ಬಜೆಟ್‌ಗೆ ಗೋರಕ್ಷಣೆ ಹೊರೆ; ಭಾರಿ ಪ್ರಮಾಣದಲ್ಲಿ ಗೋಶಾಲೆ ಸ್ಥಾಪನೆ, ಅನುದಾನ ಮೀಸಲಿಗೆ ಒತ್ತಡ!

ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ಪ್ರತಿಬಂಧಕ ಕಾಯಿದೆ ಜಾರಿ ಬೆನ್ನಲ್ಲೇ ಗಂಡು ಕರು ಮತ್ತು ವಯಸ್ಸಾದ ಹಸುಗಳನ್ನು ಸಾಕಲಾಗದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವು ಕಡೆ ಎಳೆ ಕರುಗಳು ಮತ್ತು ವಯಸ್ಸಾದ ಗೋವುಗಳನ್ನು ಬೀದಿಯಲ್ಲಿ ಬಿಟ್ಟು ಹೋಗುವ ಪ್ರಸಂಗಗಳು ನಡೆಯುತ್ತಿವೆ. ಹೀಗಾಗಿ ಇಂಥ ಗೋವುಗಳ ನಿರ್ವಹಣೆಗೆ ತಾಲೂಕುಗಳಲ್ಲಿ ಸೂಕ್ತ ಪ್ರಮಾಣದಲ್ಲಿ ವ್ಯವಸ್ಥಿತ ಗೋಶಾಲೆಗಳನ್ನು ಸ್ಥಾಪಿಸಬೇಕು, ಅದಕ್ಕೆ ಮೀಸಲಿಡಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಮೊದಲೇ ಆರ್ಥಿಕ ಕೊರತೆ ಹಿಂದಿಟ್ಟುಕೊಂಡು ಮಂಡಿಸಲಿರುವ ಸರಕಾರಕ್ಕೆ ಇದು ದೊಡ್ಡ ಹೊರೆಯಾಗಲಿದೆ. ರಾಜ್ಯದ ಗ್ರಾಮ ಗ್ರಾಮಗಳಲ್ಲಿ ಈ ಸಮಸ್ಯೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳಲಿರುವ ಸಾಧ್ಯತೆ ಇರುವುದರಿಂದ ಈಗಲೇ ಸರಕಾರ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂಬ ಒತ್ತಡವಿದೆ. ಸರಕಾರ ಪ್ರತಿ ತಾಲೂಕಿನಲ್ಲಿ ಹೋಬಳಿ ಮಟ್ಟದಲ್ಲಿ ಗೋಶಾಲೆಗಳನ್ನು ಆರಂಭಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಗೋಶಾಲೆಗಳನ್ನು ತೆರೆದರೂ ಅವುಗಳಿಗೆ ಅಗತ್ಯ ಮೇವು, ನೀರು ನಿರ್ವಹಣಾ ವೆಚ್ಚದ ಹೊರೆ ಸರಕಾರದ ಮೇಲೆ ಬೀಳಲಿದೆ. ಹೀಗಾಗಿ ಸರಕಾರ ಈ ಬೇಡಿಕೆಯ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಇಷ್ಟರ ನಡುವೆಯೂ ರಾಜ್ಯದ ಕೆಲವು ಭಾಗಗಳಲ್ಲಿ ಗೋವಿನ ಮಾರಾಟ, ಖರೀದಿ ಹಿಂದಿನಂತೆಯೇ ನಡೆಯುತ್ತಿದೆ. ಆದರೆ, ಖರೀದಿಯ ಭರಾಟೆ ಕಡಿಮೆಯಾಗಿದೆ. ಜಾಯಿನ್‌ ಕೊಡಬಹುದುರಾಜ್ಯದಲ್ಲಿ ಜಾರಿಗೆ ಬಂದಿರುವ ಹೊಸ ಕಾನೂನಿನ ಪ್ರಕಾರ, 13 ವರ್ಷದೊಳಗಿನ ಯಾವುದೇ ದನ ಕರುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುವಂತಿಲ್ಲ. ರೈತರು ಪರಸ್ಪರ ವ್ಯಾಪಾರ, ಸಾಗಾಣಿಕೆಗೂ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಕಾನೂನು ಮೀರಿ ವ್ಯವಹರಿಸಿದರೆ, 1ರಿಂದ 10 ಲಕ್ಷ ರೂ.ವರೆಗೆ ದಂಡ ಮತ್ತು ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಗೋಮಾಳಗಳೂ ಇಲ್ಲರಾಜ್ಯದಲ್ಲಿ ಬಹುತೇಕ ಗೋಮಾಳಗಳು ಕಣ್ಮರೆಯಾಗಿದ್ದು, ಸಂರಕ್ಷಿತ ಅರಣ್ಯ ಪ್ರದೇಶದ ನೆಪದಲ್ಲಿ ಅರಣ್ಯಕ್ಕೆ ಗೋವುಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ರಾಜ್ಯದ ಪಶ್ಚಿಮಘಟ್ಟಗಳು ಸೇರಿದಂತೆ ಅರಣ್ಯ ಅವಲಂಬಿತ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಗೋವುಗಳು ಮೇವಿಗೆಂದು ಅರಣ್ಯಪ್ರದೇಶಕ್ಕೆ ಹೋಗುವುದನ್ನು ತಡೆಯಲಾಗುತ್ತದೆ. ರೈತರು ಗಂಡು ಕರು ಅಥವಾ ಒಂದು ಹಸುವಿಗೆ ಮೇವು ತರಲು ನಿತ್ಯ ಕನಿಷ್ಠ 100ರೂ. ವ್ಯಯ ಮಾಡಬೇಕಿರುವ ಹಿನ್ನೆಲೆ ಸರಕಾರ ಆರ್ಥಿಕ ನೆರವು ನೀಡಬೇಕಾಗುತ್ತದೆ ಎನ್ನುವುದು ಭಾರತೀಯ ಕಿಸಾನ್‌ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಸರಘಟ್ಟ ಗಂಗಾಧರ್‌ ಅಭಿಪ್ರಾಯ. ಕಾಯ್ದೆಯ ವ್ಯಾಪ್ತಿ ಬದಲಾಗಲಿರೈತರಿಗೆ ಭಾರತೀಯ ಪ್ರಾದೇಶಿಕ ತಳಿಗಳು ಹೊರೆಯಾಗುವುದಿಲ್ಲ. ವಿದೇಶಿ ತಳಿಗಳಾದ ಎಚ್‌ಎಫ್‌, ಜೆರ್ಸಿ ತಳಿಗಳು ತೀವ್ರ ಆರ್ಥಿಕ ಹೊರೆ ನೀಡುತ್ತವೆ. ವಿದೇಶಗಳಲ್ಲಿ ಮಾಂಸಕ್ಕಾಗಿ ಬೆಳೆಸುವ ತಳಿಗಳನ್ನು ಗೋಹತ್ಯಾ ನಿಷೇಧ ಕಾನೂನು ವ್ಯಾಪ್ತಿಗೆ ತಂದಿರುವುದು ತಪ್ಪು. ಕಾಯ್ದೆಯ ವ್ಯಾಪ್ತಿಯಲ್ಲಿ ಕೇವಲ ಪ್ರಾದೇಶಿಕ ಗೋವುಗಳನ್ನು ಮಾತ್ರ ಸೇರ್ಪಡೆಗೊಳಿಸಬೇಕಿದೆ ಎಂದು ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಜೀವನ್‌ಕುಮಾರ್‌ ತಿಳಿಸಿದ್ದಾರೆ. ಈಗಿರುವ ಗೋಶಾಲೆಗಳೇ ಸಂಕಷ್ಟದಲ್ಲಿ ರಾಜ್ಯದಲ್ಲಿ ಈಗ ಒಟ್ಟು 159 ಗೋಶಾಲೆಗಳಿದ್ದು, ಅಲ್ಲಿರುವ ಗೋವುಗಳಿಗೆ ಸರಕಾರ ಸರಿಯಾಗಿ ಮೇವು ಒದಗಿಸುತ್ತಿಲ್ಲ. ಈಗ ಇನ್ನಷ್ಟು ಗೋವುಗಳನ್ನು ಗೋಶಾಲೆಗೆ ತಂದು ಬಿಟ್ಟರೆ ಅವುಗಳಿಗೆ ಮೇವು ಕೊಡೋರು ಯಾರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದರು. ರಾಜ್ಯದಲ್ಲಿ ಮೇವಿನ ಕೊರತೆ ಇದೆ, ಹಾಲು ಕೊಡುವುದನ್ನು ನಿಲ್ಲಿಸಿ ಅನುತ್ಪಾದಕವಾಗುವ ಗೋವುಗಳನ್ನು ಸಾಕುವುದು ರೈತರಿಗೆ ಕಷ್ಟವಾಗುತ್ತಿದೆ ಎಂದಿದ್ದರು.
  • ರಾಜ್ಯದಲ್ಲಿರುವ 159
  • ಒಟ್ಟು ಜಾನುವಾರುಗಳು 84 ಲಕ್ಷ
ಬೀದಿಪಾಲಾಗುವ ಜಾನುವಾರು
  • ಹಾಸನ ಜಿಲ್ಲೆಅರಸೀಕೆರೆ ತಾಲೂಕಿನ ಹಿರಿಸಾವೆ ಬಳಿ ಇತ್ತೀಚೆಗೆ ಗಂಡು ಕರುಗಳನ್ನು ಕೆರೆ ಅಂಗಳ, ಕಾಡಿನ ಬಳಿ ಬಿಡುತ್ತಿರುವುದು ಬೆಳಕಿಗೆ ಬಂದಿದೆ.
  • ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆಯ ಬಿಲ್ಲೇನಹಳ್ಳಿ ಹಾಗೂ ಶ್ರೀ ಗವಿರಂಗನಾಥಸ್ವಾಮಿ ದೇವಾಲಯ ಬಳಿ ಅನಾಥವಾಗಿದ್ದ 10ಕ್ಕೂ ಹೆಚ್ಚು ಗಂಡುಕರುಗಳನ್ನು ಅಧಿಕಾರಿಗಳು ರಕ್ಷಿಸಿದ್ದರು.
  • ಸರಕಾರಿ ಗೋಶಾಲೆಗಳ ವ್ಯವಸ್ಥೆ ಸರಿಯಾಗಿಲ್ಲ. ಖಾಸಗಿ ಗೋಶಾಲೆಗಳಿಗೆ ಗೋವುಗಳನ್ನು ಬಿಟ್ಟರೆ ಹೆಚ್ಚಿನ ಕಡೆ ಅವುಗಳ ನಿರ್ವಹಣೆಗೆ ಹಣವನ್ನು ಮಾಲೀಕರೇ ಕೊಡಬೇಕು.
ಮಿಶ್ರ ತಳಿ ಕರು ಕೇಳೋರಿಲ್ಲ ಬೀದಿಗೆ ಬೀಳುತ್ತಿರುವುದರಲ್ಲಿ ಮಿಶ್ರ ತಳಿ ಹಸುವಿನ ಗಂಡು ಕರುಗಳೇ ಹೆಚ್ಚು. ನಾಟಿ ಹಸು ಅಥವಾ ಹಳ್ಳೀಕಾರ್‌ ತಳಿಯ ಹಸುಗಳ ಗಂಡು ಕರುವಿಗೆ ಇನ್ನೂ ಬೇಡಿಕೆ ಇದೆ. ಇವುಗಳನ್ನು ಕೃಷಿ ಚಟುವಟಿಕೆಗೆ ಬಳಸಲಾಗುತ್ತಿದೆ. ಆದರೆ, ಮಿಶ್ರ ತಳಿಯ ಕರುಗಳು ಯಾವುದಕ್ಕೂ ಉಪಯೋಗವಿಲ್ಲದ ಹಿನ್ನೆಲೆಯಲ್ಲಿಅವುಗಳನ್ನು ಆದಷ್ಟು ಬೇಗನೆ ಸಾಗ ಹಾಕುತ್ತಾರೆ. ದೇಶಿ ತಳಿಗಳ ದನಗಳು ಕರುವಿಲ್ಲದಿದ್ದರೆ ಸರಿಯಾಗಿ ಹಾಲು ಕೊಡುವುದಿಲ್ಲ. ಮಿಶ್ರ ತಳಿಗಳ ವಿಚಾರದಲ್ಲಿ ಆ ಸಮಸ್ಯೆಯೂ ಇಲ್ಲ. ಕರುವಿಲ್ಲದಿದ್ದರೂ ಹಾಲು ಸಿಗುತ್ತದೆ. ಪರಿಹಾರವೇನು?
  • ಅಗತ್ಯಕ್ಕೆ ತಕ್ಕಂತೆ ಗೋಶಾಲೆಗಳ ನಿರ್ಮಾಣ ಮತ್ತು ಅದಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸಲು ಅನುದಾನ ಮೀಸಲು
  • ಕಾಡಿಗೆ ಗೋವುಗಳನ್ನು ಬಿಡುವುದನ್ನು ತಡೆಯಬೇಕು, ಮಾಂಸದ ರುಚಿ ಹತ್ತಿದ ಕಾಡುಪ್ರಾಣಿಗಳು ನಾಡಿಗೇ ಲಗ್ಗೆ ಇಡುವ ಅಪಾಯವಿದೆ.
  • ಮಿಶ್ರ ತಳಿಯ ಜಾನುವಾರುಗಳಲ್ಲಿ ಗಂಡು ಕರು ಹುಟ್ಟದಂತೆ ಪೂರ್ವಭಾವಿಯಾಗಿಯೇ ಪರೀಕ್ಷೆ ನಡೆಸುವುದೇ ಸಾಧ್ಯವೇ ಎಂದು ಪರಿಶೀಲನೆ.
ವಯಸ್ಸಾದ ಹಸುಗಳನ್ನು ಗೋಶಾಲೆಗಳಿಗೆ ಬಿಡಲು ಅವಕಾಶವಿದ್ದು, ಇವುಗಳ ನಿರ್ವಹಣೆಗೆ ಸರಕಾರ ಹಣ ನೀಡಲಿದೆ. ಪ್ರಭು ಚೌಹಾಣ್‌, ಪಶುಸಂಗೋಪನಾ ಸಚಿವರು (ವಿಧಾನಸಭೆಯಲ್ಲಿ ನೀಡಿದ್ದ ಹೇಳಿಕೆ) ಕಾಯಿದೆಯಿಂದ ರೈತರು ಗಂಡು ಕರುಗಳನ್ನು ಸಾಕಲಾಗುತ್ತಿಲ್ಲ. ಹೀಗಾಗಿ ಸರಕಾರ ರೈತರಿಗೆ ತಲಾ ಇಂತಿಷ್ಟು ನಿರ್ವಹಣಾ ಅನುದಾನ ಬಿಡುಗಡೆ ಮಾಡಲಿ. ಕೋಡಿಹಳ್ಳಿ ಚಂದ್ರಶೇಖರ್‌, ರಾಜ್ಯಾಧ್ಯಕ್ಷ, ರೈತಸಂಘ ಪ್ರತಿ ತಾಲೂಕಿನಲ್ಲಿ 10 ಎಕರೆ ಜಮೀನು ಗುರುತಿಸಿ ಗೋಶಾಲೆ ತೆರೆಯಬೇಕೆಂದು ಸರಕಾರಕ್ಕೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದ್ದು, ಪಶುಸಂಗೋಪನಾ ಇಲಾಖೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಘು ಸಕಲೇಶಪುರ, ರಾಜ್ಯ ಸಹ ಸಂಯೋಜಕ, ಬಜರಂಗದಳ ರಾಜ್ಯದಲ್ಲಿ ಪ್ರತಿ ತಾಲೂಕಿಗೆ ಗೋಶಾಲೆ ತೆರೆಯಲು ಕನಿಷ್ಠ ವರ್ಷಕ್ಕೆ 93 ಲಕ್ಷ ಅನುದಾನದ ಅಗತ್ಯವಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಜೆಟ್‌ ಬಳಿಕ ಗೋಶಾಲೆಗಳ ಸ್ಥಾಪನೆ ಕುರಿತಾಗಿ ಚಿತ್ರಣ ಲಭ್ಯವಾಗಲಿದೆ. ಡಾ. ಬಿ.ಎನ್‌ ಶಿವರಾಂ, ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ


from India & World News in Kannada | VK Polls https://ift.tt/3bjGGti

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...