ಕೈ ಕೊಟ್ಟ ಮಳೆ, ಮುಂಗಾರು ಬಿತ್ತನೆಗೆ ತಡೆ; ಪೂರ್ವ ಮುಂಗಾರು ಇಳುವರಿ ಕಡಿಮೆಯಾಗುವ ಆತಂಕ!

ಶಶಿಧರ್‌ಎಸ್‌.ದೋಣಿಹಕ್ಲು, ತುಮಕೂರು: ಬರನಾಡಿಗೆ ಕೃಪೆ ತೋರಿದ್ದ ವರುಣನ ಆರ್ಭಟ ತಣ್ಣಗಾಗಿದೆ. ಉತ್ತಮ ನಿರೀಕ್ಷೆ ಹುಸಿಯಾಗಿದ್ದು, ಮುಂಗಾರು ಬಿತ್ತನೆಗೆ ಸಿದ್ಧರಾಗಿದ್ದ ರೈತರು ಆಕಾಶದತ್ತ ಮುಖಮಾಡಿ ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದಾರೆ. ಮಳೆ ಕೊರತೆಯಿಂದ ಈಗಾಗಲೇ ಪೂರ್ವ ಹಂಗಾಮಿನ ಬೆಳೆಗಳ ಇಳುವರಿ ಕಡಿಮೆಯಾಗುವ ಆತಂಕ ನಿರ್ಮಾಣವಾಗಿದೆ. ಇನ್ನೊಂದೆಡೆ ಮುಂಗಾರು ಕೃಷಿಗೆ ಹಿನ್ನಡೆ ಉಂಟಾಗಿದ್ದು, ರೈತರು ಬಿತ್ತನೆಗೆ ಮಳೆ ಬರುವಿಕೆಗೆ ಕಾಯುತ್ತಿದ್ದಾರೆ. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 699 ಮಿ.ಮೀ., ಜೂನ್‌ 30ರ ಅವಧಿಯ ವಾಡಿಕೆ 183 ಮಿ.ಮೀ. ಇದೆ. ಆದರೆ, 288 ಮಿ.ಮೀ ಅಂದರೆ ಶೇ.57 ರಷ್ಟು ಮಳೆಯಾಗಿದೆ. ಆದರೆ, ಒಂದೇ ಸಮನೆ ಅಷ್ಟೊಂದು ಮಳೆ ಸುರಿದಿದ್ದು ಬಿಟ್ಟರೆ, ನಂತರ ಮಳೆಯಾಗುತ್ತಿಲ್ಲ. ಹೀಗಾಗಿ ಪೂರ್ವ ಮುಂಗಾರಿನ ಉತ್ತಮ ಇಳವರಿ ನಿರೀಕ್ಷೆಗೆ ಹಾಗೂ ಮುಂಗಾರು ಹಂಗಾಮಿನ ಬಿತ್ತನೆಗೆ ಹೊಡೆತ ಬಿದ್ದಿದೆ. ಬಿತ್ತನೆ ಎಷ್ಟೆಷ್ಟು? ಪೂರ್ವ ಹಂಗಾಮಿನಲ್ಲಿ ಹೆಸರು, ಉದ್ದು, ಜೋಳ, ಅಲಸಂದೆ ಬಿತ್ತನೆಯಾಗಿದ್ದವು. ಪ್ರಮುಖವಾಗಿ ಹೆಸರು 8,072 ಹೆಕ್ಟೇರ್‌ ಮತ್ತು ಉದ್ದು 504 ಹೆಕ್ಟೇರ್‌ ಬಿತ್ತನೆಯಾಗಿವೆ. ಅವು ಕಟಾವು ಹಂತದಲ್ಲಿವೆ. ಮುಂಗಾರು ಹಂಗಾಮಿಗೆ ಪ್ರಮುಖವಾಗಿ ಶೇಂಗಾ ಮತ್ತು ರಾಗಿ ಸೇರಿದಂತೆ ಒಟ್ಟು 3,7,088 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ ಕೇವಲ 27,987 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. ಶೇಂಗಾ ಬಿತ್ತನೆ ಪ್ರಗತಿಯಲ್ಲಿದ್ದು, ರಾಗಿ ಬಿತ್ತನೆಗೆ ಭೂಮಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆ ಸುರಿದರೆ ಬಿತ್ತನೆ ಕಾರ್ಯಕ್ಕೆ ಚಾಲನೆ ಸಿಗಲಿದೆ. 13,597 ಕ್ವಿಂಟಾಲ್‌ ದಾಸ್ತಾನು ಜಿಲ್ಲೆಗೆ 28,751 ಕ್ವಿಂಟಾಲ್‌ ಬಿತ್ತನೆ ಬೀಜದ ಕಾರ್ಯಕ್ರಮವಿದ್ದು, 13, 597 ಕ್ವಿಂಟಾಲ್‌ ಬಿತ್ತನೆ ಬೀಜಗಳ ದಾಸ್ತಾನು ಮಾಡಿಕೊಳ್ಳಲಾಗಿದೆ. ಇದುವರೆಗೆ 3,370 ಕ್ವಿಂಟಾಲ್‌ ಬಿತ್ತನೆ ಬೀಜಗಳ ವಿತರಣೆಯಾಗಿದೆ. ಮಿಶ್ರ ಬೆಳೆಗೆ ಆದ್ಯತೆ ರೈತರು ಮಿಶ್ರ ಬೆಳೆಗೆ ಆದ್ಯತೆ ಕೊಡಬೇಕು ಎಂಬುದು ಕೃಷಿ ತಜ್ಞರ ಹಾಗೂ ಅಧಿಕಾರಿಗಳ ಸಲಹೆಯಾಗಿದೆ. ಅಂತೆಯೇ ಮುಂಗಾರು ಹಂಗಾಮಿನಲ್ಲಿ ರಾಗಿಯಲ್ಲಿ ತೊಗರಿಯನ್ನು 6 ಸಾಲಿಗೆ 1 ಸಾಲು ಅಥವಾ 8 ಸಾಲಿಗೆ 2 ಸಾಲು ಮಿಶ್ರ ಬೆಳೆಯಾಗಿ, ಮುಸುಕಿನ ಜೋಳದಲ್ಲಿ ತೊಗರಿಯನ್ನು 4 ಸಾಲಿಗೆ 1 ಸಾಲು, ರಾಗಿಯಲ್ಲಿ ಅವರೆಯನ್ನು 8 ಸಾಲಿಗೆ 1 ಸಾಲು, ನೆಲಗಡಲೆಯಲ್ಲಿ ತೊಗರಿಯನ್ನು 4 ಸಾಲಿಗೆ 1 ಸಾಲು ಅಥವಾ 8 ಸಾಲಿಗೆ 2 ಸಾಲು ಮಿಶ್ರ ಬೆಳೆಯನ್ನಾಗಿ ಬೆಳೆಯಬಹುದು. ಮುಖ್ಯಾಂಶಗಳು
  • ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ - 669 ಮಿ.ಮೀ
  • ಜೂ.30ರವರೆಗಿನ ವಾಡಿಕೆ ಮಳೆ - 183 ಮಿ.ಮೀ
  • ವಾಸ್ತವಿಕ ಮಳೆ - 288 ಮಿ.ಮೀ
  • ಗುರಿ - 3,7, 088 ಹೆಕ್ಟೇರ್‌
  • ಇದುವರೆಗಿನ ಮುಂಗಾರು ಬಿತ್ತನೆ - 27, 987 ಹೆಕ್ಟೇರ್
ಮುಂಗಾರಲ್ಲಿ 3,7,088 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಇದುವರೆಗೆ 27,987 ಹೆಕ್ಟೇರ್‌ ಬಿತ್ತನೆಯಾಗಿದೆ. ಶೇಂಗಾ ಬಿತ್ತನೆ ಪ್ರಗತಿಯಲ್ಲಿದೆ. ರಾಗಿ ಬಿತ್ತನೆಗೆ ಭೂಮಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎಂ.ಎನ್‌.ರಾಜಸುಲೋಚನ, ಜಂಟಿ ನಿರ್ದೇಶಕಿ, ಕೃಷಿ ಇಲಾಖೆ, ತುಮಕೂರು


from India & World News in Kannada | VK Polls https://ift.tt/2USI6VZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...