ಹೊಸದಿಲ್ಲಿ: ಭಾರತದ ಚುನಾವಣಾ ರಾಜಕಾರಣದಲ್ಲಿ ಚಾಣಾಕ್ಯ ಎಂದೇ ಹೆಸರಾದ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಗುಸು ಗುಸು ಹಲವು ತಿಂಗಳಿನಿಂದ ಕೇಳಿ ಬರುತ್ತಲೇ ಇದೆ. ಇದೀಗ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಸಂಬಂಧ ಪಕ್ಷದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆದಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಲವು ಆಂಗ್ಲ ಮತ್ತು ಹಿಂದಿ ಮಾಧ್ಯಮಗಳು ವರದಿ ಮಾಡಿವೆ. ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆಗೊಳಿಸುವ ಸಂಬಂಧ ಪಕ್ಷದ ಹಂಗಾಮಿ ಅಧ್ಯಕ್ಷೆ ಹಿರಿಯ ನಾಯಕರ ಜತೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಇವರಲ್ಲಿ ಹೆಚ್ಚಿನವರು ಅವರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ. ಆದರೆ ಅಂತಿಮ ತೀರ್ಮಾನವನ್ನು ಸೋನಿಯಾ ಗಾಂಧಿ ತೆಗೆದುಕೊಳ್ಳಲಿದ್ದು, ಅವರ ಪಕ್ಷ ಸೇರ್ಪಡೆ ಇನ್ನೂ ಅಂತಿಮ ಘಟ್ಟಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆಗಿನ ತಮ್ಮ ಸಖ್ಯದಿಂದ ಆರಂಭಿಸಿ, ಇತ್ತೀಚಿನವರೆಗೂ ತೆರೆಮರೆಯಲ್ಲಿ ಇದ್ದೇ ರಣತಂತ್ರಗಳನ್ನು ಹೆಣೆಯುತ್ತಿದ್ದ ಪ್ರಶಾಂತ್ ಕಿಶೋರ್ ಕೆಲ ವರ್ಷಗಳ ಹಿಂದೆ ಅಧಿಕೃತವಾಗಿ ಜಾತ್ಯಾತೀತ ಜನತಾದಳ ಸೇರಿ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ನಿತೀಶ್ ಕುಮಾರ್ ಜತೆಗಿನ ವೈಮನಸ್ಸಿನಿಂದ ಅವರು ಜೆಡಿಯುನಿಂದ ಹೊರಬರಬೇಕಾಯಿತು. ಅರ್ಥಾತ್ ಪಕ್ಷವೇ ಅವರಿಗೆ ಗೇಟ್ಪಾಸ್ ನೀಡಿತು. ಬಳಿಕ ಮತ್ತದೇ ತಮ್ಮ ಚುನಾವಣಾ ತಂತ್ರಗಾರಿಕೆಯ ವೃತ್ತಿಯನ್ನು ಮುಂದುವರಿಸಿದ್ದ ಪ್ರಶಾಂತ್ ಕಿಶೋರ್ ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಹಾಗೂ ತಮಿಳುನಾಡಿನಲ್ಲಿ ಡಿಎಂಕೆಗೆ ಭರ್ಜರಿ ಜಯ ತಂದಿತ್ತಿದ್ದರು. ಆದರೆ ಗೆಲುವಿನ ಬಳಿಕ ತಾವಿನ್ನು ಈ ತಂತ್ರಗಾರಿಕೆಯ ಕೆಲಸ ಮಾಡುವುದಿಲ್ಲ ಎಂದು ಪರದೆ ಹಿಂದಿನ ಆಟಕ್ಕೆ ನಿವೃತ್ತಿ ಘೋಷಿಸಿದ್ದರು. ಬಳಿಕ ಕಾಂಗ್ರೆಸ್ನ ಮೂವರೂ ಗಾಂಧಿಗಳ ಜತೆ ಜುಲೈನಲ್ಲಿ ಸುಧೀರ್ಘ ಮಾತುಕತೆ ನಡೆಸಿದ್ದರು. ಅಲ್ಲಿಂದ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಪ್ರಿಯಾಂಗಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಜತೆಗಿನ ಸಭೆಯಲ್ಲಿ ಪಕ್ಷದಲ್ಲಿ ಅವರಿಗೆ ನೀಡಬೇಕಾದ ಸ್ಥಾನದ ಬಗ್ಗೆಯೂ ವಿಸ್ತೃತ ಚರ್ಚೆ ನಡೆದಿತ್ತು. ಈ ಹಿಂದೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರುಗಳು ಪ್ರಶಾಂತ್ ಕಿಶೋರ್ ಜತೆ ಕೆಲಸ ಮಾಡಿದ್ದು, ಮೂಲಗಳ ಪ್ರಕಾರ ಪಕ್ಷ ಸೇರ್ಪಡೆಗೆ ಉಭಯ ನಾಯಕರಿಂದ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ಆದರೆ ಹಿರಿಯ ನಾಯಕರು ಮಾತ್ರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಪ್ರಶಾಂತ್ ಸೇರ್ಪಡೆಗೆ ಉತ್ಸುಕರಾಗಿದ್ದು, ಇದರಿಂದ ಪಕ್ಷಕ್ಕೆ ಹೊಸ ಶಕ್ತಿ ಬರಲಿದೆ ಎಂದು ಆಶಿಸಿದ್ದಾರೆ. ಆದರೆ ಇತರರು ಮಾತ್ರ ಈ ರೀತಿಯ ವೈಲ್ಡ್ ಕಾರ್ಡ್ ಎಂಟ್ರಿಯಿಂದ ಪಕ್ಷಕ್ಕೆ ಲಾಭವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಾಂಧಿಗಳು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜತೆ ಸಂವಾದ ನಡೆಸಬೇಕು. ಇದನ್ನು ನಿಲ್ಲಿಸಿಯೇ ಬಿಟ್ಟಿದ್ದಾರೆ ಎಂಬ ಅಭಿಪ್ರಾಯವನ್ನು ಇವರುಗಳು ವ್ಯಕ್ತಪಡಿಸಿದ್ದಾರೆ. ಪ್ರಶಾಂತ್ ಕಿಶೋರ್ ಅವರು, ಕಾಂಗ್ರೆಸ್ ಪಕ್ಷದ ಉನ್ನತಿಗೆ ಹಲವು ಯೋಜನೆಗಳನ್ನು ಹಂಚಿಕೊಂಡಿದ್ದು, ರ್ಯಾಲಿಗಳು, ವಿರೋಧ ಪಕ್ಷಗಳ ಜತೆಗಿನ ಸಭೆಗಳು, ಇತರ ಯೋಜನೆಗಳನ್ನು ಪಕ್ಷದ ನಾಯಕರ ಮುಂದಿಟ್ಟಿದ್ದಾರೆ. ಆದರೆ, 'ಪ್ರಶಾಂತ್ ಕಿಶೋರ್ ಮಾಂತ್ರಿಕ ಹಸ್ತ ಹೊಂದಿಲ್ಲ' ಎಂದು ಕೆಲವು ನಾಯಕರು ಹೇಳಿದ್ದು, ಅವರಿಗೆ ಕಾಂಗ್ರೆಸ್ನ ಸಂಸ್ಕೃತಿ ಮತ್ತು ನಡತೆಗೆ ಒಗ್ಗಿಕೊಳ್ಳುವುದು ಕಷ್ಟವಾಗಬಹುದು ಎಂದೂ ಹೇಳಿದ್ದಾರೆ. ಇನ್ನೊಂದು ಕಡೆ ಅಹ್ಮದ್ ಪಟೇಲ್ ನಿಧನದ ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷವನ್ನು ಮತ್ತೆ ಮುನ್ನಲೆಗೆ ತರಲು ಸಲಹೆಗಾರರ ಹುಡುಕಾಟದಲ್ಲಿಯೂ ಇದ್ದಾರೆ. ಇದೇ ವೇಳೆ ಪ್ರಶಾಂತ್ ಕಿಶೋರ್ ಹೆಸರೂ ಕೂಡ ಚರ್ಚೆಗೆ ಬಂದಿದ್ದು, ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ. ಹಾಗೆ ನೋಡಿದರೆ ಕಾಂಗ್ರೆಸ್ ಜತೆಗಿನ ಪ್ರಶಾಂತ್ ಕಿಶೋರ್ ಸಂಬಂಧ ಅಷ್ಟಕಷ್ಟೆ. ಪ್ರಶಾಂತ್ ಸಲಹೆಯಲ್ಲಿ ಮುನ್ನಡೆದ ಪಕ್ಷ ಪಂಜಾಬ್ನಲ್ಲಿ ಗೆಲುವು ಸಾಧಿಸಿದರೂ, ಉತ್ತರ ಪ್ರದೇಶದಲ್ಲಿ ಹೀನಾಯ ಸೋಲು ಕಂಡಿತ್ತು. ಇದು ಪ್ರಶಾಂತ್ ಪಾಲಿನ ಏಕೈಕ ಸೋಲು ಕೂಡ ಹೌದು. ಜತೆಗವರು ಕಾಂಗ್ರೆಸ್ನ ಮಂದಗತಿಯ ನಡೆಯ ಬಗ್ಗೆಯೂ ಹಲವು ಬಾರಿ ಟೀಕೆಗಳನ್ನು ಮಾಡಿದ್ದರು. ಇತ್ತೀಚಿನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಮೇನಲ್ಲಿ ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರಶಾಂತ್ ಕಿಶೋರ್, “ಕಾಂಗ್ರೆಸ್ 100 ವರ್ಷಗಳ ಹಳೆಯ ಪಕ್ಷ. ಅದಕ್ಕೆ ಅದರದ್ದೇ ಆದ ರೀತಿ ನೀತಿಗಳಿವೆ. ಪ್ರಶಾಂತ್ ಕಿಶೋರ್ ಅಥವಾ ಇತರರು ಸೂಚಿಸಿದ ರೀತಿಯಲ್ಲಿ ಕೆಲಸ ಮಾಡಲು ಅವರು ಮುಕ್ತರಾಗಿಲ್ಲ. ನನ್ನ ಕಾರ್ಯ ಶೈಲಿಯೊಂದಿಗೆ ಕೆಲಸ ಮಾಡಲು ಅವರು ಮುಕ್ತರಾಗಿಲ್ಲ,” ಎಂದು ಹೇಳಿದ್ದರು. ಕಾಂಗ್ರೆಸ್ನಲ್ಲಿ "ಸಮಸ್ಯೆ ಇದೆ ಎಂಬುದನ್ನು ಅವರು ಅರಿತುಕೊಳ್ಳಬೇಕು, ನಂತರವಷ್ಟೇ ಏನಾದರೂ ಮಾಡಲು ಸಾಧ್ಯ," ಎನ್ನುವಂತೆ ಪ್ರಶಾಂತ್ ಕಿಶೋರ್ ಹೇಳಿದ್ದರು. ಇದೀಗ ಅದೇ ಪ್ರಶಾಂತ್ ಕಿಶೋರ್ ಕಾಂಗ್ರೆಸ್ನ ಬಾಗಿಲಲ್ಲಿ ನಿಂತಿದ್ದಾರೆ. ಒಳ ಹೋಗುತ್ತಾರಾ, ಇಲ್ವಾ? ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಒಳ ಹೋದರೆ ಯಾರು ಯಾರಿಗೆ ಒಗ್ಗಿಕೊಳ್ತಾರೆ? ಕಾಂಗ್ರೆಸ್ ತನ್ನ ಸಮಸ್ಯೆಯನ್ನು ಅರಿತುಕೊಂಡು ಪರಿಹಾರ ಕಂಡುಕೊಳ್ಳುತ್ತಾ? ಎಲ್ಲವನ್ನೂ ಕಾಲವೇ ನಿರ್ಧರಿಸಲಿದೆ.
from India & World News in Kannada | VK Polls https://ift.tt/3DDSGCb