
- ಶಶಿಧರ ಹೆಗಡೆ, ಬೆಂಗಳೂರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಲಿರುವ 'ಜನಪ್ರಿಯ ಬಜೆಟ್'ಗೆ ಸಾಲದ ಭಾರ ಸವಾಲಾಗಿದೆ. 'ವಿಪರೀತ ಸಾಲ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಿಲ್ಲದ್ದರಿಂದ ಯಾವುದೇ ಹೊಸ ಯೋಜನೆ ಪ್ರಕಟಿಸಬಾರದು. ಮತ್ತಷ್ಟು ಸಾಲವನ್ನೂ ತೆಗೆದುಕೊಳ್ಳಬಾರದು' ಎಂದು ಹಣಕಾಸು ಇಲಾಖೆ ಪಟ್ಟು ಹಾಕಿದೆ. ಹಾಗಾಗಿ ಬಿಎಸ್ವೈ ಅವರ ಬಹು ನಿರೀಕ್ಷಿತ ಆಯವ್ಯಯದ ಮೇಲೆ ವೆಚ್ಚ ಕಡಿತದ ಕಾರ್ಮೋಡ ಕವಿದಂತಾಗಿದೆ. ಸಂಪನ್ಮೂಲ ಕ್ರೋಡೀಕರಣದ ವಿಚಾರದಲ್ಲಿದೇಶದಲ್ಲೆ ಕರ್ನಾಟಕ ಮುಂಚೂಣಿಯಲ್ಲಿದೆ. ಈ ನಡುವೆಯೂ ಆರ್ಥಿಕ ಸಂಕಷ್ಟ ಎದುರಾಗಲು ಹಲವಾರು ಕಾರಣಗಳಿವೆ. ಪ್ರಮುಖವಾಗಿ ಕಳೆದ ಐದಾರು ವರ್ಷದಲ್ಲಿ ದೂರದೃಷ್ಟಿಯಿಲ್ಲದೆ ಸಾಲ ತೆಗೆದುಕೊಳ್ಳಲಾಗಿದೆ. ಆಸ್ತಿ ಸೃಜಿಸುವುದರ ಬದಲು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಜನಪ್ರಿಯ ಯೋಜನೆಗಳಿಗೆ ಮಣೆ ಹಾಕಲಾಗಿದೆ. ಜಿಎಸ್ಟಿ ಜಾರಿ ಬಳಿಕ ನಾನಾ ವಲಯದಲ್ಲಿನ ತೆರಿಗೆ ಪರಿಷ್ಕರಿಸುವ ಸ್ವಾತಂತ್ರ್ಯವನ್ನೂ ಕಳೆದುಕೊಳ್ಳಲಾಗಿದೆ. ಕೇಂದ್ರ ಸರಕಾರವೂ ಜಿಎಸ್ಟಿ ಪರಿಹಾರವನ್ನು ಸಕಾಲಕ್ಕೆ ಬಿಡುಗಡೆ ಮಾಡುತ್ತಿಲ್ಲ. ಇಷ್ಟು ಸಾಲದೆಂಬಂತೆ ಕೇಂದ್ರದ ಸಹಾಯಾನುದಾನ ಕಡಿತಗೊಳ್ಳುತ್ತಿದೆ. 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ನಿರಾಶೆಯ ಮೂಟೆಗಳನ್ನೇ ಹೊತ್ತು ತರಲಿದೆ. 7ನೇ ಬಜೆಟ್ ಮಂಡಿಸುವ ತಯಾರಿಯಲ್ಲಿರುವ ಯಡಿಯೂರಪ್ಪ ಅವರ ಉತ್ಸಾಹಕ್ಕೆ ಇದರ ಪರಿಣಾಮವಾಗಿ ಕಡಿವಾಣ ಬಿದ್ದಂತಾಗಿದೆ. ಮುಖ್ಯವಾಗಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ತನ್ನ ಕೊಡುಗೆಯೇನು ಎನ್ನುವುದನ್ನು ಈ ಬಜೆಟ್ ಮೂಲಕ ಸರಕಾರ ಹೇಳಬೇಕಿದೆ. ಯಾಕೆಂದರೆ 2019ರ ಜುಲೈ 26ರಂದು ಬಿಎಸ್ವೈ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೂ ಅದಕ್ಕೆ ಮುನ್ನ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದ ಆಯವ್ಯಯವನ್ನೇ ಮುಂದುವರಿಸಿದ್ದರು. ಅದಾಗಲೇ 2019-20ರ 1 ತ್ರೈಮಾಸಿಕ ಪೂರ್ಣಗೊಂಡಿದ್ದರಿಂದ ಹೊಸ ಬಜೆಟ್ ಮಂಡಿಸುವ ಸಾಧ್ಯತೆಯೂ ಇರಲಿಲ್ಲ. ಜತೆಗೆ ಪ್ರವಾಹದ ವಿಪತ್ತು ಇತ್ತು. ಹಾಗಾಗಿ ಈ ಬಾರಿಯ ಬಜೆಟ್ನಲ್ಲಿ ಏನಾದರೂ ಮ್ಯಾಜಿಕ್ ಮಾಡಲೇಬೇಕಾದ ಒತ್ತಡದಲ್ಲಿ ಬಿಎಸ್ವೈ ಇದ್ದಾರೆ. ಹಣಕಾಸು ಇಲಾಖೆಯ ಉನ್ನತ ಮೂಲಗಳ ಪ್ರಕಾರ, ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಮಿತಿಯ ಅನುಸಾರವೇ ಈವರೆಗೆ ಕೊಂಡುಕೊಂಡ ಸಾಲವಿದೆ. 2019-20ರ ಬಜೆಟ್ನಂತೆ ರಾಜ್ಯ ಸರಕಾರದ ಒಟ್ಟು ಸಾಲದ ಮೊತ್ತ 3,27,209 ಕೋಟಿ ರೂ. ಇದೆ. ಇದು ಬಜೆಟ್ ಗಾತ್ರಕ್ಕಿಂತಲೂ ಅಧಿಕ. ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿರುವ ಹಾಲಿ ಬಜೆಟ್ನ ಗಾತ್ರ 2,34,153 ಕೋಟಿ ರೂ. ಇದೆ. ಹೊಸ ಬಜೆಟ್ ಗಾತ್ರ 2.50 ಲಕ್ಷ ಕೋಟಿ ರೂ. ದಾಟಲಿದೆ. ಸದ್ಯಕ್ಕೆ ತೆಗೆದುಕೊಂಡಿರುವ ಸಾಲದ ಪ್ರಮಾಣ ವಿತ್ತೀಯ ಹೊಣೆಗಾರಿಕೆಯ ಪರಧಿಯಲ್ಲೇ ಇದೆ. ಈ ದೃಷ್ಟಿಯಿಂದ ನೋಡಿದರೆ ಪುನಃ ಸಾಲ ಪಡೆಯಬಹುದು. ಆದರೆ, ಈ ಮಾನದಂಡವೊಂದನ್ನೇ ಆಧಾರವಾಗಿಟ್ಟುಕೊಂಡು ಹೆಚ್ಚಿನ ಸಾಲ ಮಾಡುವುದರಿಂದ ಭವಿಷ್ಯದಲ್ಲಿ ತೊಂದರೆಯಾಗಲಿದೆ. ಹೊಸ ಯೋಜನೆಗಳನ್ನು ಪ್ರಕಟಿಸುವ ಭರದಲ್ಲಿ ಜನಪ್ರಿಯತೆಗೆ ಒತ್ತು ಕೊಟ್ಟರೆ ಅದರಿಂದಲೂ ಅಪಾಯ ತಪ್ಪಿದ್ದಲ್ಲ. ಇದೇ ಅಂಶವನ್ನು ಹಣಕಾಸು ಇಲಾಖೆ ಅಧಿಕಾರಿಗಳು ಸಿಎಂ ಗಮನಕ್ಕೆ ತಂದಿದ್ದಾರೆ. ವೆಚ್ಚ ಕಡಿತಕ್ಕೂ ಗಂಭೀರ ಕ್ರಮ ಕೈಗೊಳ್ಳಬೇಕು ಎಂಬ ಸಲಹೆ ನೀಡಿದ್ದಾರೆ. ಇದರ ಹಿನ್ನೆಲೆಯಲ್ಲಿಕಡೆಯ ಸುತ್ತಿನ ಕಸರತ್ತು ನಡೆಸುತ್ತಿರುವ ಸಿಎಂ ಬಿಎಸ್ವೈ ವೆಚ್ಚ ಕಡಿತದ ಬಗ್ಗೆಯೂ ಆಲೋಚಿಸುತ್ತಿದ್ದಾರೆ. ಜಿಎಸ್ಟಿ ಜಾರಿ ಬಳಿಕ ತೆರಿಗೆ ಪರಿಷ್ಕರಣೆಯಲ್ಲಿಅಬಕಾರಿ ಹೊರತು ಪಡಿಸಿದರೆ ಬೇರೆ ಆದಾಯ ಮೂಲಗಳನ್ನು ನೆಚ್ಚಿಕೊಳ್ಳುವಂತಿಲ್ಲ. ಹಾಗೆಯೇ ಪೆಟ್ರೋಲ್, ಡೀಸೆಲ್ ಇನ್ನಿತ ವಸ್ತುಗಳ ಮೇಲೆ ಸೆಸ್ ಜಾಸ್ತಿ ಮಾಡಿದರೆ ಸಾರ್ವಜನಿಕ ವಲಯದಲ್ಲಿವಿರೋಧ ವ್ಯಕ್ತವಾಗುತ್ತದೆ. ಹಾಗಾಗಿ ಆರ್ಥಿಕ ಬಿಕ್ಕಟ್ಟಿನ ನಡುವೆ ಹೊಸ ಬಜೆಟ್ ಕಟ್ಟುತ್ತಿರುವ ಯಡಿಯೂರಪ್ಪ ತಂತಿಯ ಮೇಲಿನ ನಡಿಗೆಯಲ್ಲಿದ್ದಾರೆ. ವೆಚ್ಚ ಕಡಿತ ಮಾಡಿದರೆ ಸಿದ್ದರಾಮಯ್ಯ ಸರಕಾರದ ಅವಧಿಯ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಕಾಲದ ಕೆಲ ಯೋಜನೆಗಳು ಬರಖಾಸ್ತು ಆಗಬಹುದು. ಉಳಿದಂತೆ ಕೃಷಿ, ನೀರಾವರಿಗೆ ಒತ್ತು ನೀಡಲಿದ್ದಾರೆ. ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲೂಸುಧಾರಣೆ ತರಲು ಅಗಾಧ ಸಂಪನ್ಮೂಲ ಅಗತ್ಯವಿದೆ. ಇದನ್ನು ಸರಿದೂಗಿಸುವ ಸವಾಲು ಸಿಎಂ ಮುಂದಿದೆ. ಕೇಂದ್ರದಿಂದಲೂ ಹೊಡೆತಕೇಂದ್ರ ಸರಕಾರದಿಂದ 2019-20ರ ತೆರಿಗೆ ಹಂಚಿಕೆಯಲ್ಲಿ8,887 ಕೋಟಿ ರೂ. ಕೊರತೆಯಾಗಲಿದೆ. ಜಿಎಸ್ಟಿ ಪರಿಹಾರದಲ್ಲಿ 4,600 ಕೋಟಿ ರೂ. ಬರುವುದು ಬಾಕಿಯಿದೆ. ಇನ್ನು 15ನೇ ಹಣಕಾಸು ಆಯೋಗದ ಅಂದಾಜಿನಂತೆ ಹೋದರೆ ಕೇಂದ್ರದ ತೆರಿಗೆ ಹಂಚಿಕೆಯಲ್ಲಿ 2020-21ರಲ್ಲಿ11,215 ಕೋಟಿ ರೂ. ಕಡಿತವಾಗಲಿದೆ. ಭವಿಷ್ಯದಲ್ಲಿ ಈ ಕಡಿತದ ಪ್ರಮಾಣ ಹೆಚ್ಚಲಿದ್ದು ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಜಿಎಸ್ಟಿ ಬಂದ ಬಳಿಕ ರಾಜ್ಯಗಳಿಗೆ ತೆರಿಗೆ ಸ್ವಾತಂತ್ರ್ಯವಿಲ್ಲದಂತಾಗಿದೆ. ರಾಜ್ಯದಲ್ಲಿ ಸಾಕಷ್ಟು ಸವಾಲುಗಳಿದ್ದು, ವಿತ್ತೀಯ ಹೊಣೆಗಾರಿಕೆ ಕಾಯಿದೆ ಅನುಸಾರ ಸಾಲ ತೆಗೆದುಕೊಂಡರೆ ತಪ್ಪಲ್ಲ. ಆರ್ಥಿಕ ಶಿಸ್ತು ಕಾಯ್ದುಕೊಳ್ಳುವುದು ಬಹಳ ಮುಖ್ಯ. - ಡಾ. ಎಸ್. ಸುಬ್ರಹ್ಮಣ್ಯ, ಹಣಕಾಸು ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ
from India & World News in Kannada | VK Polls https://ift.tt/2TgUsnP