- ನಾಗರಾಜು ಎ., ದೊಡ್ಡಬಳ್ಳಾಪುರ 190 ಕಿಮೀ ಉದ್ದದ ಅರ್ಕಾವತಿ ನದಿ ನಂದಿಬೆಟ್ಟ ಮತ್ತು ಶಿವಗಂಗೆ ಬೆಟ್ಟಗಳಿಂದ ಹರಿದು ಉಪನದಿಗಳಾಗಿ ರಾಮನಗರದ ಸಂಗಮದಲ್ಲಿ ಕಾವೇರಿ ನದಿ ಸೇರುತ್ತದೆ. ಒಂದು ಕಾಲದಲ್ಲಿ 1,775 ಕೆರೆಗಳ ಕೋಡಿಗಳ ಮೂಲಕ ಕಾಲುವೆ ರೂಪದಲ್ಲಿ ಹರಿಯುತ್ತಿದ್ದ ಅರ್ಕಾವತಿ ನದಿ ಬಯಲುಸೀಮೆಯ ಅವೈಜ್ಞಾನಿಕ ಕೃಷಿ ಪದ್ಧತಿಗಳಿಂದ, ಕಾಲುವೆಗಳ ಒತ್ತುವರಿಗಳಿಂದಾಗಿ ಕಣ್ಮರೆಯಾಗುತ್ತಿವೆ. ಏನಾಯ್ತು ಪುನಶ್ಚೇತನ?: ಬೆಂಗಳೂರಿಗೆ ನೀರು ಸರಬರಾಜು ಮಾಡುವ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರಿನ ಪ್ರಮಾಣ ಹೆಚ್ಚಾಗಲೆಂದು 2011-12ರಲ್ಲಿ ಅರ್ಕಾವತಿ ನದಿ ಪುನಶ್ಚೇತನ ಕಾಮಗಾರಿ ಆರಂಭವಾಯಿತು. ಮೊದಲ ಹಂತದಲ್ಲಿ 22.43 ಕೋಟಿ ಅಂದಾಜು ವೆಚ್ಚದಲ್ಲಿ ಫೀಡರ್ ಕಾಲುವೆ ದುರಸ್ತಿ ಆರಂಭವಾಯಿತು. ಕಾವೇರಿ ನೀರಾವರಿ ನಿಗಮದ ಉಸ್ತುವಾರಿಯಲ್ಲಿ ನಡೆದ ಈ ಯೋಜನೆ ಅನ್ವಯ ನಂದಿಬೆಟ್ಟ-ಶಿವಗಂಗೆ-ತಿಪ್ಪಗೊಂಡನಹಳ್ಳಿ ನಡುವಿನ 395 ಕಾಲುವೆಗಳ ದುರಸ್ತಿಗೆ ಉದ್ದೇಶಿಸಲಾಗಿತ್ತು. ಆದರೆ, ದುರಸ್ತಿಗೂ ಮುನ್ನ ನಡೆಯಬೇಕಿದ್ದ ಸರ್ವೆ ಕಾರ್ಯವೇ ನಡೆಯದೆ, ಕಾಮಗಾರಿ ಸಂಪೂರ್ಣವಾಗಲಿಲ್ಲ. ಈ ಬಗ್ಗೆ ಅರ್ಕಾವತಿ, ಕುಮುದ್ವತಿ ನದಿ ಪುನಶ್ಚೇತನ ಸಮಿತಿ 31 ಸಾವಿರ ಕರಪತ್ರಗಳ ಮೂಲಕ ಕಾಮಗಾರಿ ನಡೆಯುವಾಗ ಜನರು ಭಾಗವಹಿಸುವಂತೆ ಜಾಗೃತಿ ಮೂಡಿಸಿತು. ಇಷ್ಟಾದರೂ ಕಾಮಗಾರಿ ಮಾತ್ರ ಪೂರ್ಣಗೊಳ್ಳಲಿಲ್ಲ ಎನ್ನುವುದು ವಾಸ್ತವ. ಜೀವಸೆಲೆಗೆ ಪ್ರಯತ್ನಗಳು: ಅರ್ಕಾವತಿ ನದಿಯ ಪುನಶ್ಚೇತನಕ್ಕೆ ಹಲವಾರು ರೀತಿಯಲ್ಲಿ ಪ್ರಯತ್ನ ನಡೆದಿದೆ. ಅರ್ಕಾವತಿ ಜಲಚೇತನ ಸಮಿತಿ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ, ಆಕಾಶ್, ಜನ ಜಾಗೃತಿ ಸಮಿತಿ, ನವಚೇತನ ಟ್ರಸ್ಟ್, ನೆಮ್ಮದಿ ಟ್ರಸ್ಟ್, ಚನ್ನರಾಯಸ್ವಾಮಿ ಜಲ ಸಂಪನ್ಮೂಲ ಅಭಿವೃದ್ಧಿ ಸಮಿತಿ, ನಾಗದಳ, ಕುಮುದ್ವತಿ ನೆಲ ಜಲ ಸಂರಕ್ಷಣ ಸಮಿತಿ, ಕುಮುದ್ವತಿ ನದಿ ಪುನಶ್ಚೇತನ ಸಮಿತಿ, ಅರ್ಕಾವತಿ ಕುಮುದ್ವತಿ ನದಿ ಪುನಶ್ಚೇತನ ಸಮಿತಿ, ಆರ್ಟ್ ಆಫ್ ಲಿವಿಂಗ್ ಮುಂತಾದ ಸಂಘ ಸಂಸ್ಥೆಗಳು ಮತ್ತು ಸ್ವಯಂಸೇವಕರ ಗುಂಪುಗಳು ಅರ್ಕಾವತಿ ನದಿ ಉಳಿವಿಗೆ ಸಾಕಷ್ಟು ಸಂಸ್ಥೆಗಳು ಇಂದಿಗೂ ಶ್ರಮಿಸುತ್ತಿವೆ. 1998-99ರಲ್ಲೇ ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್, ಸನ್ಮತಿ ಮತ್ತು ಮಾಜಿ ಸಚಿವ ಎ.ಲಕ್ಷಿತ್ರ್ಮೕಸಾಗರ್ ಅವರನ್ನು ಒಳಗೊಂಡು ಸಾರ್ವಜನಿಕರಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ಸುತ್ತ ತಲೆ ಎತ್ತಲಿದ್ದ ವಸತಿ ಸಮುಚ್ಚಯ ನಿರ್ಮಾಣ ತಡೆಯಲು ಪ್ರಯತ್ನ ಮಾಡಲಾಗಿತ್ತು. 2000-2005ರ ಅವಧಿಯಲ್ಲಿ ದೊಡ್ಡಬಳ್ಳಾಪುರದ ಕೈಗಾರಿಕಾ ಮಾಲಿನ್ಯವನ್ನು ತಡೆಯಲು ಕರ್ನಾಟಕ ವಿಮೋಚನಾ ರಂಗ, ಕನ್ನಡ ಪರ ಸಂಘಟನೆಗಳು, ಸಂವಾದ, ಜನಧ್ವನಿ ಯುವ ವೇದಿಕೆ, ಜನಜಾಗೃತಿ ಸಮಿತಿಗಳ ನಾಯಕತ್ವದಲ್ಲಿ ಕೈಗಾರಿಕಾ ಮಾಲಿನ್ಯದ ವಿರುದ್ಧ ಯಶಸ್ವಿ ಹೋರಾಟ ನಡೆಸಿದ್ದವು. 2006ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಚನ್ನರಾಯಸ್ವಾಮಿ ಬೆಟ್ಟ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 30 ಕೆರೆಗಳ ಪುನಶ್ಚೇತನವನ್ನು 2019ರಲ್ಲಿ ಜನರ ಸಹಭಾಗಿತ್ವದಲ್ಲಿ ಮಾಡಲಾಯಿತು. ಆದರೆ, ಕೆರೆಗಳ ಪುನಶ್ಚೇತನವಾದರೂ, ಬೇಸಿಗೆ ಆರಂಭಕ್ಕೂ ಮುನ್ನವೇ ಕೆರೆಗಳು ಒಣಗಿವೆ. ಕೆರೆ ಪುನಶ್ಚೇತನಕ್ಕಿಂತಲೂ ಅಗತ್ಯವಾಗಿ ಕೆರೆಗಳಿಗೆ ನೀರನ್ನು ಹೊತ್ತು ತರಬಲ್ಲ ಕಾಲುವೆಗಳ ಅತಿಕ್ರಮ ಒತ್ತುವರಿಯನ್ನು ತೆರವು ಮಾಡಿದ್ದೇ ಆದಲ್ಲಿಅರ್ಕಾವತಿಗೆ ಜೀವ ಬರಲಿದೆ. ಅರ್ಕಾವತಿ ನದಿ ಉಗಮ ಸ್ಥಾನ: ನಂದಿಬೆಟ್ಟ, ಶಿವಗಂಗೆ ಕಾವೇರಿ ನದಿ ಸೇರುವುದು: ರಾಮನಗರದ ಸಂಗಮ ಅವಲಂಬನೆ: ತಿಪ್ಪಗೊಂಡನಹಳ್ಳಿ ಜಲಾಶಯ ಎಷ್ಟು ಉದ್ದ: 190 ಕಿಮೀ ಜಲಾನಯನ ಪ್ರದೇಶ: 4253 ಚದರ ಕಿಮೀ ಉಪನದಿಗಳು: ಕುಮುದ್ವತಿ, ವೃಷಭಾವತಿ, ಸುವರ್ಣಮುಖಿ, ಕುಟ್ಟೆ ಹೊಳೆ ಒಟ್ಟು ಕೆರೆಗಳು: 1,775 ನದಿ ಕಣ್ಮರೆಯಾಗಲು ಕಾರಣವೇನು? (ಇಸ್ರೋ-ಇನ್ರಿಮ್ಟ್, ಝೂಮ್ಟೆಕ್, ಅಶೋಕ ಪರಿಸರ ಮತ್ತು ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆಗಳ ಅಧ್ಯಯನ ವರದಿ ಅನ್ವಯ)
- ನಗರೀಕರಣ ಏರಿಕೆ, ಕೃಷಿ ಪ್ರದೇಶ ಕಡಿಮೆಯಾಗಿದೆ
- ವಾಣಿಜ್ಯ ಬೆಳೆ ಅಧಿಕವಾಗಿರುವುದು
- ಅಂತರ್ಜಲ ಅವಲಂಬನೆ ಏರಿಕೆ. ಕೆರೆ, ಕಾಲುವೆಗಳ ಒತ್ತುವರಿ
- ಮಳೆನೀರಿನಲ್ಲಿ ಸರಾಸರಿ ಶೇ.17ರಷ್ಟು ಹರಿವಿದ್ದು, ಸದ್ಯ ಶೇ.12.5ರಷ್ಟು ಕಡಿಮೆಯಾಗಿದೆ
- ಕೃಷಿಯೇತರ ಕೆಲಸಗಳಿಗೆ ನೀರಿನ ಬಳಕೆ ಏರಿಕೆ
- ಜಲಾನಯನ ಪ್ರದೇಶದಲ್ಲಿಶೇ.20ರಷ್ಟು ನೀಲಗಿರಿ
- ಮಾಲಿನ್ಯ ತಡೆದು, ಕಲ್ಲು-ಮರಳು ಗಣಿಗಾರಿಕೆಗೆ ತಡೆ
- ಒತ್ತುವರಿಗೆ ತಡೆ
- ಜಲಾನಯನ ಮಟ್ಟದ ಸಂಸ್ಥೆಯ ಸೃಷ್ಟಿ
- ಸಾವಯವ ಕೃಷಿಗೆ ಆದ್ಯತೆ
- ಅರಣ್ಯೀಕರಣಕ್ಕೆ ಒತ್ತು
- ಕಡಿಮೆ ನೀರನ್ನು ಅವಲಂಭಿಸುವ ಬೆಳೆಗೆ ಸೂಕ್ತ ನೀರಾವರಿ ತಂತ್ರಜ್ಞಾನ ಅಳವಡಿಕೆ
- ವರ್ಷಕ್ಕೆ 2 ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ
- ಮಳೆ ನೀರು ಕೊಯ್ಲುಮೂಲಕ ನೀರಿನ ಸ್ವಾವಲಂಬನೆಗೆ ಆದ್ಯತೆ
- ನದಿ ಪುನಶ್ಚೇತನವನ್ನು ಪಾಲ್ಗೊಳ್ಳುವಿಕೆಯಲ್ಲಿಜನಾಂದೋಲನ
from India & World News in Kannada | VK Polls https://ift.tt/38k4713