ಮುಂಬಯಿ: ಮಹಾರಾಷ್ಟ್ರದಲ್ಲಿ ಕಳೆದ ಅಕ್ಟೋಬರ್ -ನವೆಂಬರ್ ತಿಂಗಳಿನಲ್ಲಿಎಲ್ಲಪಕ್ಷಗಳು ಸರಕಾರ ರಚನೆ ಕಸರತ್ತಿನಲ್ಲಿ ಮಗ್ನವಾಗಿದ್ದಾಗಲೇ 300ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಬೆಳೆ ಹಾನಿಯಿಂದಾಗಿ ಅಕ್ಟೋಬರ್ನಿಂದಲೇ ಅಲ್ಲಲ್ಲಿ ಪ್ರಕರಣಗಳು ವರದಿಯಾಗ ತೊಡಗಿದವು. ನವೆಂಬರ್ ವೇಳೆಗೆ ಆತ್ಮಹತ್ಯೆಯ ಸಮೂಹ ಸನ್ನಿ ಉಲ್ಬಣಿಸಿತು. ಆ ನಿರ್ದಿಷ್ಟ ಅವಧಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಪ್ರಮಾಣ ಶೇ.61ರಷ್ಟು ಹೆಚ್ಚಾಯಿತು ಎಂದು ಮಹಾರಾಷ್ಟ್ರ ಕಂದಾಯ ಇಲಾಖೆಯ ವರದಿ ತಿಳಿಸಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿಇಷ್ಟೊಂದು ಗರಿಷ್ಠ ಸಂಖ್ಯೆಯ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾದದ್ದು ಇದೇ ಮೊದಲು ಎಂದು ವರದಿ ವಿವರಿಸಿದೆ. 2015ರ ನವೆಂಬರ್ನಲ್ಲಿ 300 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಾರಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಳಗೊಳ್ಳಲು ಅಕಾಲಿಕ ಸುರಿದ ಮಳೆಯೇ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತಮ ಫಸಲು ಬಂದಿದ್ದ ಅವಧಿಯಲ್ಲಿಯೇ ಹಠಾತ್ ಎದುರಾದ ಅತಿವೃಷ್ಟಿ ಯಿಂದಾಗಿ ಬೆಳೆದು ನಿಂತ ಫಸಲು ನೆಲಸಮವಾಗಿದೆ. ಇದರಿಂದ ರೈತರು ದಿಕ್ಕೆಟ್ಟು ಹೋದರು. ಬರಪೀಡಿತ ಮರಾಠವಾಡ ಪ್ರದೇಶದಲ್ಲಿ 120 ಮತ್ತು ವಿದರ್ಭ ಪ್ರದೇಶದಲ್ಲಿ 112 ರೈತರು ಆತ್ಮಹತ್ಯೆ ಮಾಡಿಕೊಂಡರು. 2019ರ ಸಾಲಿನಲ್ಲಿ ರಾಜ್ಯದಲ್ಲಿಒಟ್ಟು 2,532 ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
from India & World News in Kannada | VK Polls https://ift.tt/2N9400L