- ರವಿರಾಜ್ ಆರ್.ಗಲಗಲಿ, ಸರಕಾರಿ ಕಾಲೇಜ್ ಆದರೆ ಬೇಡ ಎನ್ನುವ ವಾತಾವರಣದ ಮಧ್ಯೆ ಇಲ್ಲೊಂದು ಸರಕಾರಿ ಕಾಲೇಜ್ನಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ! ಜಿಲ್ಲೆಯ ತಾಲೂಕಿನ ಯಡಹಳ್ಳಿಯ ಶಿವಲಿಂಗಪ್ಪ ಬಸಪ್ಪ ಹೊರಟ್ಟಿ ಕರ್ನಾಟಕ ಪಬ್ಲಿಕ್ ಶಾಲೆ ಮೂಲ ಸೌಕರ್ಯ ಹಾಗೂ ಶಿಕ್ಷಣದಿಂದ ರಾಜ್ಯದಲ್ಲೇ ಖ್ಯಾತಿ ಗಳಿಸಿದೆ. ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಮ್ಮೂರಿಗೆ ಅಂತಾರಾಷ್ಟ್ರೀಯ ಮಟ್ಟದ ಶಾಲೆಯಿರಬೇಕು ಎಂದು ಕನಸು ಕಂಡು ಇಂತಹ ಶಾಲೆಯನ್ನು ರೂಪಿಸಿದ್ದಾರೆ. ಪುಟ್ಟ ಗ್ರಾಮ ಯಡಹಳ್ಳಿಯಲ್ಲಿರುವ ಈ ಶಾಲೆಗೆ ಪ್ರವೇಶ ಪಡೆಯಲು ಮುಧೋಳದಂತಹ ನಗರ ಪ್ರದೇಶದಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ಇಲ್ಲಿರುವ ಸೌಲಭ್ಯಗಳೇ ವಿದ್ಯಾರ್ಥಿಗಳು, ಪಾಲಕರನ್ನು ಆಕರ್ಷಿಸುತ್ತವೆ. ಎಲ್ಕೆಜಿಯಿಂದ ದ್ವಿತೀಯ ಪಿಯುವರೆಗೆ 1, 231 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಇಲ್ಲಿ ಏನಿಲ್ಲ ಎಂದು ಕೇಳುವುದೇ ಸೂಕ್ತ. ಎರಡು ಕ್ಲಾಸ್ಗಳು ಸ್ಮಾರ್ಟ್ ಕ್ಲಾಸ್ ಸೌಲಭ್ಯ ಹೊಂದಿದ್ದರೆ, ಸೈನ್ಸ್ ವಿದ್ಯಾರ್ಥಿಗಳಿಗೆ ಮೂರು ಪ್ರಯೋಗಾಲಯಗಳಿವೆ. ಜಾಮೆಟ್ರಿ ವಿಷಯಕ್ಕಾಗಿಯೇ ಪ್ರತ್ಯೇಕ ಪ್ರಯೋಗಾಲಯವಿದೆ. ಇದು ಏಷ್ಯಾದಲ್ಲೇ ಏಕೈಕ ಲ್ಯಾಬೋರೆಟರಿ ಎಂಬ ಖ್ಯಾತಿ ಪಡೆದಿದೆ. 50 ಸಾವಿರ ಪುಸ್ತಕಗಳುಳ್ಳ ಲೈಬ್ರರಿ, ಬೃಹತ್ ಸಭಾಂಗಣ, ಹೈಟೆಕ್ ಶೌಚಾಲಯಗಳು, ಶಾಲೆ ಆವರಣದಲ್ಲಿ ಹೈ ಮಾಸ್ಟ್ ಲೈಟ್ಗಳು, ಸೋಲಾರ್ ವಿದ್ಯುತ್ ಬಳಕೆ, ಬಾಲಕ, ಬಾಲಕಿಯರಿಗಾಗಿ ವಸತಿ ನಿಲಯಗಳು ಇಲ್ಲಿನ ವಿಶೇಷತೆ. ಸುಮಾರು 500 ವಿದ್ಯಾರ್ಥಿಗಳು ಊಟ ಮಾಡಬಹುದಾದ ಬಿಸಿಯೂಟದ ಸಭಾಂಗಣವಿದೆ. ಸೈನ್ಸ್ ಪಾರ್ಕ್ನಲ್ಲಿ ವಿಜ್ಞಾನದ ಮಾದರಿ ಗಳು ಮಕ್ಕಳ ಕುತೂಹಲ ಇಮ್ಮಡಿಸುತ್ತವೆ. ರಸ್ತೆ ದಾಟಲು ವಿದ್ಯಾರ್ಥಿಗಳು ಪರದಾಡಬಾರದು ಎಂಬ ಕಾರಣಕ್ಕೆ ರಸ್ತೆ ಕೆಳಗಡೆ ಸಬ್ವೇ ನಿರ್ಮಿಸಲಾಗಿದೆ. ಬೃಹತ್ ಮೈದಾನವಿದೆ. ತಮ್ಮೂರಿನ ಪ್ರೀತಿ: ತಮ್ಮೂರಿನ ಶಾಲೆಯನ್ನು ಮಾದರಿಯಾಗಿಸಬೇಕು ಎಂದುಕೊಂಡ ಹೊರಟ್ಟಿಯವರು 2007ರಲ್ಲಿ ತಂದೆ ಶಿವಲಿಂಗಪ್ಪ ಹೆಸರಿನಲ್ಲಿ 6 ಎಕರೆ ಜಾಗೆ ಖರೀದಿಸಿ ಶಾಲೆಗೆ ದಾನ ನೀಡಿದರು. ಶಿಕ್ಷಣ ಸಚಿವರಿದ್ದ ಅವಧಿಯಲ್ಲಿ ಶಾಲೆಯನ್ನು ದತ್ತು ಪಡೆದು ಕಟ್ಟಡದ ಕಾಮಗಾರಿ ಆರಂಭಿಸಲಾಯಿತು. ಹೊರಟ್ಟಿಯವರ ‘ಅವ್ವ’ ಸೇವಾ ಟ್ರಸ್ಟ್ ಮೂಲಕ ಎಸ್ಡಿಎಂಸಿ ಹಾಗೂ ಸ್ಥಳೀಯ ಸಮಿತಿ ನೇತೃತ್ವದಲ್ಲಿ ಶಾಲೆಯ ನಿರ್ವಹಣೆ ನಡೆದಿದೆ. ಶಾಸಕರು, ವಿಧಾನಪರಿಷತ್ ಸದಸ್ಯರು, ಸ್ವಾಮೀಜಿಗಳು, ಉದ್ಯಮಿಗಳು ಶಾಲೆಗೆ ಹಣ, ವಸ್ತುಗಳನ್ನು ದೇಣಿಗೆ ನೀಡಿದ್ದಾರೆ. ಈವರೆಗೆ ಅಂದಾಜು 30 ಕೋಟಿ ರೂ. ವ್ಯಯಿಸಲಾಗಿದೆ. ಉತ್ತಮ ಶಿಕ್ಷಣಕ್ಕೂ ಶಾಲೆ ಹೆಸರಾಗಿದ್ದು, ವಿದ್ಯಾರ್ಥಿಗಳ ಉತ್ತೀರ್ಣತೆ ಪ್ರಮಾಣವೂ ಹೆಚ್ಚಾಗಿದೆ. ವಿದ್ಯಾರ್ಥಿನಿಯರಿಗೆ ಕೆಂಪು, ವಿದ್ಯಾರ್ಥಿಗಳಿಗೆ ನೀಲಿ ಬಣ್ಣದ ಡೆಸ್ಕ್ಗಳನ್ನು ಹೊರಟ್ಟಿಯವರೇ ಕೊಡುಗೆಯಾಗಿ ನೀಡಿದ್ದಾರೆ. 10 ಸ್ಮಾರ್ಟ್ಕ್ಲಾಸ್ಗಳು ರೇಖಾ ಗಣಿತದ ಲ್ಯಾಬೋರೇಟರಿ ಸ್ಥಾಪಿಸುವುದು ಮುಂದಿನ ಗುರಿಯಾಗಿದೆ. ಶಾಲೆಯ ಕಾಂಪೌಂಡ್ಗೆ ತಂತಿಯ ಬೇಲಿ ಅಳವಡಿಸಬೇಕಿದೆ. ನನ್ನೂರಿನ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಬೃಹತ್ ನಗರಗಳ ಅತ್ಯಾಧುನಿಕ ಮಾದರಿಯ ಕಾಲೇಜ್ಗಳಂತೆ ಶಿಕ್ಷಣ ಪಡೆಯಬೇಕು ಎನ್ನುವುದು ನನ್ನ ಕನಸು. ಇದಕ್ಕಾಗಿಯೇ ಅವ್ವ ಸೇವಾ ಟ್ರಸ್ಟ್ ಮೂಲಕ ಶಾಲೆ ಅಭಿವೃದ್ಧಿ ಪಡಿಸಲಾಗುತ್ತಿದೆ. - ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸದಸ್ಯ ವಿಧಾನಪರಿಷತ್ ಸದಸ್ಯ ಇಂತಹ ಸೌಲಭ್ಯ ಬೇರೆ ಸರಕಾರಿ ಕಾಲೇಜಿನಲ್ಲಿ ಇಲ್ಲವೇ ಇಲ್ಲ. ಇಲ್ಲಿ ಶಿಕ್ಷಣ ಪಡೆಯುತ್ತಿರುವುದಕ್ಕೆ ನಾನು ಧನ್ಯ. ಹೊರಟ್ಟಿ ಸರ್ ನಮಗೆ ಪ್ರೇರಣೆ ನೀಡುತ್ತಾರೆ. ಮಧ್ಯಾಹ್ನ ಪೌಷ್ಠಿಕವಾದ ಊಟ ನೀಡಲಾಗುತ್ತದೆ. ಶಿಕ್ಷಕರ ಬೋಧನೆಯೂ ಅತ್ಯುತ್ತಮವಾಗಿದೆ. -ಚೈತ್ರಾ ಅಂಟ್ಯಾಳ, ವಿದ್ಯಾರ್ಥಿನಿ
from India & World News in Kannada | VK Polls https://ift.tt/37t5Ilx