ಉದಿಯಂಡ ಜಯಂತಿ ಮಂದಣ್ಣ ಮಡಿಕೇರಿ: ಬಹು ವರ್ಷಗಳ ನಂತರ ಕೊಡವ ಹೆರಿಟೇಜ್ ಸೆಂಟರ್ ಮರುಜೀವ ಪಡೆಯುತ್ತಿದೆ. ಮಡಿಕೇರಿ ನಗರದ ಹೊರವಲಯದ ಕರವಲೆ ಬಾಡಗ ಗ್ರಾಮದ 4 ಎಕರೆ ಪ್ರದೇಶದಲ್ಲಿ ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣವಾಗುತ್ತಿದ್ದು, ಒಂಭತ್ತು ವರ್ಷಗಳ ಹಿಂದೆ ಆರಂಭವಾದ ಕಾಮಗಾರಿ ಪೂರ್ಣಗೊಳ್ಳದೆ ನಿಂತಿತ್ತು. ನಿರ್ಮಾಣದ ಹಂತದಿಂದಲೂ ಕೆಲವೊಂದು ತಾಂತ್ರಿಕ ಸಮಸ್ಯೆಗಳು, ಕಳಪೆ ಕಾಮಗಾರಿ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಹೀಗೆ ಒಂದಿಲ್ಲೊಂದು ಕಾರಣಗಳೊಂದಿಗೆ ಹೆರಿಟೇಜ್ ಇನ್ನೂ ಅಪೂರ್ಣಗೊಂಡಿದೆ ಎಂಬ ಆರೋಪ ನಿರಂತರವಾಗಿ ಕೇಳಿ ಬರುತ್ತಿತ್ತು. ಕೊಡಗಿನ ವಿಶಿಷ್ಟ ಸಂಸ್ಕೃತಿಯನ್ನು ಪ್ರವಾಸಿಗರಿಗೆ ತಿಳಿಸುವ ಸಲುವಾಗಿ 2009-10ರಲ್ಲಿ ಕೊಡವ ಐನ್ ಮನೆ ಮಾದರಿಯಲ್ಲಿ ಕೊಡವ ಹೆರಿಟೇಜ್ ಸೆಂಟರ್ ಸ್ಥಾಪಿಸಲು ಚಿಂತನೆ ನಡೆಸಲಾಯಿತು. ಐನ್ಮನೆ, ಸಭಾಂಗಣ, ಕೊಡವರ, ಸಂಸ್ಕೃತಿ, ಪದ್ಧತಿ, ಪರಂಪರೆ, ಉಡುಪು ಪ್ರದರ್ಶನ, ಕೊಡಗಿನ ಪ್ರಮುಖ ಬೆಳೆ ಹಾಗೂ ಕೊಡವರ ಪೂರ್ವಿಕರು ಬಳಸುತ್ತಿದ್ದ ವಸ್ತುಪ್ರದರ್ಶನ ಇಡಲು ವಸ್ತು ಸಂಗ್ರಹಾಲಯ ಹಾಗೂ ಇನ್ನಿತರ ವ್ಯವಸ್ಥೆಗಳೊಂದಿಗೆ ಕೊಡವರ ಸಂಸ್ಕೃತಿ ಬಗ್ಗೆ ಪೂರಕ ಮಾಹಿತಿ ನೀಡುವುದು ಇದರ ಉದ್ದೇಶವಾಗಿತ್ತು. 2011ರ ಸೆ.21ರಂದು ಕಾಮಗಾರಿಗೆ ಚಾಲನೆ ನೀಡಲಾಯಿತು. ಒಪ್ಪಂದದ ಪ್ರಕಾರ ಗುತ್ತಿಗೆದಾರ ಕಾಮಗಾರಿಯನ್ನು 2012ರ ಸೆ.21ಕ್ಕೆ ಪೂರ್ಣಗೊಳಿಸಿ ಕಟ್ಟಡವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಬೇಕಾಗಿತ್ತು. 2013-14 ನೇ ಸಾಲಿನಲ್ಲಿ ಒಟ್ಟು 1 ಕೋಟಿ 68 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. ಆರಂಭದಲ್ಲಿ ಕಾಮಗಾರಿ ಚುರುಕಾಗಿ ನಡೆಯಿತಾದರೂ ಬಳಿಕ ನನೆಗುದಿಗೆ ಬಿದ್ದಿತು. ಪರಿಣಾಮ ಹೆರಿಟೇಜ್ ಸೆಂಟರ್ ಇನ್ನೂ ಗಗನಕುಸುಮವಾಗಿಯೇ ಉಳಿದಿದೆ. ಕೇಂದ್ರ ಸರಕಾರದ ಅನುದಾನದೊಂದಿಗೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಈ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಪ್ರಸ್ತುತ ಐದಾರು ವರ್ಷಗಳ ಹಿಂದೆ ನಿರ್ಮಿಸಿದ್ದ ಗೋಡೆ ಹಾಗೂ ಮೆಟ್ಟಿಲಿನ ಕಾಮಗಾರಿ ಗುಣಮಟ್ಟವಿಲ್ಲದೆ ಕಳಪೆಯಾಗಿದೆ. ಆದರಿಂದ ತುಕ್ಕು ಹಿಡಿದಿರುವ ಮರಗಳು ಹಾಗೂ ಶಿಥಿಲಗೊಂಡಿರುವ ಗೋಡೆಗಳು ಮತ್ತು ಕಂಬಗಳನ್ನು ತೆರವುಗೊಳಿಸಿ, ನೂತನವಾಗಿ ನಿರ್ಮಾಣ ಕಾರ್ಯಕ್ಕೆ ತಯಾರಿ ನಡೆದಿದೆ.
from India & World News in Kannada | VK Polls https://ift.tt/3hMt4qE