ಕೋಲ್ಕತ್ತಾ: 2019-20ನೇ ಸಾಲಿನ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತಾದ ಈಡೆನ್ ಗಾರ್ಡೆನ್ಸ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ವಿರುದ್ದ 174 ರನ್ ಅಂತರದ ಹೀನಾಯ ಸೋಲಿಗೆ ಶರಣಾಗಿರುವ ತಂಡದ ಟ್ರೋಫಿ ಕನಸು ಭಗ್ನಗೊಂಡಿದೆ. ಇದರೊಂದಿಗೆ ಸತತ ಮೂರನೇ ವರ್ಷವೂ ಸೆಮಿಫೈನಲ್ ಹಂತದಿಂದಲೇ ನಿರ್ಗಮನದ ಹಾದಿ ಹಿಡಿದಿದೆ. ಕರ್ನಾಟಕ ಕೊನೆಯದಾಗಿ 2014/15 ಹಾಗೂ 2013/14ನೇ ರಣಜಿ ಆವೃತ್ತಿಗಳಲ್ಲಿ ಸತತ ಎರಡು ಬಾರಿ ಚಾಂಪಿಯನ್ ಪಟ್ಟ ಆಲಂಕರಿಸಿತ್ತು. ಅತ್ತ 2007ನೇ ಇಸವಿಯ ಬಳಿಕ ಇದೇ ಮೊದಲ ಬಾರಿಗೆ ಬಂಗಾಳ ಫೈನಲ್ ಹಂತಕ್ಕೆ ಪ್ರವೇಶಿಸಿದೆ. ಪಂದ್ಯಶ್ರೇಷ್ಠ: ಅನುಸ್ತೂಪ್ ಮುಜುಮ್ದಾರ್ 325 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಕರ್ನಾಟಕ ಮೂರನೇ ದಿನದಂತ್ಯಕ್ಕೆ 98/3 ಎಂಬ ಸ್ಥಿತಿಯಲ್ಲಿತ್ತು. ಆದರೆ ಇಲ್ಲಿಂದ ಬಳಿಕವೂ ಪರಿಸ್ಥಿತಿ ಭಿನ್ನವಾಗಿಲ್ಲ. ಮುಕೇಶ್ ಕುಮಾರ್ ಮಾರಕ ದಾಳಿಗೆ ತತ್ತರಿಸಿದ ಕರ್ನಾಟಕ 55.3 ಓವರ್ಗಳಲ್ಲಿ 177 ರನ್ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ನಾಲ್ಕನೇ ದಿನದಾಟದ ಆರಂಭದಲ್ಲಿ ಕ್ರೀಸಿನಲ್ಲಿದ್ದ ದೇವದತ್ ಪಡಿಕ್ಕಲ್ ಹಾಗೂ ಮನೀಶ್ ಪಾಂಡೆ ಕರ್ನಾಟಕ ತಂಡದ ಭರವಸೆಯಾಗಿದ್ದರು. ಆದರೆ ಮನೀಶ್ ಪಾಂಡೆ (12) ಹೊರದಬ್ಬಿದ ಮುಕೇಶ್ ಕುಮಾರ್ ಬಲವಾದ ಆಘಾತ ನೀಡಿದರು. ಇಲ್ಲಿಂದ ಬಳಿಕ ಕರ್ನಾಟಕ ಚೇತರಿಸಿಕೊಳ್ಳಲೇ ಇಲ್ಲ. ಕೃಷ್ಣಮೂರ್ತಿ ಸಿದ್ಧಾರ್ಥ್ ಹಾಗೂ ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ಖಾತೆ ತೆರೆಯುವಲ್ಲಿ ವಿಫಲಾವದರು. ಈ ನಡುವೆ ಸೆಟ್ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಕೂಡಾ ಹೋರಾಟ ಕೊನೆಗೊಳಿಸಿದರು. 129 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ ಏಳು ಬೌಂಡರಿಗಳಿಂದ 62 ರನ್ ಗಳಿಸಿದರು. ಇನ್ನುಳಿದಂತೆ ಕೆಳ ಕ್ರಮಾಂಕದಲ್ಲಿ, ಅಭಿಮನ್ಯು ಮಿಥುನ್ (38), ಕೃಷ್ಣಪ್ಪ ಗೌತಮ್ (22), ರೋನಿತ್ ಮೋರೆ (16) ಹಾಗೂ ಪ್ರಸಿದ್ಧ ಕೃಷ್ಣ (2*) ರನ್ ಗಳಿಸಿದರು. ಬಂಗಾಳ ಪರ ಮುಕೇಶ್ ಕುಮಾರ್ 61 ರನ್ ತೆತ್ತು ಆರು ವಿಕೆಟ್ ಕಿತ್ತು ಮಿಂಚಿದರು. ಕೆಎಲ್ ರಾಹುಲ್, ಮನೀಶ್ ಪಾಂಡೆ, ಕರುಣ್ ನಾಯರ್, ರವಿ ಕುಮಾರ ಸಮರ್ಥ್ ಹೀಗೆ ಪ್ರಬಲ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಹೊರತಾಗಿಯೂ ಕರ್ನಾಟಕಕ್ಕೆ ಪಂದ್ಯ ಗೆಲ್ಲಲಾಗಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ಬಂಗಾಳಕ್ಕೆ 190 ರನ್ಗಳ ಬೃಹತ್ ಮುನ್ನಡೆ ಬಿಟ್ಟುಕೊಟ್ಟಿರುವುದು ಹಿನ್ನೆಡೆಯಾಗಿ ಪರಿಣಮಿಸಿತ್ತು. ಬಂಗಾಳ ಪರ ಮೊದಲ ಇನ್ನಿಂಗ್ಸ್ನಲ್ಲಿ ಅಜೇಯ ಶತಕ ಬಾರಿಸಿದ ಅನುಸ್ತೂಪ್ ಮುಜುಮ್ದಾರ್ (149*) ದ್ವಿತೀಯ ಇನ್ನಿಂಗ್ಸ್ನಲ್ಲೂ 41 ರನ್ಗಳ ಅಮೂಲ್ಯ ಇನ್ನಿಂಗ್ಸ್ ಕಟ್ಟಿದರು. ಬಳಿಕ ಯುವ ವೇಗದ ಬೌಲರ್ ಇಶಾನ್ ಪೊರೆಲ್ ಮಾರಕ ದಾಳಿಗೆ ತತ್ತರಿಸಿದ (39ಕ್ಕೆ 5 ವಿಕೆಟ್) ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 122 ರನ್ಗಳಿಗೆ ಆಲೌಟ್ ಆಯಿತು. ದ್ವಿತೀಯ ಇನ್ನಿಂಗ್ಸ್ನಲ್ಲಿ ಮುಕೇಶ್ ಕುಮಾರ್ ಆರು ವಿಕೆಟ್ ಪಡೆಯುವುದರೊಂದಿಗೆ ಕರ್ನಾಟಕದ ಗೆಲುವಿನ ಆಸೆ ಕಣ್ಮರೆಯಾಯಿತು. ಸಂಕ್ಷಿಪ್ತ ಸ್ಕೋರ್ ಇಂತಿದೆ: ಬಂಗಾಳ ಮೊದಲ ಇನ್ನಿಂಗ್ಸ್ 312ಕ್ಕೆ ಆಲೌಟ್ (ಅನುಸ್ತೂಪ್ ಮುಜುಮ್ದಾರ್ 149, ರೋನಿತ್ ಮೋರೆ 52/3) ಕರ್ನಾಟಕ ಮೊದಲ ಇನ್ನಿಂಗ್ಸ್ 122ಕ್ಕೆ ಆಲೌಟ್ (ಕೆ ಗೌತಮ್ 31, ಇಶಾನ್ ಪೊರೆಲ್ 39/5) ಬಂಗಾಳ ದ್ವಿತೀಯ ಇನ್ನಿಂಗ್ಸ್ 161ಕ್ಕೆ ಆಲೌಟ್ (ಸುದೀಪ್ ಚಟರ್ಜಿ 45, ಅಭಿಮನ್ಯು ಮಿಥುನ್ 23/4) ಕರ್ನಾಟಕ ದ್ವಿತೀಯ ಇನ್ನಿಂಗ್ಸ್ 177ಕ್ಕೆ ಆಲೌಟ್ (ದೇವದತ್ ಪಡಿಕ್ಕಲ್ 62, ಮುಕೇಶ್ ಕುಮಾರ್ 61/6) ಕಳೆದೊಂದು ದಶತಕದಲ್ಲಿ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಸಾಧನೆಗಳು: 2019/20: ಸೆಮಿಫೈನಲ್ 2018/19: ಸೆಮಿಫೈನಲ್ 2017/18: ಸೆಮಿಫೈನಲ್ 2016/17: ಕ್ವಾರ್ಟರ್ ಫೈನಲ್ 2015/16: ಲೀಗ್ ಹಂತ 2014/15: ಚಾಂಪಿಯನ್ 2013/14: ಚಾಂಪಿಯನ್ 2012/13: ಕ್ವಾರ್ಟರ್ ಫೈನಲ್ 2011/12: ಕ್ವಾರ್ಟರ್ ಫೈನಲ್ 2010/11: ಸೆಮಿಫೈನಲ್ 2009/10: ರನ್ನರ್ ಅಪ್
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/38jXlZ0