
ಶಿವಮೊಗ್ಗ: ದೇವಸ್ಥಾನದ ಬೀಗ ಒಡೆದು ಕಾಣಿಕೆ ಹಣ, ಪೂಜಾ ಸಾಮಗ್ರಿಗಳನ್ನು ಕದ್ದೊಯ್ದ ಘಟನೆ ತಾಲೂಕಿನ ದೊಡ್ಡಮತಲಿ ಗ್ರಾಮದ ಶ್ರೀ ಹುಲಿಯಾಂಬಿಕ ಧರ್ಮ ಕೇಂದ್ರದಲ್ಲಿ ನಡೆದಿದೆ. ಧರ್ಮ ಕೇಂದ್ರದ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಹುಂಡಿ ಒಡೆದು ಅಂದಾಜು 10 ಸಾವಿರ ರೂ. ಕಾಣಿಕೆ ಹಣ ಕದ್ದೊಯ್ದಿದ್ದಾರೆ. ಜತೆಗೆ, 50 ಕೆ.ಜಿ. ತೂಕದ ಎರಡು ಹಿತ್ತಾಳೆಯ ದೊಡ್ಡ ದೀಪ, ಒಂದೂವರೆ ಕೆ.ಜಿ ತೂಕದ ಎರಡು ಸಣ್ಣ ದೀಪಗಳು, ಹಿತ್ತಾಳೆಯ ಆರು ಹರಿವಾಣಗಳು, ತಾಮ್ರದ ಎರಡು ಹರಿವಾಣಗಳು, 30 ತೂಗು ಗಂಟೆಗಳು, ಮಂಗಳಾರತಿ ತಟ್ಟೆ, 5 ಚೆಂಬುಗಳನ್ನು ಕಳವು ಮಾಡಲಾಗಿದೆ. ಅಂದಾಜು 50 ಸಾವಿರ ರೂ. ಮೌಲ್ಯದ ವಸ್ತುಗಳ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶ್ರೀ ಹುಲಿಯಾಂಬಿಕ ದೇವಸ್ಥಾನದಲ್ಲಿ ವಾರಕ್ಕೆ ಒಮ್ಮೆ ಮಾತ್ರ ಪೂಜೆ ಸಲ್ಲಿಸಲಾಗುತ್ತದೆ. ಮಂಗಳವಾರದಂದು ಮಾತ್ರ ಅರ್ಚಕರು ಬಂದು ಪೂಜೆ ಮಾಡುತ್ತಿದ್ದರು. ಈ ವೇಳೆ ಗ್ರಾಮಸ್ಥರು ಪಾಲ್ಗೊಳ್ಳುತ್ತಿದ್ದರು. ಉಳಿದ ದಿನಗಳಲ್ಲಿ ದೇವಸ್ಥಾನಕ್ಕೆ ಬೀಗ ಹಾಕಲಾಗುತ್ತಿತ್ತು. ಇದನ್ನು ತಿಳಿದುಕೊಂಡೆ ಕಳ್ಳರು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ದೇವಸ್ಥಾನದ ಅಧ್ಯಕ್ಷ ಗಣಪತಿ ಅವರು ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳವುಇನ್ನೊಂದೆಡೆ ನಗರದ ಗಾರ್ಡನ್ ಏರಿಯಾದ ಎರಡನೇ ಕ್ರಾಸ್ನಲ್ಲಿ ಇತ್ತೀಚೆಗೆ ಮನೆಯ ಮುಂದೆ ನಿಲ್ಲಿಸಿದ್ದ ಕಾರನ್ನು ಕಳವು ಮಾಡಲಾಗಿದೆ. ಗೋವಿಂದ್ ಎಂಬುವವರ ಕಾರನ್ನು ಕಳ್ಳತನ ಮಾಡಲಾಗಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆವಲಪರ್ಸ್ ವಿರುದ್ಧ ದೂರು :ಕಟ್ಟಡ ನಿರ್ಮಿಸಿ ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆಂದು ಆರೋಪಿಸಿ ನ್ಯಾಯಾಲಯಕ್ಕೆ ವ್ಯಕ್ತಿಯೊಬ್ಬರು ಖಾಸಗಿ ದೂರು ನೀಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಕಟ್ಟಡ ನಿರ್ಮಿಸಿಕೊಡುವುದಾಗಿ ಹೇಳಿ ಶಿವಮೊಗ್ಗದ ತ್ಯಾಗರಾಜ್ ಎಂಬುವವರಿಂದ 25 ಲಕ್ಷ ರೂ. ಹಣ ಪಡೆದುಕೊಳ್ಳಲಾಗಿತ್ತು. ಆದರೆ, ಒಂದು ವರ್ಷ ಕಳೆದರೂ ಕಟ್ಟಡ ನಿರ್ಮಿಸಿಲ್ಲ. ಹೀಗಾಗಿ, ನ್ಯಾಯಾಲಯದಲ್ಲಿ ದೂರು ನೀಡಿದ್ದರು. ತ್ಯಾಗರಾಜ್ ಅವರು ದಕ್ಷಿಣ ಭಾರತದ ಚರ್ಚ್ ಟ್ರಸ್ಟ್ ಅಸೋಸಿಯೇಷನ್ ನಿರ್ದೇಶಕರಾಗಿದ್ದು, ಅಸೋಸಿಯೇಷನ್ ವ್ಯಾಪ್ತಿಯಲ್ಲಿರುವ ಸ್ಥಿರಾಸ್ತಿಗಳನ್ನು ನೋಡಿಕೊಳ್ಳುವುದು, ಕಟ್ಟಡಗಳನ್ನು ಕಟ್ಟಿಸುವುದು ಮತ್ತು ಅವುಗಳನ್ನು ಬಾಡಿಗೆಗೆ ನೀಡುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈ ಅಸೋಸಿಯೇಷನ್ಗೆ ಸೇರಿದ ಜಾಗದಲ್ಲಿ ಕಟ್ಟಡ ನಿರ್ಮಿಸುವುದಾಗಿ ಮೈಸೂರಿನ ಡೆವಲಪರ್ಸ್ ಕಂಪನಿಯೊಂದರ ಪ್ರತಿನಿಧಿಗಳು ಸಂಪರ್ಕಿಸಿದ್ದರು. ಇದನ್ನು ನಂಬಿ ಹಣ ಕೂಡ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
from India & World News in Kannada | VK Polls https://ift.tt/3n0bkOO