ಚಮಿಕಾ ಕರುಣಾರತ್ನೆಗೆ ಬ್ಯಾಟ್‌ ಗಿಫ್ಟ್‌ ನೀಡಿ ಅಭಿಮಾನಿಗಳ ಹೃದಯ ಗೆದ್ದ ಹಾರ್ದಿಕ್‌!

ಕೊಲಂಬೊ: ಪ್ರವಾಸದಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ, ಮೊದಲನೇ ಟಿ20 ಪಂದ್ಯದಲ್ಲಿಯೂ ಬ್ಯಾಟಿಂಗ್‌ನಲ್ಲಿ ಮತ್ತೊಮ್ಮೆ ಹಿನ್ನಡೆ ಅನುಭವಿಸಿದರು. ಇದರ ಹೊರತಾಗಿಯೂ ಭಾನುವಾರದ ಪಂದ್ಯದಲ್ಲಿ ಎರಡು ಕಾರಣಗಳಿಂದ ಕ್ರಿಕೆಟ್‌ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಇಲ್ಲಿನ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ, ಸೂರ್ಯಕುಮಾರ್‌ ಯಾದವ್‌ ಅರ್ಧಶತಕ ಹಾಗೂ ನಾಯಕ ಶಿಖರ್ ಧವನ್‌ (46 ರನ್‌) ಅವರ ಬ್ಯಾಟಿಂಗ್‌ ನೆರವಿನಿಂದ ತನ್ನ ಪಾಲಿನ 20 ಓವರ್‌ಗಳಿಗೆ ಐದು ವಿಕೆಟ್‌ ನಷ್ಟಕ್ಕೆ 164 ರನ್‌ ಕಲೆ ಹಾಕಿತ್ತು. ಇದರಲ್ಲಿ ಹಾರ್ದಿಕ್‌ 12 ಎಸೆತಗಳಲ್ಲಿ ಕೇವಲ 10 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಬಳಿಕ 165 ರನ್‌ ಗುರಿ ಹಿಂಬಾಲಿಸಿದ ಶ್ರೀಲಂಕಾ ತಂಡ, ಭುವನೇಶ್ವರ್‌ ಕುಮಾರ್‌(22ಕ್ಕೆ 4) ಮಾರಕ ದಾಳಿಗೆ ನಲುಗಿ 18.3 ಓವರ್‌ಗಳಿಗೆ 126 ರನ್‌ಗಳಿಗೆ ಆಲೌಟ್‌ ಆಯಿತು. ಆ ಮೂಲಕ 38 ರನ್‌ಗಳ ಭಾರಿ ಅಂತರದಲ್ಲಿ ಸೋಲುಂಡಿತು. ಮೊದಲ ಪಂದ್ಯದ ಗೆಲುವಿನ ನೆರವಿನಿಂದ ಭಾರತ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಭಾನುವಾರದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರಲಿಲ್ಲ. ಆದರೆ, ಪಂದ್ಯ ಆರಂಭಕ್ಕೂ ಮುನ್ನ ಶ್ರೀಲಂಕಾ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಹಾರ್ದಿಕ್‌ ಪಂಡ್ಯ ಕೂಡ ಧನಿಗೂಡಿಸುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾದರು. ಈ ವಿಡಿಯೋ ಟ್ವಿಟರ್‌ನಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಭಾರತ ತಂಡ 38 ರನ್‌ಗಳ ಗೆಲುವು ಪಡೆದ ಬಳಿಕ ಹಾರ್ದಿಕ್‌ ಪಾಂಡ್ಯ, ತಮ್ಮ ಬ್ಯಾಟ್‌ವೊಂದನ್ನು ಶ್ರೀಲಂಕಾ ತಂಡದ ಚಮಿಕಾ ಕರುಣಾರತ್ನೆಗೆ ಕೊಡುಗೆಯಾಗಿ ನೀಡಿದರು. ಆ ಮೂಲಕ ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾದರು. ಈ ಪೋಟೋ ಟ್ವಿಟರ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಪಂದ್ಯದ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಭಾರತ ತಂಡದ ನಾಯಕ ಶಿಖರ್‌ ಧವನ್‌, ಅರ್ಧಶತಕ ಸಿಡಿಸಿದ ಸೂರ್ಯಕುಮಾರ್‌ ಯಾದವ್‌ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದರು. ಅಲ್ಲದೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನ ತಮ್ಮ ಮೊದಲ ಎಸೆತದಲ್ಲಿಯೇ ವಿಕೆಟ್‌ ಒಪ್ಪಿಸಿದ್ದ ಪೃಥ್ವಿ ಶಾಗೆ ಬೆಂಬಲ ವ್ಯಕ್ತಪಡಿಸಿದರು. ಪಂದ್ಯದ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಶಿಖರ್‌ ಧವನ್‌, "ನಮಗೆ 10 ರಿಂದ 15 ರನ್‌ ಕಡಿಮೆಯಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೂ, ನಾವು ಕಲೆ ಹಾಕಿದ್ದು ಉತ್ತಮ ಮೊತ್ತವೇ ಆಗಿತ್ತು. ಮೊದಲನೇ ಎಸೆತದಲ್ಲಿಯೇ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ ನಾವು ಉತ್ತಮವಾಗಿ ಬ್ಯಾಟ್‌ ಮಾಡಿದ್ದೇವೆ," ಎಂದರು. ನಂತರ, ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್‌ ಬಗ್ಗೆ ಮಾತನಾಡಿ,"ಪವರ್‌ಪ್ಲೇನಲ್ಲಿ 50 ರನ್‌ ಗಳಿಸಿದ್ದು ಅತ್ಯುತ್ತಮವಾಗಿತ್ತು. ಸೂರ್ಯಕುಮಾರ್ ಯಾದವ್‌ ಅದ್ಭುತ ಆಟಗಾರ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ. ಅವರ ಬ್ಯಾಟಿಂಗ್‌ ಅನ್ನು ನಾವು ಆನಂದಿಸುತ್ತೇವೆ. ಪಂದ್ಯದಲ್ಲಿ ಅವರು(ಸೂರ್ಯ) ನನ್ನಿಂದ ಒತ್ತಡವನ್ನು ಪಡೆದುಕೊಳ್ಳುತ್ತಾರೆ,' ಎಂದು ಹೇಳಿದರು. "ಶ್ರೀಲಂಕಾ ತಂಡ ಕೂಡ ಅತ್ಯುತ್ತಮವಾಗಿ ಆಡಿತ್ತು. ಆದರೆ, ನಮ್ಮ ಸ್ಪಿನ್ನರ್‌ಗಳು ಪಂದ್ಯಕ್ಕೆ ಟರ್ನಿಂಗ್ ತಂದುಕೊಡುತ್ತಾರೆಂದು ನಮಗೆ ಮೊದಲೇ ಗೊತ್ತಿತ್ತು. ಯುಜ್ವೇಂದ್ರ ಚಹಲ್‌ ಹಾಗೂ ಕೃಣಾಲ್‌ ಪಾಂಡ್ಯ ಅತ್ಯುತ್ತಮವಾಗಿ ಬೌಲ್‌ ಮಾಡಿದ್ದರು. ಜತೆಗೆ ಭುವನೇಶ್ವರ್‌ ಕುಮಾರ್‌ ಬೌಲಿಂಗ್‌ ಕೂಡ ಅದ್ಭುತವಾಗಿತ್ತು. ವರುಣ್‌ ಚಕ್ರವರ್ತಿ ಬೌಲಿಂಗ್‌ ಎದುರಿಸುವುದು ಬ್ಯಾಟ್ಸ್‌ಮನ್‌ಗಳಿಗೆ ಕಷ್ಟವಾಗಿತ್ತು. ಇದಕ್ಕೂ ಮುನ್ನ ನೆಟ್ಸ್‌ನಲ್ಲಿ ವರುಣ್‌ ಬೌಲಿಂಗ್‌ ಎದುರಿಸುವುದು ನನಗೂ ಕೂಡ ಕಠಿಣವಾಗಿತ್ತು. ಇನ್ನು ಪೃಥ್ವಿ ಶಾ ಮುಂದಿನ ಪಂದ್ಯದಲ್ಲಿ ಖಂಡಿತಾ ಕಮ್‌ಬ್ಯಾಕ್‌ ಮಾಡಲಿದ್ದಾರೆ," ಎಂದು 36 ಎಸೆತಗಳಲ್ಲಿ 46 ರನ್‌ ಗಳಿಸಿದ್ದ ಧವನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Tz0xyH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...