ಜಿಟಿ ಮಳೆ ಹಾಗೂ ಬಿಸಿಲಿನ ಜುಗಲ್ಬಂಧಿ ಬುಧವಾರವೂ ಮುಂದುವರಿದಿತ್ತು. ನ್ಯಾಮಿತ ಪಟ್ಟಣ ಸೇರಿ ತಾಲೂಕಿನ ಹಲವೆಡೆ ಬೆಳಗ್ಗೆಯಿಂದ ಆಗಾಗ ಸೋನೆಯಂತೆ ಮಳೆ ಸುರಿಯುವುದು ಮತ್ತು ಬಿಸಿಲು ಬೀಳುವುದು ನಡೆದಿದೆ. ಮಳೆಯ ತುರ್ತು ಅಗತ್ಯವಿರುವ ಮಳೆಯಾಶ್ರಿತ ಕೃಷಿ ಪ್ರದೇಶವಾದ ದಾವಣಗೆರೆ ತಾಲೂಕಿನ ಮಾಯಕೊಂಡ, ಜಗಳೂರು, ಹೊನ್ನಾಳಿ, ಚನ್ನಗಿರಿಯ ಕೆಲ ಭಾಗದಲ್ಲಿ ಮೋಡ ಕವಿದ ವಾತಾವರಣದ ಜತೆ ಆಗಾಗ ಬಿಸಿಲು ಕೂಡ ಬೀಳುತ್ತಿದೆ. ಮೋಡ ಒಡೆದು ಮಳೆ ಸುರಿಯಲೆಂದು ಜನ ಪ್ರಾರ್ಥಿಸುತ್ತಿದ್ದಾರೆ.
from India & World News in Kannada | VK Polls https://ift.tt/3ADAjLO